
ತಿರುವನಂತಪುರಂ: ಕೇರಳ ರಾಜ್ಯದ ಮಧ್ಯಭಾಗ ಹಾಗೂ ದಕ್ಷಿಣ ಭಾಗಗಳಲ್ಲಿ ಮೇಘ ಸ್ಫೋಟದಿಂದ ಭೀಕರ ಮಳೆ ಸಂಭವಿಸಿದ್ದು, ಪ್ರವಾಹಕ್ಕೆ 21ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ.
ಭೂ ಕುಸಿತದಿಂದ ಅನೇಕ ಮನೆಗಳು ಇಡಿಯಾಗಿ ಕುಸಿದು ನೀರಿನಲ್ಲಿ ಕೊಚ್ಚಿಹೋಗುತ್ತಿರುವ ದೃಶ್ಯಗಳು ಕಂಡುಬಂದಿವೆ. ಈಗಾಗಲೇ 4 ಮನೆಗಳು ಕೊಚ್ಚಿ ಹೋಗಿವೆ. ಕಳೆದ ಎರಡು ವರ್ಷಗಳ ಹಿಂದೆ ಕೇರಳದಲ್ಲಿ ಹಾಗೂ ಕರ್ನಾಟಕದ ಕೊಡಗು ಜಿಲ್ಲೆಯಲ್ಲಿ ಭೀಕರ ಮಳೆಯಾಗಿ, ಹಲವೆಡೆ ಪ್ರವಾಹ ಉಂಟಾಗಿತ್ತು. ಈಗ ಮತ್ತೆ ಅಂತಹದ್ದೇ ದೃಶ್ಯಾವಳಿಗಳು ಕಂಡುಬರತೊಡಗಿದ್ದು, ಜನರು ಭಯಭೀತರಾಗಿದ್ದಾರೆ.
ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದು, ಎಂಐ-17 ಮತ್ತು ಸಾರಂಗ್ ಹೆಲಿಕಾಪ್ಟರ್ ಗಳು ಕಾರ್ಯಾಚರಣೆಯಲ್ಲಿ ಭಾಗಿಯಾಗಿವೆ. ಕೊಟ್ಟಾಯಂ ಭಾಗದಲ್ಲಿ ಪರಿಸ್ಥಿತಿ ನಿಯಂತ್ರಣ ಕಠಿಣವಾಗಿದ್ದು, ರಕ್ಷಣಾ ಕಾರ್ಯ ಆರಂಭವಾಗಿಲ್ಲ. ಕೇಂದ್ರ ರಕ್ಷಣಾ ಪಡೆಯಿಂದ ಹೆಚ್ಚಿನ ನೆರವು ಪಡೆಯಲು ಕೇರಳ ಸರ್ಕಾರ ತೀರ್ಮಾನಿಸಿದೆ. ಪರಿಸ್ಥಿತಿ ಕುರಿತಾಗಿ ಪ್ರಧಾನಿ ಮೋದಿ ಕೇರಳ ಸಿಎಂ ಪಿಣರಾಯಿ ವಿಜಯನ್ ಜತೆ ಚರ್ಚಿಸಿದ್ದಾರೆ.



