ಮುರುಡೇಶ್ವರಕ್ಕೆ ಐಸಿಸ್ ಕಣ್ಣು : ದೇವಾಲಯಕ್ಕೆ ಪೊಲೀಸ್ ಬಿಗಿ ಭದ್ರತೆ

ಕಾರವಾರ : ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಪ್ರಸಿದ್ಧ ಮುರುಡೇಶ್ವರ ದೇವಸ್ಥಾನದ ಶಿವನ ಮೂರ್ತಿಯ ಚಿತ್ರವನ್ನು ವಿರೂಪಗೊಳಿಸಿ ಐಸಿಸ್ ನ ಪತ್ರಿಕೆ ದಿ ವಾಯ್ಸ್ ಆಪ್ ಹಿಂದ್ ನಲ್ಲಿ ಪ್ರಕಟವಾಗುತಿದ್ದಂತೆ ಇತ್ತ ಜಿಲ್ಲೆಯ ಮುರ್ಡೇಶ್ವರ ದೇವಸ್ಥಾನಕ್ಕೆ ಗೃಹ ಸಚಿವರ ಸೂಚನೆಯ ಮೇರೆಗೆ ಭದ್ರತೆ ಒದಗಿಸಲಾಗಿದೆ.
ಬುಧವಾರದಿಂದ ಜಾರಿಗೆ ಬರುವಂತೆ ಜಿಲ್ಲಾ ಪೊಲೀಸ್ ಇಲಾಖೆಯಿಂದ ಒಂದು ಪೊಲೀಸ್ ತುಕಡಿಯನ್ನು ನಿಯೋಜನೆ ಮಾಡಲಾಗಿದೆ. ದೇವಸ್ಥಾನದ ಒಳಭಾಗದಲ್ಲಿ ಎ.ಎಸ್.ಐ ಸೇರಿದಂತೆ ಹತ್ತು ಜನ ಪೊಲೀಸರನ್ನು ಭದ್ರತೆ ಹಾಗೂ ಬರುವ ಭಕ್ತರ ತಪಾಸಣೆಗೆ ನಿಯೋಜನೆ ಮಾಡಲಾಗಿದೆ.
ಇನ್ನು ಶಿವನ ವಿಗ್ರಹ ವಿರೂಪಗೊಳಿಸಿ ಪ್ರಕಟಿಸಿದ್ದಕ್ಕೆ ಮುರುಡೇಶ್ವರದಲ್ಲಿ ಐಸಿಸ್ ಪ್ರತಿಕೃತಿ ದಹನ ಮಾಡಿ ಜಿಜೆಪಿ ಯುವಮೋರ್ಚಾದಿಂದ ಪ್ರತಿಭಟನೆ ಮಾಡಿ ಮನವಿ ಸಲ್ಲಿಸಿದರು. ತಪ್ಪಿತಸ್ಥರ ವಿರುದ್ಧ ಶೀಘ್ರ ಕ್ರಮ ಜರುಗಿಸುವಂತೆ ಅವರು ಆಗ್ರಹಿಸಿದ್ದಾರೆ. ಇದಲ್ಲದೇ ಶಾಸಕರಾದ ಸುನೀಲ್ ನಾಯ್ಕ, ದಿನಕರ ಶೆಟ್ಟಿ ಅವರು ಸಹ ತಕ್ಷಣ ತನಿಖೆ ನಡೆಸಿ ತಪ್ಪಿತಸ್ಥರನ್ನು ಬಂಧಿಸುವಂತೆ ಆಗ್ರಹಿಸಿದ್ದಾರೆ.



