
ಬೆಂಗಳೂರು: ಸಂಘ ಪರಿವಾರದ ತಾಲಿಬಾನ್ ಗಿರಿಯನ್ನು ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ನೀಡಿದ ಸಂವಿಧಾನದಿಂದಲೇ ಹಿಮ್ಮೆಟ್ಟಿಸುತ್ತೇವೆ ಎಂದು ಬಿಜೆಪಿ ಶಾಸಕ ಸಿಟಿ ರವಿಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಈ ಕುರಿತು ಸರಣಿ ಟ್ವಿಟ್ ಮಾಡಿರುವ ಅವರು, ತಾವು ಮತ್ತು ತಮ್ಮಂತಹ ಕೋಟ್ಯಂತರ ಮಂದಿ ಬದುಕುತ್ತಿರುವುದು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ನೀಡಿದ ಸಂವಿಧಾನದಿಂದ ಎಂದು ಸ್ಪಷ್ಟಪಡಿಸಿದ್ದಾರೆ.
ದೇಶ ಮತ್ತು ಹಿಂದೂಗಳ ರಕ್ಷಣೆ ಮಾಡಲು ಆರ್ ಎಸ್ ಎಸ್ ನವರಿಗೆ ಗುತ್ತಿಗೆ ನೀಡಿದವರು ಯಾರು ? ಅವರೇನು ಜನರಿಂದ ಚುನಾಯಿತರಾದ ನಾಯಕರೆ? ಅವರೇಕೆ ಚುನಾವಣೆಯಲ್ಲಿ ಸ್ಪರ್ಧಿಸಬಾರದು ? ಬಿಜೆಪಿ ಮತ್ತು ಆರ್ ಎಸ್ ಎಸ್ ನಡುವೆ ಮುಖ ಮತ್ತು ಮುಖವಾಡ ಯಾವುದು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರನ್ನು ಸಿದ್ದರಾಮಯ್ಯ ಟ್ವಿಟ್ ಮೂಲಕ ತಿರುಗೇಟು ನೀಡಿದ್ದಾರೆ.
ಆರ್.ಎಸ್.ಎಸ್. ಸಾಂಸ್ಕೃತಿಕ ಸಂಘಟನೆ ಎಂದಾದರೆ ಅದರ ಸಂಸ್ಕೃತಿಯ ವ್ಯಾಖ್ಯಾನವೇನು ? ನಿನ್ನೆ ತಾನೆ ಮಂಗಳೂರಿನಲ್ಲಿ ಅಮಾಯಕ ವಿದ್ಯಾರ್ಥಿ-ವಿದ್ಯಾರ್ಥಿನಿಯರ ಮೇಲೆ ಸಂಘ ಪರಿವಾರದ ಗೂಂಡಾಗಳು ನಡೆಸಿದ ದೌರ್ಜನ್ಯತ ಕೂಡಾ ಈ ಸಂಸ್ಕೃತಿಯಲ್ಲಿ ಸೇರಿದೆಯೇ ? ಎಂದು ಅವರು ಪ್ರಶ್ನಿಸಿದ್ದಾರೆ.
ಸಿ.ಟಿ.ರವಿ ತಮ್ಮನ್ನು ತಾವು ರೈತನ ಮಗ ಎನ್ನುತ್ತಾರೆ. ನಾನು ಉಡುವ ರೈತ ಮಕ್ಕಳ ಪಂಚೆಯನ್ನು ಗೇಲಿ ಮಾಡುತ್ತಾರೆ. ರವಿ ತಂದೆ ಕೂಡ ಪಂಚೆ ಉಡುವವರು ಎಂದುಕೊಳ್ಳುತ್ತೇನೆ. ನಿಮ್ಮಂತಹ ಮಗನ ಬಗ್ಗೆ ಅವರೇನು ಅಂದುಕೊಂಡಾರು ಎಂದು ಸಿದ್ದರಾಮಯ್ಯ ಗೇಲಿ ಮಾಡಿದ್ದಾರೆ.
ಕಣ್ಣಿಗೆ ಪೊರೆ ಬಂದವರು ಕತ್ತಲಲ್ಲಿ ವಾಹನ ಓಡಿಸಬಾರದು, ಅಪಘಾತವಾಗಿ ಅಮಾಯಕರು ಜೀವ ಕಳೆದುಕೊಳ್ಳುತ್ತಾರೆ. ಪೊರೆ ಬಂದಿದ್ದರೆ ಕಾಂಟ್ರಾಕ್ಟ್ ಲೆನ್ಸ್ ಅಲವಡಿಸಿಕೊಳ್ಳಿ. ಜನರ ಜೀವ ಮುಖ್ಯ ಎಂದು ಸಿ.ಟಿ.ರವಿ ಅವರಿಗೆ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ



