
ಬೆಂಗಳೂರು: ನಾನು ನನ್ನನ್ನು ಬೇರೆಯವರಿಗೆ ಹೋಲಿಕೆ ಮಾಡಿಕೊಳ್ಳುವುದಿಲ್ಲ. ನನ್ನನ್ನ ನಾನು ಗಾಂಧಿ, ಅಂಬೇಡ್ಕರ್ ಅವರಿಗೆ ಹೋಲಿಸಿಕೊಳ್ಳಲು ಆಗುತ್ತಾ? ನನ್ನ ವ್ಯಕ್ತಿತ್ವ ಬೇರೆ, ಬೇರೆಯವರ ವ್ಯಕ್ತಿತ್ವ ಬೇರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಅಸಮಾಧಾನ ಹೊರ ಹಾಕಿದ್ದಾರೆ.
ಇಂದು ವಿಧಾನಸಭೆ ಕಲಾಪದ ವೇಳೆ ಮಾತನಾಡಿದ ಸಚಿವ ವಿ. ಸೋಮಣ್ಣ, ಸಿದ್ದರಾಮಯ್ಯನವರು ಬಿಜೆಪಿಯನ್ನು ಟೀಕಿಸುವುದು ಬೇಡ. ಬದಲಿಗೆ ದೇವರಾಜ ಅರಸು, ಬಂಗಾರಪ್ಪ, ಗೋಪಾಲಗೌಡ, ಸಾಹುಕಾರ್ ಚೆನ್ನಯ್ಯನವರ ದಾರಿಯಲ್ಲಿ ಸಾಗಲಿ. ಅವರ ರೀತಿ ಚಿಂತನೆ ಮಾಡಬೇಕು, ಮಾತಾಡಬೇಕು ಎಂದು ಸಲಹೆ ನೀಡಿದರು. ವಸತಿ ಸಚಿವ ಸೋಮಣ್ಣ ಸಲಹೆಗೆ ಕೆರಳಿ ಕೆಂಡವಾದ ಸಿದ್ದರಾಮಯ್ಯ ನಾನು ನಾನೇ, ನಾನು ಸಿದ್ದರಾಮಯ್ಯ ಮಾತ್ರ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತೀಟೆ ಮಾಡೋದಕ್ಕೆ ಸಿದ್ದರಾಮಯ್ಯ ಒಬ್ಬರೇ ಸಾಕು ಎಂದು ಹೇಳಲು ಮುಂದಾದ ಸೋಮಣ್ಣ ಅವರ ಮಾತಿಗೆ ಮತ್ತೆ ಕೋಪಗೊಂಡ ಸಿದ್ದರಾಮಯ್ಯ, ಕೂತ್ಕೊಳ್ರಿ ಸಾಕು, ನಿಮ್ಮಿಂದ ನಮಗೆ ಸರ್ಟಿಫಿಕೆಟ್ ಬೇಡ. ಐ ಆ್ಯಮ್ ಸಿದ್ದರಾಮಯ್ಯ, ನಾನು ಯಾರಂತೆಯೂ ಆಗಲ್ಲ. ಗೊತ್ತಿಲ್ವಾ ನನಗೆ ನೀನು ಏನ್ ಹೇಳ್ತಿದೀಯಾ ಎಂದು ಗರಂ ಆದರು.
