
ಬೆಂಗಳೂರು: ಬೆಂಗಳೂರಿನ ಸಮಗ್ರ ರಸ್ತೆಗಳ ದುರಸ್ತಿಯನ್ನು ಯುದ್ಧೋಪಾದಿಯಲ್ಲಿ ಕೈಗೊಳ್ಳಲಾಗುವುದು ಹಾಗೂ ಖುದ್ದಾಗಿ ತಾವೇ ಈ ಕಾರ್ಯವನ್ನು ಮೇಲ್ವಿಚಾರಣೆ ಮಾಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಅನಿರೀಕ್ಷಿತ ಮಳೆ ನಿರಂತರವಾಗಿ ಬೀಳುತ್ತಿದೆ. ಇನ್ನೂ ನಾಲ್ಕು ಐದು ದಿನಗಳ ಕಾಲ ಮಳೆಯಾಗಲಿದೆ ಎಂಬ ಸೂಚನೆಗಳಿವೆ. ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದ ಒಟ್ಟು ಪರಿಣಾಮ ಬೆಂಗಳೂರು ನಗರ ಹಾಗೂ ಕೆಲವು ಜಿಲ್ಲೆಗಳಲ್ಲಿ ಬಹಳಷ್ಟು ಆಗಿದೆ. ಈಗಾಗಲೇ ಕೆಲವು ಸಭೆ ನಡೆಸಿ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆಗಳನ್ನು ನೀಡಲಾಗಿದೆ ಎಂದರು.
ಮಳೆ ನಿಂತ ತಕ್ಷಣವೇ ತಗ್ಗು ಪ್ರದೇಶಗಳಲ್ಲಿ ಪರಿಹಾರ ಕಾರ್ಯಗಳಿಗೆ ತಂಡಗಳ ನಿಯೋಜನೆ ಹಾಗೂ ತಂಡದಲ್ಲಿ ಹೆಚ್ಚಿನ ಜನರನ್ನು ಸೇರ್ಪಡೆಗೊಳಿಸಲು ಈಗಾಗಲೇ ಸೂಚನೆ ನೀಡಲಾಗಿದೆ. ಇದಲ್ಲದೆ ಎನ್.ಡಿ.ಆರ್.ಎಫ್ ತಂಡಗಳನ್ನು ಹಾಗೂ ರಾಜ್ಯದ ಎಸ್.ಡಿ.ಆರ್.ಎಫ್ ನ ನಾಲ್ಕು ವಿಶೇಷ ತಂಡಗಳನ್ನು ಬೆಂಗಳೂರಿಗೆ ಸೀಮಿತವಾಗಿ ರಚನೆ ಮಾಡಬೇಕು ಎಂದು ಸೂಚಿಸಲಾಗಿದೆ ಎಂದು ತಿಳಿಸಿದರು.
ಮಳೆ ಬಂದಾಗ ನಿರ್ವಹಣೆ ಬಗ್ಗೆ ಇದ್ದ ಗೊಂದಲಗಳನ್ನು ನಿವಾರಿಸಲಾಗಿದ್ದು, ಮಳೆ ನಿಂತ ಕೂಡಲೇ ರಸ್ತೆ ದುರಸ್ತಿಯಾಗಬೇಕು. ನಿರ್ವಹಣೆ ಹೊತ್ತ ಸಂಸ್ಥೆ ಮಾಡದಿದ್ದರೆ, ಅವರ ಮೊತ್ತವನ್ನು ತಡೆಹಿಡಿದು, ಪಾಲಿಕೆಯೇ ಈ ಕಾರ್ಯವನ್ನು ಕೈಗೊಂಡು, ಜನರಿಗೆ ಅನಾನುಕೂಲವಾಗದಂತೆ ತಿಳಿಸಿದೆ ಎಂದು ನುಡಿದರು.
110 ಗ್ರಾಮಗಳ ಯು.ಜಿ.ಡಿ ಲೈನ್ ಗಳ ಸಮಸ್ಯೆಯನ್ನು ನಿವಾರಿಸಲು 280 ಕೋಟಿ ಮೊತ್ತದ ಟೆಂಡರ್ ಕಾರ್ಯಕ್ಕೆ ಅನುಮತಿ ನೀಡಲಾಗಿದೆ ಎಂದು ತಿಳಿಸಿದರು.



