
ಬೆಂಗಳೂರು : 8ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ ಡಿಸೆಂಬರ್ 22 ರಿಂದ ಬೆಂಗಳೂರಿನ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿದೆ. ಇದೇ ಮೊದಲ ಬಾರಿಗೆ ಎಲ್ಲ ಪಂದ್ಯಗಳೂ ಒಂದೇ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಪ್ರೇಕ್ಷಕರಿಗೆ ಪ್ರವೇಶ ನಿರಾಕರಿಸಲಾಗಿದೆ.
“ಸಾಕಷ್ಟು ಪ್ರಮಾಣದಲ್ಲಿ ಕಬಡ್ಡಿ ಅಭಿಮಾನಿಗಳನ್ನು ಹೊಂದಿರುವ ಕರ್ನಾಟಕದಲ್ಲಿ ಈ ಬಾರಿಯ ಪ್ರೊ ಕಬಡ್ಡಿ ಲೀಗ್ ಪಂದ್ಯಗಳನ್ನು ನಡೆಸುತ್ತಿರುವುದು ಹೆಮ್ಮೆಯ ಸಂಗತಿ. ಬೆಂಗಳೂರಿನಲ್ಲಿ ಬೃಹತ್ ಮಟ್ಟದ ಲೀಗ್ ಗಳನ್ನು ನಡೆಸಲು ಬೇಕಾಗುವ ಮೂಲಭೂತ ಸೌಕರ್ಯಗಳು ಉತ್ತಮವಾಗಿವೆ. ನಾವು ಲೀಗ್ ನಡೆಸಲು ಉತ್ಸುಕರಾಗಿದ್ದೇವೆ” ಎಂದು ಪ್ರೊ ಕಬಡ್ಡಿ ಲೀಗ್ ನ ಕಮಿಷನರ್ ಅನುಪಮ್ ಗೋಸ್ವಾಮಿ ತಿಳಿಸಿದ್ದಾರೆ.
ಕ್ರಿಕೆಟ್ ನಂತರ ಅತಿ ಹೆಚ್ಚು ಪ್ರೇಕ್ಷಕರನ್ನು ಹೊಂದಿರುವ ಲೀಗ್ ಆಗಿದ್ದು, ಕೊರೋನಾ ಕಾರಣ ಕಳೆದ ಬಾರಿ ಲೀಗ್ ನಡೆದಿರಲಿಲ್ಲ. ಇತ್ತೀಚೆಗೆ ನಡೆದ ಆಟಗಾರರ ಹರಾಜಿನಲ್ಲಿ ಪ್ರದೀಪ್ ನರ್ವಾಲ್ 1.65 ಕೋಟಿ ರೂ.ಗಳಿಗೆ ಯುಪಿ ಯೋಧಾಸ್ ಪಡೆಗೆ ಸೇರ್ಪಡೆಯಾಗಿದ್ದು, ಇದು ಲೀಗ್ ಇತಿಹಾಸದಲ್ಲೇ ಆಟಗಾರರೊಬ್ಬರು ಗಳಿಸಿದ ಬೃಹತ್ ಮೊತ್ತವಾಗಿದೆ.



