ಪಡುವಾರಳ್ಳಿ ದೇವು ಕೊಲೆ ಪ್ರಕರಣ; 11 ಮಂದಿಗೆ ಶಿಕ್ಷೆ ಪ್ರಕಟ

ಮೈಸೂರು: 2016ರಲ್ಲಿ ಪಡುವಾರಳ್ಳಿಯ ದೇವು ಕೊಲೆ ಪ್ರಕರಣಲ್ಲಿ 11 ಮಂದಿ ತಪ್ಪಿತಸ್ಥರೆಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಆದೇಶ ನೀಡಿದ್ದು, ಇಂದು ಶಿಕ್ಷೆ ಪ್ರಮಾಣವನ್ನ ಪ್ರಕಟಿಸಲಿದೆ.
ಮೈಸೂರು ನಗರದ ಪಡುವಾರಳ್ಳಿಯಲ್ಲಿ 2016ರಲ್ಲಿ ದೇವು ಅವರನ್ನ ಗುಂಪೊಂದು ಕೊಲೆ ಮಾಡಿತ್ತು. ಈ ಪ್ರಕರಣದ ಆರೋಪದ ಮೇಲೆ 29 ಮಂದಿಯ ವಿರುದ್ಧ ಜಯಲಕ್ಷ್ಮಿಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಪ್ರಕರಣವು ನಗರದಲ್ಲಿ ಸಂಚಲನ ಮೂಡಿಸಿತ್ತು.ಸರ್ಕಾರದ ಪರವಾಗಿ ಪಬ್ಲಿಕ್ ಪ್ರಾಸಿಕ್ಯುಟರ್ ಸುದೀಪ್ ಬಂಗೇರಾ ವಾದ ಮಂಡಿಸಿದ್ದರು. ಕೊಲೆ ಪ್ರಕರಣದಲ್ಲಿ 11 ಮಂದಿಯನ್ನು ತಪ್ಪಿತಸ್ಥರೆಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಆದೇಶ ನೀಡಿದೆ. ಮಾಜಿ ಪಾಲಿಕೆ ಸದಸ್ಯ ಮಹದೇಶ್ ಅಲಿಯಾಸ್ ಅವ್ವ ಮಹದೇಶ್ ಹಾಗೂ ಅವರ ಸೋದರ ಮಂಜು ಸೇರಿದಂತೆ 18 ಮಂದಿಯನ್ನು ಆರೋಪದಿಂದ ಖುಲಾಸೆಗೊಳಿಸಲಾಗಿದೆ.
ಪವನ್, ಕುಮಾರ್, ಸುನೀಲ್, ರಾಕೇಶ್, ಕಾರ್ತಿಕ್, ಮಂಜು, ಮಣಿಕಂಠ, ನಾಗೇಂದ್ರ, ಕೆ.ಎಲ್.ಸುನೀಲ್, ವಿಜಯಕುಮಾರ್, ಕೆ.ಎಂ.ರಘು, ಆರ್.ಎಕ್ಸ್ ನವೀನ್ ತಪ್ಪಿತಸ್ಥರೆಂದು ನ್ಯಾಯಾಲಯ ಪರಿಗಣಿಸಿದೆ.ಅವ್ವ ಮಹದೇಶ್ ಹಾಗೂ ಅವರ ಸೋದರ ಮಂಜು ಸೇರಿದಂತೆ ಶಿವರಾಜು, ಪದ್ಮನಾಭ, ಕಾರ್ತಿಕ, ಗುರುದತ್ತ, ಸಂತೋಷ, ಪರಮೇಶ, ಶಶಿ, ಪ್ರಮೋದ್, ನವೀನ್ ಸೇರಿದಂತೆ 18 ಮಂದಿ ಖುಲಾಸೆಗೊಂಡಿದ್ದರು.
2016ರ ಮೇ 5 ರಂದು ಪಡುವಾರಳ್ಳಿಯ ಮಾರಮ್ಮ ದೇವಸ್ಥಾನದ ಸಮೀಪದ ಟೀ ಅಂಗಡಿ ಮುಂದೆ ದೇವು ಅವರನ್ನ ಮಚ್ಚಿನಿಂದ ಬರ್ಬರವಾಗಿ ಕೊಚ್ಚಿ ಕೊಲೆ ಮಾಡಲಾಗಿತ್ತು. ಇದು ರಿಯಲ್ ಎಸ್ಟೇಟ್ ದಂಧೆಗಾಗಿ ನಡೆದ ಕೊಲೆ ಎನ್ನಲಾಗಿತ್ತು.
ಪ್ರಕರಣಕ್ಕೂ ಮುನ್ನ ಹುಣಸೂರಿನಲ್ಲಿ ಪಡುವಾರಳ್ಳಿಯ ರಾಜೇಶ್ ಹಾಗೂ ರಾಮು ಎಂಬುವವರನ್ನೂ ಕೊಲೆ ಮಾಡಲಾಗಿತ್ತು. ಈ ಎರಡೂ ಪ್ರಕರಣಗಳಲ್ಲೂ ಅವ್ವ ಮಹದೇಶ್ ಅವರು ಆರೋಪಿಯಾಗಿದ್ದರು. ಆಗಸ್ಟ್ 2018ರಲ್ಲಿ ಹೈಕೋರ್ಟ್ ಅವರನ್ನ ಜೊಡಿ ಕೊಲೆ ಪ್ರಕರಣದಲ್ಲಿ ಖುಲಾಸೆಗೊಳಿಸಿತ್ತು.
