ನಮ್ಮ ಹೋರಾಟ ಅಧಿಕಾರಕ್ಕಾಗಿ ಅಲ್ಲ, ನೆಲ-ಜಲ ರಕ್ಷಣೆಗಾಗಿ: ಡಿ.ಕೆ.ಶಿವಕುಮಾರ್

ರಾಮನಗರ: ಕಾಂಗ್ರೆಸ್ ಶಕ್ತಿಯೇ ದೇಶದ ಶಕ್ತಿ. ಕಾಂಗ್ರೆಸ್ ಶಕ್ತಿಯೇ ಇತಿಹಾಸ. ನಮ್ಮ ಹೋರಾಟ ಅಧಿಕಾರಕ್ಕಾಗಿ ಅಲ್ಲ, ಬಡಜನರಿಗಾಗಿ ನೆಲ-ಜಲ ರಕ್ಷಣೆಗಾಗಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದರು. ಜನವರಿ 9ರಿಂದ ಜನವರಿ 19ರವರೆಗೆ ಕಾಂಗ್ರೆಸ್ ಪಕ್ಷ ಕನಕಪುರದಿಂದ ಬೆಂಗಳೂರಿಗೆ ಹಮ್ಮಿಕೊಂಡಿರುವ ಮೇಕೆದಾಟು ಪಾದಯಾತ್ರೆಗೆ ಕನಕಪುರದ ಕಾವೇರಿ ಸಂಗಮದಲ್ಲಿ ಚಾಲನೆ ನೀಡಿ ಅವರು ಮಾತನಾಡಿದರು.
ಕಾಂಗ್ರೆಸ್ ನಾಯಕರಲ್ಲಿ ಹೋರಾಟ, ಛಲ ಎಂಬುದು ರಕ್ತಗತವಾಗಿ ಬಂದಿದೆ. ಮಹಾತ್ಮಗಾಂಧಿ, ನೆಹರೂ, ಇಂದಿರಾಗಾಂಧಿ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅಧ್ಯಕ್ಷರಾಗಿದ್ದರು. ರಾಜ್ಯದ ಉದ್ದಗಲಕ್ಕೂ ಹೋರಾಟ ನಡೆಯುತ್ತಿದೆ. ಪಾದಯಾತ್ರೆಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ ಎಂದು ತಿಳಿಸಿದರು.
ನಮ್ಮ ಗುರಿ ಮುಟ್ಟಲು ಜನತೆಯ ಆಶೀರ್ವಾದ ಬೇಕು. ನಮ್ಮ ನೀರು ನಮ್ಮ ಹಕ್ಕು. ಮೇಕೆದಾಟು ಹೋರಟಕ್ಕೆ ಜಯವಾಗಲಿ, ಪಾದಯಾತ್ರೆಯಲ್ಲಿ ಬಂದು ಭಾಗವಹಿಸಿ, ಪ್ರೋತ್ಸಾಹ, ಬೆಂಬಲ ನೀಡಿ ಎಂದು ಮನವಿ ಮಾಡಿದರು.
ಮೇಕೆದಾಟು ಯೋಜನೆಗೆ ಒತ್ತಾಯಿಸಿ ಪಾದಯಾತ್ರೆ ಕೈಗೊಂಡಿರುವ ಉದ್ದೇಶ ಬೆಂಗಳೂರು ಮತ್ತು ಸುತ್ತುಮುತ್ತಲ ಪ್ರದೇಶಗಳ ಜನರಿಗೆ ಕುಡಿಯುವ ಮತ್ತು ಅಗತ್ಯ ಕೆಲಸಗಳಿಗೆ ನೀರು ಒದಗಿಸಲು. ಎರಡೂವರೆ ಕೋಟಿ ಜನರು ಈ ನೀರಿನಿಂದಲೇ ಬದುಕುತ್ತಿದ್ದಾರೆ. ಕರ್ನಾಟಕದಲ್ಲಿ 26 ಅಣೆಕಟ್ಟುಗಳಿವೆ. ಆ ಪೈಕಿ 20 ಅಣೆಕಟ್ಟುಗಳನ್ನು ಕಾಂಗ್ರೆಸ್ ಸರ್ಕಾರ ಕಟ್ಟಿಸಿದೆ ಎಂದರು.



