ಮಂಗಳೂರು-ಬೆಂಗಳೂರು ಮಾರ್ಗದಲ್ಲಿ ವಿಶೇಷ ರೈಲು ಸಂಚಾರ

ಚಿಕ್ಕಮಗಳೂರು: ಮಂಗಳೂರು ಮತ್ತು ಬೆಂಗಳೂರು ನಡುವೆ ಹೊಸ ಮಾದರಿಯ ವಿಸ್ಟಾಡೋಮ್ ಕೋಚ್ ಹೊಂದಿರುವ ರೈಲು ಇಂದಿನಿಂದ ಸಂಚಾರ ಆರಂಭಿಸಿದೆ.
ಈ ವಿಶೇಷ ರೈಲು ವಾರಕ್ಕೆ ಮೂರು ಬಾರಿ ಬೆಂಗಳೂರಿನಿಂದ ಬೆಳಗ್ಗೆ 7 ಗಂಟೆಗೆ ಹೊರಟು ಸಂಜೆ 5ಕ್ಕೆ ಮಂಗಳೂರು ತಲುಪಲಿದೆ. ಹಾಗೆಯೇ ಮಂಗಳೂರು ಜಂಕ್ಷನ್ನಿಂದ ಬೆಳಗ್ಗೆ 11-30ಕ್ಕೆ ಹೊರಟು ರಾತ್ರಿ 8-30ಕ್ಕೆ ಯಶವಂತಪುರ ತಲುಪಲಿದೆ. ಒಟ್ಟು 44 ಆಸನಗಳಿರುವ ಬೋಗಿಯಲ್ಲಿ ಬೆಂಗಳೂರಿನಿಂದ ಮಂಗಳೂರಿಗೆ ಟಿಕೆಟ್ ದರ ರೂ.1395 ನಿಗದಿಪಡಿಸಲಾಗಿದೆ.

ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿರುವ ಕೋಚ್ನಲ್ಲಿ ಸ್ವಯಂ ಚಾಲಿತ ಬಾಗಿಲು, ಜೈವಿಕ ಶೌಚಾಲಯಗಳು, ವಿಂಡೋಸ್ಗಳಿಗೆ ಗಾಜು ಅಳವಡಿಸಲಾಗಿದೆ. ಗಾಜಿನ ಮೇಲ್ಚಾವಣಿಯನ್ನೂ ಹೊಂದಿದ್ದು, ಸಂಪೂರ್ಣ ಹವಾನಿಯಂತ್ರಿತವಾಗಿದೆ. ರೈಲಿನ ಪ್ರತೀ ಸೀಟ್ ನಲ್ಲಿ ಮೊಬೈಲ್ ಚಾರ್ಜರ್, ಎಲ್ಇಡಿ, ಓವನ್, ಫ್ರಿಡ್ಜ್, ಮಿನಿ ಪ್ಯಾಂಟ್ರಿ, ಸ್ಟೀಲ್ ಲಗೇಜ್ ಕಪಾಟು ಹೊಂದಿದೆ. ಪ್ರಯಾಣಿಕರ ಸುರಕ್ಷತೆ ಹಾಗೂ ಸ್ವಚ್ಛತೆಗೆ ಆದ್ಯತೆ ನೀಡಲಾಗಿದೆ.
ರೈಲಿನಲ್ಲಿ ಕುಳಿತುಕೊಂಡೇ ಹೊರಗಿನ ಪ್ರಕೃತಿ ಸೌಂದರ್ಯವನ್ನು ಸವಿಯುವವರಿಗೆ ವರದಾನವಾದಂತಿದೆ. ಹಾಸನ ದಾಟಿ ಸಕಲೇಶಪುರದಲ್ಲಿ ಹಾದುಹೋಗುವಾಗ ಪಶ್ಚಿಮ ಘಟ್ಟದ ನಡುವೆ ಸುಮಾರು 55 ಕಿ.ಮೀವರೆಗೆ ಕಾಡು, ಪರ್ವತಶ್ರೇಣಿ, ಜಲಪಾತ, ಸುರಂಗ, ಸೇತುವೆಗಳು, ಸ್ವರ್ಗದಂತಹ ಪ್ರಾಕೃತಿಕ ಸೌಂದರ್ಯವನ್ನು ಗಾಜಿನ ವಿಂಡೋಗಳಿಂದ ಪ್ರಯಾಣಿಕರು ಆಸ್ವಾದಿಸಬಹುದಾಗಿದೆ. ಪ್ರವಾಸಿ ತಾಣಗಳನ್ನು ಸಂಪರ್ಕಿಸುವ ರೈಲುಗಳಲ್ಲಿ ಇಂತಹ ವಿಸ್ಟಾಡೋಮ್ ಕೋಚ್ ಅಳವಡಿಸಲಾಗಿದೆ.
