ನಬಾಬ್ ಮಲಿಕ್ ಅಳಿಯನ ಜಾಮೀನು ಪ್ರಶ್ನಿಸಲಿರುವ ಎನ್ಸಿಬಿ; ಮತ್ತಷ್ಟು ಸಂಘರ್ಷದ ಸುಳಿವು

ಮುಂಬೈ: ಆರ್ಯನ್ ಖಾನ್ ಪ್ರಕರಣ ಸೇರಿದಂತೆ ಆರು ಪ್ರಕರಣಗಳ ತನಿಖೆಯಿಂದ ಎನ್ಸಿಬಿ ಅಧಿಕಾರಿ ಸಮೀರ್ ವಾಂಖೆಡೆ ಅವರನ್ನು ಹೊರಕಳಿಸಲಾಗಿರುವ ಬೆಳವಣಿಗೆ ರಾಜಕೀಯ ಬಣ್ಣ ಪಡೆಯುವ ಸೂಚನೆಗಳು ಸ್ಪಷ್ಟವಾಗುತ್ತಿವೆ.
ವಾಂಖೆಡೆ ಕೈತಪ್ಪಿದ ಆರು ಪ್ರಕರಣಗಳಲ್ಲಿ, ಮಹಾರಾಷ್ಟ್ರ ಮಂತ್ರಿ ನವಾಬ್ ಮಲ್ಲಿಕ್ ಅಳಿಯ ಸಮೀರ್ ಖಾನ್ ವಿರುದ್ಧದ ಡ್ರಗ್ ಕೇಸ್ ಕೂಡ ಸೇರಿದ್ದು, ಇದೀಗ ಎಲ್ಲ ಆರು ಪ್ರಕರಣಗಳು ಹಿರಿಯ ಪೊಲೀಸ್ ಅಧಿಕಾರಿ ಸಂಜಯ್ ಸಿಂಗ್ ನೇತೃತ್ವದ ವಿಶೇಷ ತನಿಖಾ ತಂಡಕ್ಕೆ ವರ್ಗಾವಣೆಯಾಗಿವೆ.
ನವಾಬ್ ಮಲಿಕ್ ಅಳಿಯ ಸಮೀರ್ ಖಾನ್ ಜಾಮೀನು ರದ್ದುಗೊಳಿಸಲು ಕೋರಿ ಕೋರ್ಟ್ ಮೆಟ್ಟಿಲೇರಲು ಎಸ್ಐಟಿ ಮುಂದಾಗಿರುವುದು ಹೊಸ ಬೆಳವಣಿಗೆ. ಇದರೊಂದಿಗೆ, ಇನ್ನಷ್ಟು ರಾಜಕೀಯ ಸಂಘರ್ಷದ ಸಾಧ್ಯತೆ ನಿಚ್ಚಳವಾಗಿದೆ.
ಈಗ ಎನ್ಸಿಬಿ ಮುಂಬೈ ಘಟಕದಿಂದ ವರ್ಗಾವಣೆಯಾಗಿರುವ ಸಮೀರ್ ವಾಂಖೆಡೆ ವಿರುದ್ಧ ಸತತ ಆರೋಪ ಮಾಡಿದ್ದವರು ಮತ್ತು ವಾಗ್ದಾಳಿ ನಡೆಸಿದ್ದವರು ನವಾಬ್ ಮಲಿಕ್. ಅಳಿಯ ಸಮೀರ್ ಖಾನ್ನನ್ನು ಬಂಧಿಸಿದ್ದ ಬಳಿಕ ಎನ್ಸಿಬಿ ಮತ್ತು ವಂಖೆಡೆ ವಿರುದ್ಧ ಮಲಿಕ್ ಆರೋಪಗಳನ್ನು ಮಾಡುತ್ತಲೇ ಬಂದಿದ್ದರು. ಆರ್ಯನ್ ಖಾನ್ ಬಂಧನದ ಬಳಿಕ ಪ್ರತಿಕ್ರಿಸಿದ್ದ ಮಲಿಕ್, ಬಾಲಿವುಡ್ ಮತ್ತು ಮಹಾರಾಷ್ಟ್ರದ ಇಮೇಜ್ನ್ನು ನಾಶಗೊಳಿಸುವ ಕೆಲಸ ಮಾಡುತ್ತಿದೆ ಎಂದು ಎನ್ಸಿಬಿ ವಿರುದ್ಧ ಹರಿಹಾಯ್ದಿದ್ದರು.
ಇತ್ತೀಚೆಗಷ್ಟೇ ಅವರು ವಾಂಖೆಡೆ ಸಹೋದರಿ ಮತ್ತು ಕುಖ್ಯಾತ ಮಾದಕವಸ್ತು ಕಳ್ಳಸಾಗಣೆದಾರರ ನಡುವಿನದ್ದೆನ್ನಲಾದ ವಾಟ್ಸ್ಯಾಪ್ ಚಾಟ್ಗಳನ್ನು ಹಂಚಿಕೊಂಡಿದ್ದರು. ಎನ್ಸಿಬಿ ಅಧಿಕಾರಿ ನೇತೃತ್ವದ ಖಾಸಗಿ ಸೇನೆ ಎಂದು ಎನ್ಸಿಬಿಯನ್ನು ಟೀಕಿಸಿದ್ದರುಮಾತ್ರವಲ್ಲ, ನಟರನ್ನು ಬಲೆಗೆ ಬೀಳಿಸಿ ಹಣ ವಸೂಲಿ ಮಾಡುತ್ತಿದೆ ಎಂಬುದಕ್ಕೆ ಈ ಸಂಭಾಷಣೆ ಸಾಕ್ಷಿಯಾಗಿದೆ ಎಂದಿದ್ದರು.
ಇದೆಲ್ಲದರ ನಡುವೆ, ಮಲಿಕ್ ಅಳಿಯನ ಜಾಮೀನು ಪ್ರಶ್ನಿಸಿ ಕೋರ್ಟ್ ಮೊರೆಹೋಗಲು ಎಸ್ಐಟಿ ಕಳೆದ ತಿಂಗಳೇ ನಿರ್ಧರಿಸಿತ್ತು. ಆದರೆ ಈಗ ಅದು ಹೊಸ ಬಣ್ಣ ಪಡೆದುಕೊಳ್ಳಲಿದೆ.
