
ರಾಮನಗರ: ಕನ್ನಡಪರ ಸಂಘಟನೆಗಳು ಹೊಸ ವರ್ಷದ ಮುನ್ನಾ ದಿನವಾದ ಡಿ.31ರಂದು ಕರೆ ನೀಡಿರುವ ಕರ್ನಾಟಕ ಬಂದ್ ಅಗತ್ಯವಿಲ್ಲ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದ್ದಾರೆ. ಚನ್ನಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ಎಂ ಇ ಎಸ್ ಸಂಘಟನೆ ಬಗ್ಗೆ ಕಠಿಣ ಕ್ರಮವಹಿಸುತ್ತದೆ . ಬೆಳಗಾವಿ ಶಾಂತವಾಗಿದೆ. ಆದರೆ ಈಗ ಮತ್ತೆ ನಾವು ಬಂದ್ ಮಾಡಿ ಕೆದಕುವುದು ಬೇಡ ಎಂದರು.
ಜನವರಿಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಬದಲಾವಣೆ ವಿಚಾರ ಕುರಿತು ಪ್ರತಿಕ್ರಿಯಿಸಿ ಈಗಾಗಲೇ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಯಾವುದೇ ಕಾರಣಕ್ಕೂ ಸಿಎಂ ಬದಲಾವಣೆ ಇಲ್ಲ ಎಂದು ಸ್ಪಷ್ಟಪಡಿಸಿದ್ಧಾರೆ. ಈ ಬಗ್ಗೆ ಗೊಂದಲ ಅನಗತ್ಯ ಎಂದರು.
ಕಾಂಗ್ರೆಸ್ ಸೇರುವುದಿಲ್ಲ
ಬಿಜೆಪಿ ತ್ಯಜಿಸುವ ಕುರಿತು ಪ್ರತಿಕ್ರಿಯಿಸಿ ಚನ್ನಪಟ್ಟಣದಲ್ಲಿ ಸ್ಪಷ್ಟನೆ ನೀಡಿದ ಎಸ್.ಟಿ.ಸೋಮಶೇಖರ್ , ನಾನು ಬಿಜೆಪಿ ಪಕ್ಷ ಬಿಡುವ ಸನ್ನಿವೇಶ ಇಲ್ಲ. ಆಗ , ಕಾರಣಾಂತರದಿಂದ ಕಾಂಗ್ರೆಸ್ ಬಿಡಬೇಕಾಯ್ತು ಮತ್ತೆ ಕಾಂಗ್ರೆಸ್ ಗೆ ಹೋಗುವ ಪ್ರಮೇಯ ಇಲ್ಲ ಎಂದು ಸ್ಪಷ್ಟಪಡಿಸಿದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನನಗೆ ಆತ್ಮೀಯ ಸ್ನೇಹಿತರು . ನಮ್ಮ ವಯಕ್ತಿಕ ವಿಶ್ವಾಸ ಚೆನ್ನಾಗಿದೆ ಆದರೆ ರಾಜಕೀಯ ವಿಶ್ವಾಸ ನಮಗಿಲ್ಲ. ನನ್ನ ರಾಜಕೀಯ ಬೆಳವಣಿಗೆಗೆ ಅವರೂ ಸಹಾಯ ಮಾಡಿದ್ದಾರೆ. ಕಾಂಗ್ರೆಸ್ ಸೇರಲು ನನಗವರು ಆಹ್ವಾನಿಸಿಲ್ಲ. ನಾನು ಕಾಂಗ್ರೆಸ್ ಗೆ ಬರುತ್ತೇನೆ ಎಂದು ಕೇಳಿಕೊಂಡಿಲ್ಲ ಎಂದರು.



