ಹಿಜಾಬ್ ವಿವಾದ ಪ್ರಕರಣ : ಸೋಮವಾರಕ್ಕೆ ವಿಚಾರಣೆ ಮುಂದೂಡಿದ ಹೈಕೋರ್ಟ್ ತ್ರಿಸದಸ್ಯ ಪೀಠ

ಬೆಂಗಳೂರು : ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿನಿಯರು ಹಿಜಾಬ್ ಧರಿಸುವುದನ್ನು ನಿಷೇಧಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆಯನ್ನು ಹೈಕೋರ್ಟ್ ತ್ರಿಸದಸ್ಯ ಪೀಠ ಸೋಮವಾರ ಮಧ್ಯಾಹ್ನ 2.30ಕ್ಕೆ ಮುಂದೂಡಿದೆ.
ವಿಚಾರಣೆಯನ್ನ ಸೋಮವಾರಕ್ಕೆ ಮುಂದೂಡಿದ ಹೈಕೋರ್ಟ್ ತ್ರಿಸದಸ್ಯ ಪೀಠ, ವಿಚಾರಣೆ ಮುಗಿಯವವರೆಗೆ ಧಾರ್ಮಿಕ ಗುರುತುಗಳನ್ನ ಬಳಸಬಾರದು. ಅಂತಿಮ ಆದೇಶದವರೆಗೂ ಸಮವಸ್ತ್ರ ಧರಿಸಿಯೇ ಶಾಲೆಗೆ ಹೋಗಬೇಕು. ಈಗ ಮಧ್ಯಂತರ ಆದೇಶ ನೀಡ ಬಯಸುತ್ತೇವೆ. ಸೋಮವಾರ ವಿಚಾರಣೆ ಮುಂದುವರೆಯಲಿದೆ. ಪ್ರತಿದಿನ ವಿಚಾರಣೆ ನಡೆಸಿ ಶೀಘ್ರದಲ್ಲೇ ತೀರ್ಪು ನೀಡುತ್ತೇವೆ. ಶೀಘ್ರದಲ್ಲೀ ಶಾಲೆಕಾಲೇಜು ಆರಂಭಿಸಬೇಕು ಎಂದು ಹೈಕೋರ್ಟ್ ಸಿಜೆ ಸೂಚಿಸಿದರು.
ಅರ್ಜಿದಾರರ ಪರ ದೇವದತ್ ಕಾಮತ್, ಸಂಜಯ್ ಹೆಗ್ಡೆ, ಸರ್ಕಾರದ ಪರ ಎಜಿ ಪ್ರಭುಲಿಂಗ ನಾವದಗಿ ವಾದ ಮಂಡಿಸಿದರು.
ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿ ರಿತು ರಾಜ್ ಅವಸ್ತಿ ಬುಧವಾರ ತಮ್ಮನ್ನು ಒಳಗೊಂಡಂತೆ ಮೂವರು ಸದಸ್ಯರ ಪೂರ್ಣಪೀಠವನ್ನು ರಚಿಸಿದ್ದಾರೆ. ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಮತ್ತು ನ್ಯಾಯಮೂರ್ತಿ ಜೈಬುನ್ನಿಸಾ ಎಂ ಖಾಜಿ ಇತರ ಸದಸ್ಯರಾಗಿದ್ದಾರೆ.
