
ಮೈಸೂರು: ರಾಜ್ಯದ ಮೂಲೆ ಮೂಲೆಯಲ್ಲೂ ಜನ ಪ್ರೀತಿ ನೀಡುತ್ತಿದ್ದಾರೆ, ನನಗೆ ರಾಜಕೀಯ ತೃಪ್ತಿ ಇದೆ, ಸಮಾಧಾನ ಇದೆ. ಮುಂಬರುವ ದಿನಗಳಲ್ಲಿ ದೊಡ್ಡ ಮಟ್ಟದ ಸಂಘಟನೆ ಅವಶ್ಯಕತೆ ಇದೆ ಎಂದು ಮಾಜಿ ಸಿಎಂ ಯಡಿಯೂರಪ್ಪ ಹೇಳಿದ್ದಾರೆ.
ಎಂಎಲ್ ಸಿ ಚುನಾವಣೆ ಹಿನ್ನೆಲೆ ಅಭ್ಯರ್ಥಿಗಳ ಪರ ಮತಯಾಚನೆ ಸಭೆಯಲ್ಲಿ ಮಾತನಾಡಿದ ಅವರು ರಾಜ್ಯದ ಉದ್ದಗಲಕ್ಕೂ ಪ್ರವಾಸ ಮಾಡುತ್ತೇನೆ. ಮತ್ತೊಮ್ಮೆ ಬಿಜೆಪಿಯನ್ನು ಅಧಿಕಾರಕ್ಕೆ ತರುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ನಾನು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದೆ. ಸಹೋದ್ಯೋಗಿಗಳಿಗೆ ಸಿಹಿ ಊಟ ನೀಡಿ ಅಲ್ಲಿಂದ ಹೊರಬಂದೆ ಎಂದರು.
ನಾನು ಕಣ್ಣೀರು ಹಾಕಿ ಹೊರಬಂದಾಗ ಬೇರೆಬೇರೆ ಮಾತುಗಳನ್ನು ಆಡಿದರು. ಆದರೆ ವಾಸ್ತವ ಅದಲ್ಲ, ಇಷ್ಟು ವರ್ಷದ ಜನರ ಪ್ರೀತಿ ಒಮ್ಮೆಲೆ ಕಣ್ಮುಂದೆ ಬಂದು ಕಣ್ಣೀರು ಹಾಕಿದೆ ಎಂದರು. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕನಿಷ್ಠ 143 ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಲಿದೆ. ನಾನು ಸುಮ್ಮನೆ ಕೂರಲ್ಲ, ನಿಮ್ಮನ್ನೂ ಸುಮ್ಮನೆ ಕೂರಲು ಬಿಡಲ್ಲ. ಇದು ನಮಗೆ ದೊಡ್ಡ ಸವಾಲು. ಪ್ರಧಾನಿ ನರೇಂದ್ರ ಮೋದಿಯವರ ಬಲ ತುಂಬುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ಹೇಳಿದರು.
ಯಂಕ, ನಾಣಿ, ಶೀನ ಮನಬಂದಂತೆ ಮಾತನಾಡುತ್ತಾರೆ. ಇದಕ್ಕೆ ಚುನಾವಣೆ ಮೂಲಕ ಉತ್ತರ ನೀಡಬೇಕು. ಮೋದಿ ಬಗ್ಗೆ ಅಲ್ಪವಾಗಿ ಮಾತನಾಡುವವರಿಗೆ ಓಟ್ ಮೂಲಕ ಉತ್ತರ ಕೊಡಬೇಕು. ಜನಗಳ ಪ್ರೀತಿ ವಿಶ್ವಾಸ ನಮ್ಮ ಬಳಿ ಇದೆ. ಇದು ಕೇವಲ ಮೈಸೂರು ಮಾತ್ರವಲ್ಲ. ಎಲ್ಲ ಕಡೆ ಬಿಜೆಪಿಯ ಬಗ್ಗೆ ಜನರಿಗೆ ಒಲವು ಇದೆ. ರಘು ಕೌಟಿಲ್ಯ ಅವರನ್ನು ಸರ್ವಸಮ್ಮತ ಅಭ್ಯರ್ಥಿಯಾಗಿ ಆಯ್ಕೆ ಮಾಡಿದ್ದೇವೆ. ಈಗಾಗಲೇ ರಘು ಎಲ್ಲಾ ಪಂಚಾಯ್ತಿ ಕೇಂದ್ರಗಳಿಗೆ ಭೇಟಿ ನೀಡಿ ಮತಯಾಚನೆ ಮಾಡಿದ್ದಾರೆ ಎಂದರು.
ರಘು ಕೌಟಿಲ್ಯ ಕೊರೊನಾ ಸಂದರ್ಭದಲ್ಲಿ ವಾರಿಯರ್ಸ್ ಆಗಿ ಸಾರ್ವಜನಿಕವಾಗಿ ಕೆಲಸ ಮಾಡಿದ್ದಾರೆ. ಆ ಸಂದರ್ಭದಲ್ಲಿ ಶ್ರೀಮತಿಯನ್ನೂ ಅನಾರೋಗ್ಯದ ಹಿನ್ನೆಲೆಯಲ್ಲಿ ಕಳೆದುಕೊಂಡರು ಎಂದು ಯಡಿಯೂರಪ್ಪ ಬೇಸರ ವ್ಯಕ್ತಪಡಿಸಿದರು.



