ಶಿವರಾತ್ರಿಗೆ ಸಿದ್ಧಾರೂಡ ಮಠಕ್ಕೆ ಭೇಟಿ ಹಿನ್ನೆಲೆ: ಭಕ್ತರಿಗೆ ಉಚಿತ ಆಟೋ ಸೇವೆ

ಹುಬ್ಬಳ್ಳಿ: ಸೇವಾ ಮನೋಭಾವ ಇದ್ರೆ ಯಾವ ರೂಪದಲ್ಲಾದ್ರೂ ದೇವರಿಗೆ ಸೇವೆ ಸಲ್ಲಿಸಿ ದೇವರ ಕೃಪೆಗೆ ಪಾತ್ರರಾಗಬಹುದು ಎಂಬ ಮಾತಿಗೆ, ಹುಬ್ಬಳ್ಳಿ ಆಟೋ ಚಾಲಕರು ಮತ್ತು ಮಾಲೀಕರ ಸಾಕ್ಷಿಯಾಗಿದ್ದಾರೆ. ಪ್ರತಿ ವರ್ಷದ ಮಹಾಶಿವರಾತ್ರಿ ಅಂದು ಉಚಿತ ಅಟೋಸೇವೆಯನ್ನು ವಾಣಿಜ್ಯ ನಗರಿ ಅಟೋ ಚಾಲಕರು ಮಾಡಿಕೊಂಡು ಬಂದಿದ್ದಾರೆ.
ನಗರದ ಚೆನ್ನಮ್ಮ ವೃತದಿಂದ ಹಳೇ ಹುಬ್ಬಳ್ಳಿಯ ಶ್ರೀ ಸಿದ್ದಾರೂಢರ ಮಠದ ಆವರಣದವರೆಗೂ, ಹುಬ್ಬಳ್ಳಿಯ ಅಟೋ ಚಾಲಕರು ಮತ್ತು ಮಾಲೀಕರ ಸಂಘದ ವತಿಯಿಂದ ಶ್ರೀ ಸಿದ್ದಾರೂಢ ಮಠಕ್ಕೆ ಭಕ್ತರನ್ನು ಉಚಿತವಾಗಿ ಕರೆದುಕೊಂಡು ಹೋಗಲಾಗುತ್ತಿದ್ದು, ಈ ಮೂಲಕ ಹಲವರಿಗೆ ಮಾದರಿಯಾಗಿದ್ದಾರೆ.
ಕಳೆದ 10 ವರ್ಷಗಳಿಂದ ಮಹಾಶಿವರಾತ್ರಿ ದಿನ ಹಾಗೂ ಶ್ರೀ ಸಿದ್ಧಾರೂಢ ಶ್ರೀಗಳ ರಥೋತ್ಸವದಂದು ಉಚಿತ ಆಟೋ ಸೇವೆಯನ್ನು ನಗರದ ಆಟೋ ರಿಕ್ಷಾ ಚಾಲಕರು ಹಾಗೂ ಸಿದ್ಧರೂಢರ ಅಜ್ಜನವರ ಭಕ್ತರು ಮಾಡುತ್ತಾ ಬಂದಿದ್ದಾರೆ. ಅದರಂತೆ ಈ ವರ್ಷವೂ ಕೂಡ ಅದನ್ನು ಮುಂದುವರೆಸಿ ಶ್ರೀಗಳ ಕೃಪೆಯ ಜೊತೆಗೆ ಭಕ್ತರಿಗೆ ಸಹಾಯ ಮಾಡುತ್ತಿದ್ದಾರೆ.
ಶಿವರಾತ್ರಿಯ ದಿನ ನಗರದ ರೈಲು ನಿಲ್ದಾಣ, ಹಳೇ ಬಸ್ ನಿಲ್ದಾಣ, ಹೊಸ ಬಸ್ ನಿಲ್ದಾಣ, ಹೊಸೂರು ಸರ್ಕಲ್, ರಸ್ತೆಯ ಅಕ್ಷಯ ಪಾರ್ಕ್ನಿಂದ ಶ್ರೀ ಸಿದ್ಧಾರೂಢ ಮಠಕ್ಕೆ ತೆರಳುವ ಭಕ್ತರಿಗೆ ಉಚಿತ ಆಟೋ ಸೇವೆ ಕಲ್ಪಿಸುತ್ತಾ ಬಂದಿದ್ದಾರೆ. ಸಾವಿರಾರು ಭಕ್ತರು ಅದರ ಸೇವೆ ಪಡೆಯುತ್ತಿದ್ದಾರೆ. ಶ್ರೀ ಸಿದ್ಧಾರೂಢ ಶ್ರೀಗಳ ರಥೋತ್ಸವ ಹಾಗೂ ಜಾತ್ರೆ ಹಿನ್ನೆಲೆ ಸಾರ್ವಜನಿಕರು ಹಾಗೂ ಭಕ್ತರ ಅನುಕೂಲಕ್ಕಾಗಿ ಇಂದು ಕೂಡ ತಮ್ಮ ಸೇವೆ ನಿರಂತರವಾಗಿ ಮುಂದುವರೆಸಿದ್ದಾರೆ.
ಸುಮಾರು 150ಕ್ಕೂ ಹೆಚ್ಚು ಆಟೋಗಳು ಉಚಿತ ಸೇವೆಯನ್ನು ನೀಡುತ್ತಿವೆ. ಈ ಮೂಲಕ ಶ್ರೀಗಳಿಗೆ ತಮ್ಮ ಸೇವೆ ಸಮರ್ಪಿಸುವುದಷ್ಟೇ ಅಲ್ಲ, ಭಕ್ತರ ಪ್ರಶಂಸೆಗೂ ಆಟೋ ಚಾಲಕರು ಪಾತ್ರರಾಗಿದ್ದಾರೆ. ಇದರ ಜೊತೆಗೆ ಬಂದ ಭಕ್ತರಿಗೆ ಉಪಹಾರ ನೀಡುತ್ತಿರುವುದು ವಿಶೇಷವಾಗಿದೆ.
