Breaking NewsLatestಮೆಟ್ರೋ

ಅಕ್ರಮ ಕ್ಯಾಸಿನೊಗಳನ್ನು ಮುಚ್ಚುವಂತೆ ಗೃಹ ಸಚಿವ ಆರಗ ಜ್ಞಾನೇಂದ್ರ ಸೂಚನೆ

ಬೆಂಗಳೂರು: ಅಂತರರಾಷ್ಟ್ರೀಯ ನಗರವಾಗಿ ಬೆಳೆಯುತ್ತಿರುವ ಬೆಂಗಳೂರು ನಗರದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಿಕೊಳ್ಳಬೇಕು, ರೌಡಿ ಗಳನ್ನೂ ಮಟ್ಟ ಹಾಕಬೇಕು, ಹಾಗೂ ಸುಳ್ಳು ದಾಖಲೆ ಪತ್ರ ತಯಾರಿಸಿ, ಸರಕಾರಿ ಹಾಗೂ ನಾಗರಿಕರ ಭೂಮಿ ಮತ್ತು ನಿವೇಶನಗಳನ್ನು ಕಬಳಿಸುವವರ ವಿರುದ್ಧ ನಿಷ್ಠುರವಾಗಿ ಕ್ರಮ ಜರುಗಿಸಬೇಕೆಂದು ಪೊಲೀಸರಿಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಕಟ್ಟು ನಿಟ್ಟಿನ ನಿರ್ದೇಶನ ನೀಡಿದ್ದಾರೆ.

ಗುರುವಾರ ಅವರು ಬೆಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿ ವ್ಯಾಪ್ತಿಯ, ಪರೀಶೀಲನಾ ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮಾಜದ ಅಶಾಂತಿಗೆ ಕಾರಣವಾಗುವ ಎಲ್ಲ ಅಕ್ರಮ ಕ್ಲಬ್, ಕ್ಯಾಸಿನೋಗಳೂ ಹಾಗೂ ಇನ್ನಿತರ ಕಾನೂನುಬಾಹಿರವಾಗಿ ನಡೆಯುವ ಎಲ್ಲ ರೀತಿಯ ಅಕ್ರಮಗಳನ್ನು ತಡೆಯಬೇಕು, ನಾಗರೀಕರ, ಅದರಲ್ಲಿಯೂ ಮಹಿಳೆಯರ ಹಾಗೂ ಮಕ್ಕಳ ರಕ್ಷಣೆಗೆ ಕ್ರಮ ತೆಗೆದುಕೊಳ್ಳಬೇಕು ಎಂದು ಸೂಚಿಸಿದರು.

ನಾಗರಿಕರ ರಕ್ಷಣೆಗೆ ಹತ್ತು ಹಲವು ಕಾನೂನುಗಳಿದ್ದು ಅವುಗಳಿಗೆ ಮಾನ್ಯತೆ ಸಿಗಬೇಕಾದರೆ, ಪೊಲೀಸರು ಕಟ್ಟು ನಿಟ್ಟಾಗಿ ಕಾನೂನು ಜಾರಿಗೊಳಿಸಬೇಕು, ಹಾಗಾದರೆ ಮಾತ್ರ ಸಾರ್ವಜನಿಕರಿಗೆ ಪೊಲೀಸ್ ವ್ಯವಸ್ಥೆ ಬಗ್ಗೆ ವಿಶ್ವಾಸ ಮೂಡುತ್ತದೆ ಎಂದು ಸಚಿವರು ಹೇಳಿದರು.

ಅಕ್ರಮ ಕ್ಲಬ್ ಮತ್ತು ಕ್ಯಾಸಿನೋಗಳು ನಗರದಲ್ಲಿ ನಡೆಯುತ್ತಿರುವ ಬಗ್ಗೆ, ವರದಿಗಳಿವೆ, ಅವುಗಳನ್ನು ನಿರ್ಧಾಕ್ಷಿಣ್ಯವಾಗಿ ನಿಲ್ಲಿಸಬೇಕು, ಹಾಗೂ ಇದಕ್ಕಾಗಿ ವಿಶೇಷ ಕಾರ್ಯಪಡೆ ರಚಿಸಿ ಕ್ರಮ ತೆಗೆದುಕೊಳ್ಳಬೇಕು, ಎಂದು ಪೊಲೀಸರಿಗೆ ನಿರ್ದೇಶಿಸಿದ್ದೇನೆ ಎಂದು ಸಚಿವರು ಹೇಳಿದರು.

ನೆಲಗಳ್ಳರೊಂದಿಗೆ ಪೊಲೀಸರು ಶಾಮೀಲು:

ಅಲ್ಲಲ್ಲಿ, ಪೊಲೀಸರು, ನೆಲಗಳ್ಳರ ಜೊತೆಗೆ ಶಾಮೀಲಾಗಿ ಮುಗ್ಧ ಜನರನ್ನು ವಂಚಿಸುವುದರ ಬಗ್ಗೆ ದೂರುಗಳಿದ್ದು, ಅಂಥಹ ಅಧಿಕಾರಿಗಳನ್ನು ಗುರುತಿಸಿ, ಅವರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಕಟ್ಟು ನಿಟ್ಟಿನ ಸೂಚನೆ ನೀಡಿದ್ದೇನೆ ಎಂದು ತಿಳಿಸಿದರು.

ನಗರದಲ್ಲಿ ಮಾದಕ ವಸ್ತುಗಳ, ಕಳ್ಳ ಸಾಗಣೆ, ವಿತರಣೆ, ಹಾಗೂ ಬಳಕೆ ವಿರುದ್ಧ, ಕಠಿಣ ಕ್ರಮ ತೆಗೆದುಕೊಳ್ಳುವ ಬಗ್ಗೆ ಹಿರಿಯ ಪೊಲೀಸರಿಗೆ ತಾಕೀತು ಮಾಡಲಾಗಿದ್ದು, “ಮಾದಕ ವಸ್ತುಗಳ ಜಾಲ ಮೂಲೋತ್ಪಾಟನೆ ಮಾಡಲು ಸಾಧ್ಯವಾಗುವ ಎಲ್ಲ ಕ್ರಮಗಳನ್ನು ಜರುಗಿಸಲಾಗುವುದು ಎಂದರು.

ನಗರದಲ್ಲಿ, ಅಕ್ರಮವಾಗಿ ನೆಲಸಿರುವ, ಹಾಗೂ ವೀಸಾ ಅವಧಿ ಮುಗಿದಿರುವ ವಿದೇಶಿ ನಾಗರಿಕರನ್ನು ಪ್ರತಿಯೊಂದು ಠಾಣೆ ವ್ಯಾಪ್ತಿಯಲ್ಲಿ, ಗುರುತಿಸುವ ಹಾಗೂ ಅವಧಿ ಮುಗಿದಿದ್ದರೂ ವಾಸಿಸುತ್ತಿರುವ ವಿದೇಶಿಗರನ್ನು ಹೊರ ಹಾಕುವ ಅಗತ್ಯತೆ ಬಗ್ಗೆ ತಿಳಿ ಹೇಳಿದ್ದೇನೆ, ಹಾಗೂ ಅಕ್ರಮ ವಿದೇಶಿ ನಾಗರಿಕರ ಮೇಲೆ ಸತತವಾಗಿ ನಿಗಾ ಇಡುವಂತೆ ತಿಳಿಸಿದ್ದೇನೆ ಎಂದು ಸಚಿವರು ವಿವರಿಸಿದರು.

ವಿದೇಶಿ ನಾಗರಿಕರಿಗೆ, ಸ್ಥಳೀಯ ವ್ಯಕ್ತಿಗಳು ಹಾಗೂ ಕೆಲವು ಸರಕಾರಿ ಅಧಿಕಾರಿಗಳು, ಆಧಾರ್ ಮತ್ತು ಪಡಿತರ ಚೀಟಿಗಳನ್ನು ಅಕ್ರಮವಾಗಿ ಪಡೆದುಕೊಳ್ಳಲು ನೆರವಾಗಿರುವ ಬಗ್ಗೆ ವರದಿಗಳಿದ್ದು, ಅಂತಹ ಸರಕಾರಿ ನೌಕರರ ವಿರುದ್ಧ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳುವಂತೆಯೂ ನಿರ್ದೇಶಿಸಿದ್ದೇನೆ, ಎಂದರು.

ಆನ್ ಲೈನ್ ಪರವಾನಗಿ:

ಇದಕ್ಕೂ ಮೊದಲು, ಸಚಿವರು ಆನ್​​ಲೈನ್ ಶಸ್ತಾಸ್ತ್ರ ಪರವಾನಗಿ ಕುರಿತ ಆಪ್ ಗೆ ಚಾಲನೆ ನೀಡಿದರು. ಇನ್ನು ಮುಂದೆ ನಗರದಲ್ಲಿ, ನೋಂದಾಯಿಸಿರುವ ಶಸ್ತ್ರಾಸ್ತ್ರ ಪರವಾನಗಿ ಹೊಂದಿದ ನಾಗರಿಕರು
ಆನ್ಲೈನ್ ಮೂಲಕವೇ, ನವೀಕರಣ ಹಾಗೂ ವಾರ್ಷಿಕ ಫೀ ಅನ್ನು ಕಟ್ಟಬಹುದು. ಇದಕ್ಕಾಗಿ ಪೊಲೀಸ್ ಕಚೇರಿಗೆ ಭೇಟಿ ನೀಡುವ ಅಗತ್ಯವಿಲ್ಲ.

ನಗರದಲ್ಲಿ ಸುಮಾರು 8 ಸಾವಿರ ಪರವಾನಗಿ ದಾರರು ಈ ಪ್ರಯೋಜನ ಪಡೆಯಲಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ತಿಳಿಸಿದರು.

Spread the love

Related Articles

Leave a Reply

Your email address will not be published. Required fields are marked *

Back to top button