ಹೊಸ ಬಾಂಬ್ ಸಿಡಿಸಿದ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ

ರಾಮನಗರ: 545 ಪಿಎಸ್ಐ ಹುದ್ದೆಗಳ ನೇಮಕಾತಿ ಪರೀಕ್ಷೆಯಲ್ಲಿ ನಡೆದ ಅಕ್ರಮವನ್ನು ಪೊಲೀಸರೇ ಬಯಲಿಗೆಳೆದಿದ್ದಾರೆ. ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ವಿರುದ್ಧ ಬಿಜೆಪಿ ನಾಯಕರು ಮಾತನಾಡಿದ್ದರಿಂದ ಕಮಲ್ ಪಂತ್ ಅಭಿಮಾನಿಗಳು ಮತ್ತು ಬೆಂಬಲಿಗರೇ ಈ ಹಗರಣವನ್ನು ಬಯಲಿಗೆ ತಂದಿದ್ದಾರೆ ಎಂದು ಹೆಚ್ ಡಿ ಕುಮಾರಸ್ವಾಮಿ ಹೊಸ ಬಾಂಬ್ ವೊಂದರನ್ನು ಸಿಡಿಸಿದ್ದಾರೆ.
ರಾಮನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಮಲ್ ಪಂತ್ ರಂತಹ ನಿಷ್ಠಾವಂತ ಅಧಿಕಾರಿ ವಿರುದ್ಧ ಮಾತನಾಡಿದ್ದರಿಂದ ನೊಂದು ಪೊಲೀಸರೇ ಬಿಜೆಪಿಯವರ ಈ ಭ್ರಷ್ಟಾಚಾರವನ್ನು ಬಯಲಿಗೆ ತಂದಿದ್ದಾರೆ. ಇಲ್ಲದಿದ್ದರೆ ಪಿಎಸ್ಐ ನೇಮಕಾತಿ ಅಕ್ರಮವನ್ನು ಸರ್ಕಾರ ಮುಚ್ಚಿಹಾಕುತ್ತಿತ್ತು. ಸಚಿವ ಅಶ್ವಥ್ ನಾರಾಯಣ ಬಗ್ಗೆ ಬಿಜೆಪಿಯವರೇ ಮಾಹಿತಿ ನೀಡಿದ್ದಾರೆ ಎಂದು ಕುಮಾರಸ್ವಾಮಿ ಆರೋಪಿಸಿದ್ದಾರೆ.
ಕೆಲ ದಿನಗಳ ಹಿಂದೆ ಚಾಮರಾಜಪೇಟೆ ಹತ್ತಿರ ಚಂದ್ರು ಎಂಬ ಯುವಕನ ಕೊಲೆ ಪ್ರಕರಣದಲ್ಲಿ ಬಿಜೆಪಿ ನಾಯಕರು ಕಮಿಷನರ್ ಕಮಲ್ ಪಂತ್ ವಿರುದ್ಧ ತಿರುಗಿಬಿದ್ದಿದ್ದರು. ಕಮಲ್ ಪಂತ್ ಜೀವನದಲ್ಲಿ ಯಾವುದೇ ಕಪ್ಪು ಚುಕ್ಕಿ ಇರಲಿಲ್ಲ. ಪಂತ್ ವಿರುದ್ಧ ಆರೋಪ ಮಾಡಿರುವುದರಿಂದ ಈ ಹಗರಣ ಹೊರಬಂದಿದೆ. ಕಮಲ್ ಪಂತ್ ಬೆಂಬಲಿಗ ಅಧಿಕಾರಿಗಳೇ ಹೊರತಂದಿದ್ದಾರೆ.
ಈ ಹಿಂದೆ ಪೊಲೀಸ್ ಆಯುಕ್ತರಾಗಿದ್ದವರೂ ಪಿಎಸ್ಐ ನೇಮಕಾತಿ ಹಗರಣ ಬಗ್ಗೆ ಅಧಿಕಾರಿಗಳಿಗೆ ಲಿಂಕ್ ಕೊಟ್ಟಿದ್ದಾರೆ. ಒಂದು ಪಕ್ಷಕ್ಕೆ ನಿಷ್ಠರಾಗಿರುವವರನ್ನು ಆಯ್ಕೆ ಮಾಡುವ ಪ್ರಯತ್ನ ನಡೆದಿದೆ. ಬಾಲಿಬಿಟ್ಟರೆ ಹಿಂದೂ ಅನ್ನುವವರಿಂದ ಅಕ್ರಮಕ್ಕೆ ಯತ್ನ ನಡೆದಿದೆ ಎಂದು ಕುಮಾರಸ್ವಾಮಿ ಆರೋಪಿಸಿದ್ದಾರೆ.
