
ಬೆಂಗಳೂರು: ಕೋವಿಡ್ನಿಂದ ತಂದೆತಾಯಿಯನ್ನು ಕಳೆದುಕೊಂಡು ಅನಾಥರಾಗಿರುವ ಮಕ್ಕಳಿಗೆ ಆರೋಗ್ಯ ಮತ್ತು ಶಿಕ್ಷಣದ ಜವಾಬ್ದಾರಿಯನ್ನು ಸರ್ಕಾರ ವಹಿಸಿಕೊಳ್ಳಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಕಂದಾಯ ಇಲಾಖೆಯ ರಾಜ್ಯ ವಿಪತ್ತು ನಿರ್ವಹಣೆಯ ವತಿಯಿಂದ ನ್ಯಾಪನಲ್ ಕಾಲೇಜು ಮೈದಾನದಲ್ಲಿ ಕೋವಿಡ್ನಿಂದ ಮೃತಪಟ್ಟ ವ್ಯಕ್ತಿಯ ಬಿಪಿಎಲ್ ಕುಟುಂಬಕ್ಕೆ ಪರಿಹಾರ ಚೆಕ್ ವಿತರಿಸಿ ಅವರು ಮಾತನಾಡಿದರು.
ಮೃತಪಟ್ಟ ವ್ಯಕ್ತಿಯ ಬಿಪಿಎಲ್ ಕುಟುಂಬ ಸದಸ್ಯರಿಗೆ 1 ಲಕ್ಷ ರೂ. ಪರಿಹಾರ ನೀಡುವ ಯೋಜನೆಗೆ 300 ಕೋಟಿ ರೂ. ವೆಚ್ಚ ಮಾಡಲಾಗಿದೆ. ಕೇಂದ್ರ ಸರ್ಕಾರದ ರೂ.50 ಸಾವಿರ ರೂ.ಪರಿಹಾರ ಡಿಬಿಟಿ ಮಾಡಲಾಗಿದೆ ಎಂದರು.
ಸ್ವದೇಶಿ ಕೋವಿಡ್ ಲಸಿಕೆಯ ಮೊದಲ ಡೋಸ್ 104 ಕೋಟಿ ಮಂದಿಗೆ ಈಗಾಗಲೇ ನೀಡಲಾಗಿದೆ. ಅಲ್ಲದೇ ದೇಶದಲ್ಲಿ ಶೇ.67ರಷ್ಟು ಮಂದಿಗೆ2ನೇ ಡೋಸ್ ನ್ನು ನೀಡಲಾಗಿದೆ ಎಂದು ತಿಳಿಸಿದ ಸಿಎಂ, ರಾಜ್ಯದಲ್ಲಿ ಶೇ. 97 ರಷ್ಟು ಮೊದಲನೇ ಡೋಸ್ ಹಾಗೂ ಶೇ. 76 ರಷ್ಟು 2 ನೇ ಡೋಸ್ ನ್ನು ಡಿಸೆಂಬರ್ ಅಂತ್ಯದೊಳಗೆ ನೀಡಲಾಗುವುದು ಎಂದರು.
ಮನೆ ಬಾಗಿಲಿಗೆ ಲಸಿಕೆ
ಗ್ರಾಮೀಣ ಪ್ರದೇಶದಲ್ಲಿ ಮನೆಮನೆಗೆ ತೆರಳಿ ಲಸಿಕೆ ನೀಡಲಾಗುತ್ತಿದೆ. ಬೆಂಗಳೂರಿನಲ್ಲಿ ಶೇ.90 ರಷ್ಟು ಲಸಿಕೆ ನೀಡಲಾಗಿದ್ದು. ಇನ್ನುಳಿದ ಶೇ.10 ರಷ್ಟು ಜನತೆಗೆ ಮನೆಮನೆಗೆ ತೆರಳಿ ಲಸಿಕೆ ಅಭಿಯಾನ ನಡೆಸಲು ಆಯಾ ಕ್ಷೇತ್ರದ ಶಾಸಕರು, ಅಧಿಕಾರಿಗಳು ಗಮನ ಹರಿಸಬೇಕು ಎಂದು ಮನವಿ ಮಾಡಿದರು.
ಜೀವಂತಿಕೆಯ ಸರ್ಕಾರ
ಜನರ ಸಂಕಷ್ಟಕ್ಕೆ ಸ್ಪಂದಿಸುವ ರೀತಿಯಲ್ಲಿ ಸರ್ಕಾರದ ಜೀವಂತಿಕೆ ಆಧರಿಸಿದೆ. ಇತ್ತೀಚೆಗಷ್ಟೇ ರಾಜ್ಯಾದ್ಯಂತ ಅಕಾಲಿಕ ಮಳೆಯಿಂದಾಗಿ ವ್ಯಾಪಕವಾಗಿ ಬೆಳೆಹಾನಿ ಉಂಟಾಯಿತು. ಎನ್ಡಿಆರ್ಎಫ್ ಪರಿಹಾರದೊಂದಿಗೆ ರಾಜ್ಯ ಸರ್ಕಾರ ದುಪ್ಪಟ್ಟು ಬೆಳೆಪರಿಹಾರ ನೀಡುತ್ತಿದೆ ಎಂದರು.
ರಾಜಕಾಲುವೆ ನಿರ್ಮಾಣ
ಬೆಂಗಳೂರಿನಲ್ಲಿ ರಾಜಾಕಾಲುವೆಗಳ ನಿರ್ಮಾಣಕ್ಕೆ ಡಿಪಿಆರ್ ಸಿದ್ಧಪಡಿಸಲಾಗುತ್ತಿದ್ದು, ಶಾಶ್ವತ ಪರಿಹಾರ ಒದಗಿಸಲಾಗುವುದು. ಅಕ್ರಮ ಕಟ್ಟಡ ನಿರ್ಮಾಣ ತೆರವುಗೊಳಿಸಲು ನಿರ್ದಾಕ್ಷಣ್ಯ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.



