ಮೇಕೆದಾಟು ಪಾದಯಾತ್ರೆಗೆ ಶಿವಣ್ಣ ಗೈರು: ಸ್ಪಷ್ಟನೆ ನೀಡಿದ ಮಧು ಬಂಗಾರಪ್ಪ

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮುಂದಾಳತ್ವದಲ್ಲಿ ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಕಾಂಗ್ರೆಸ್ ನೇತೃತ್ವದಲ್ಲಿ ಪಾದಯಾತ್ರೆ ಹಮ್ಮಿಕೊಂಡಿದೆ. ಇದರ ಕಾಂಗ್ರೆಸ್ ಪಕ್ಷದ ಮುಖಂಡರ ಜೊತೆಗೆ ಕನ್ನಡ ಚಿತ್ರರಂಗದ ನಟರಿಗೂ ಆಹ್ವಾನ ನೀಡಲಾಗಿತ್ತು. ಕಾರ್ಯಕ್ರಮಕ್ಕೆ ನಟ ಶಿವರಾಜ್ ಕುಮಾರ್ ಗೈರಾಗಿದ್ದಾರೆ. ಈ ಬಗ್ಗೆ ಮಾಜಿ ಶಾಸಕ ಮಧು ಬಂಗಾರಪ್ಪ ಸ್ಪಷ್ಟನೆ ನೀಡಿದ್ದಾರೆ.
ಜ.9ರಂದು ಮೇಕೆದಾಟು ಪಾದಯಾತ್ರೆಗೆ ಚಾಲನೆ ಸಿಕ್ಕಿದೆ. ಶಿವಣ್ಣ ಕಾರ್ಯಕ್ರಮಕ್ಕೆ ಗೈರಾದ ಹಿನ್ನೆಲೆಯಲ್ಲಿ ನಗಾರಿ ಬಾರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯ್ತು. ನಟ ಶಿವರಾಜ್ಕುಮಾರ್ ಕಾರ್ಯಕ್ರಮದಲ್ಲಿ ಭಾಗಿಯಾಗುವುದರ ಕುರಿತು ಹಲವರು ತೀವ್ರ ಆಕ್ಷೇಪ ಎತ್ತಿದ್ದರು.
ಶಿವರಾಜ್ ಕುಮಾರ್ ಎಲ್ಲಾ ವರ್ಗದವರಿಗೂ ಸೇರಿದ ನಾಯಕ. ಡಾ.ರಾಜ್ ಕುಮಾರ್ ಕುಟುಂಬದವರು ಯಾವತ್ತು ರಾಜಕೀಯದಲ್ಲಿ ತಲೆ ಹಾಕಿಲ್ಲ. ನೀವು ಕಾಂಗ್ರೆಸ್ ಪಾದಯಾತ್ರೆಯಲ್ಲಿ ಪಾಲ್ಗೊಂಡು ವಿಶ್ವಾಸ ಕಳೆದುಕೊಳ್ಳಬೇಡಿ ಎಂದು ಸಾಕಷ್ಟು ಮಂದಿ ಕಾಮೆಂಟ್ ಮಾಡಿದ್ದರು. ಇದೇ ಕಾರಣಕ್ಕೆ ಶಿವಣ್ಣ ಕಾರ್ಯಕ್ರಮದಿಂದ ದೂರ ಉಳಿದಿದ್ದರು ಅನ್ನೊ ಮಾತು ಕೇಳಿ ಬಂದಿತ್ತು.

ನಿನ್ನೆ ಶಿವಣ್ಣ ಅವರಿಗೆ ಬೇರೆ ವಿಚಾರಗಳು ಇದ್ದಿದ್ದರಿಂದ ಅವರು ಕನಕಪುರದವರೆಗೆ ಬಂದು ವಾಪಸ್ ಹೋಗಿದ್ದಾರೆ. ಅವರ ಅವರದ್ದೇ ಆದಂತಹ ಯೋಜನೆಯಲ್ಲಿ ಇರುತ್ತಾರೆ. ಅವರ ಕೈಯಲ್ಲೇ ಉದ್ಘಾಟನೆ ಮಾಡಿಸಬೇಕು ಎಂಬ ಉದ್ದೇಶ ಇತ್ತು. ಕೋವಿಡ್ ಮುಂತಾದ ಕಾರಣದಿಂದ ಅವರಿಗೆ ಬರಲು ಸಾಧ್ಯವಾಗಿಲ್ಲ. ಚಿತ್ರರಂಗದ ಬೆಂಬಲ ನಮಗೆ ಇದೆ. ಶಿವಣ್ಣ ಅವರನ್ನು ನಾನು ನೇರವಾಗಿ ಈ ವಿಚಾರದ ಬಗ್ಗೆ ಭೇಟಿ ಮಾಡಿಲ್ಲ. ಅವರ ಬೆಂಬಲ ಇದ್ದೇ ಇರುತ್ತದೆ ಎಂದು ಮಧು ಬಂಗಾರಪ್ಪ ಹೇಳಿದ್ದಾರೆ.
ಹಲವರ ವಿರುದ್ದ ಪ್ರಕರಣ ದಾಖಲು :
ಇನ್ನೂ ಕೋವಿಡ್ ನಿಯಮ ನಿಯಂತ್ರಣದ ಉದ್ದೇಶದಿಂದ ಸರ್ಕಾರ ರಾಜ್ಯದಲ್ಲಿ ಪ್ರತಿಭಟನೆ, ಪಾದಯಾತ್ರೆಯನ್ನ ನಿಷೇಧಿಸಿದೆ. ಆದರೆ ಈ ನಿಷೇಧವನ್ನು ಉಲ್ಲಂಘನೆ ಮಾಡಿದಕ್ಕೆ ನಟರಾದ ಸಾಧುಕೋಕಿಲ, ದುನಿಯಾ ವಿಜಯ್, ಜಯಮಾಲ, ಸಾರಾ ಗೋವಿಂದ್ ಸೇರಿದಂತೆ 30ಕ್ಕೂ ಹೆಚ್ಚು ಜನರ ಮೇಲೆ ಎಫ್ಐಆರ್ ದಾಖಲಾಗಿದೆ.
