
ಬೆಂಗಳೂರು: ರಾಜ್ಯದಲ್ಲಿ ರಸಗೊಬ್ಬರದ ಕೊರತೆ ಇಲ್ಲ. ನವೆಂಬರ್ ಅಂತ್ಯದವರೆಗೆ 2.10 ಲಕ್ಷ ಟನ್ ನಷ್ಟು ರಸಗೊಬ್ಬರದ ಅಗತ್ಯವಿದೆ. ಅಷ್ಟು ಪ್ರಮಾಣದ ದಾಸ್ತಾನ ರಾಜ್ಯದಲ್ಲಿದೆ ಎಂದು ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ರಾಜ್ಯ ಸಚಿವ ಭಗವಂತ ಖೂಬ ಹೇಳಿದ್ದಾರೆ.
ವಿಕಾಸಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ 33 ಸಾವಿರ ಟನ್ ಡಿಎಪಿ ರಸಗೊಬ್ಬರದ ಬೇಡಿಕೆ ಇದೆ. ಆದರೆ ರಾಜ್ಯದಲ್ಲಿ ಈಗಾಗಲೇ 336,500 ಟನ್ ದಾಸ್ತಾನಿದೆ. ಹಾಗೆಯೇ ಯೂರಿಯಾ ಮತ್ತು ಕಾಂಪ್ಲೆಕ್ಸ್ ಇದೆ. ಯೂರಿಯಾ ಬದಲು ಕಾಂಪ್ಲೆಕ್ಸ್ ಬಳಸಬಹುದಾಗಿದೆ ಎಂದರು.
ಡಿಎಪಿ ದರ ಮಾತ್ರ ಅಲ್ಪ ಪ್ರಮಾಣದಲ್ಲಿ ಏರಿಕೆಯಾಗಿರುವುದು ನಿಜ. ರಾಜಕೀಯಕ್ಕಾಗಿ ಕಾಂಗ್ರೆಸ್ ಪಕ್ಷದವರು ರಸಗೊಬ್ಬರದ ಕೊರತೆಯಾಗಿದೆ ಎಂದು ಸುಳ್ಳು ಹೇಳೂತ್ತಿದ್ದಾರೆ. ಹಾಗೆಯೇ , ಬೆಲೆ ಏರಿಕೆ ಕುರಿತು ಜನರಿಗೆ ಆಕ್ರೋಶವಿಲ್ಲ. ಕಾಂಗ್ರೆಸ್ ಪಕ್ಷದವರಿಗೆ ಮಾತ್ರ ಆಕ್ರೋಶವಿದೆ ಎಂದು ಹೇಳಿದರು.
ಪೆಟ್ರೋಲ್, ಡೀಸೆಲ್ ದರ ಏರಿಕೆಯಿಂದ ಜನರಿಗೆ ಸಮಸ್ಯೆಯಾಗಿಲ್ಲ. ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದ ಅವಧಿಗಿಂತಲೂ ಈಗ ಜನರು ನೆಮ್ಮದಿಯಿಂದ ಇದ್ದಾರೆ. ಕಾಂಗ್ರೆಸ್ ಪಕ್ಷದವರು ಮಾತ್ರ ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ಪ್ರಶ್ನೊಯೊಂದಕ್ಕೆ ಉತ್ತರಿಸಿದರು.
ಕಾಂಗ್ರೆಸ್ ಪಕ್ಷದ ಅವಧಿಯಲ್ಲಿ ಪೆಟ್ರೊಲಿಯಂ ಉತ್ಪನ್ನ ಖರೀದಿಗೆ ಮಾಡಿದ್ದ ಸಾಲವನ್ನು ಈಗ ನಮ್ಮ ಸರ್ಕಾರ ತೀರಿಸುತ್ತಿದೆ. ಹೀಗಾಗಿ ದರ ಹೆಚ್ಚಳ ಮಾಡಲಾಗುತ್ತಿದೆ . ಆದರೆ ಸಾಲ ತೀರಿಸಿದ ಕುರಿತು ಮಾಹಿತಿ ಇಲ್ಲ . ಪೆಟ್ರೊಲಿಯಂ ಸಚಿವಾಲಯ ತಮ್ಮ ವ್ಯಾಪ್ತಿಯಲ್ಲಿಲ್ಲ ಎಂದು ಜಾರಿಕೊಂಡರು..



