ಹಲ್ಲಿನ ಶಸ್ತ್ರ ಚಿಕಿತ್ಸೆಗೆಂದು ಆಸ್ಪತ್ರೆ ಸೇರಿದ ಯುವಕ ಶವವಾಗಿ ಮರಳಿದ

ಕಲಬುರಗಿ: ಹಲ್ಲಿನ ಶಸ್ತ್ರ ಚಿಕಿತ್ಸೆಗೆಂದು ಆಸ್ಪತ್ರೆ ದಾಖಲಾದ ಯುವಕ ಶವವಾಗಿ ಮರಳಿದ ಮನಕಲುಕುವ ಘಟನೆ ಕಲಬುರಗಿ ನಗರದಲ್ಲಿ ನಡೆದಿದೆ.
ಕಲಬುರಗಿಯ ಸಾಯಿ ಮಂದಿರ ಬಡಾವಣೆಯ ನಿವಾಸಿ ಶಶಾಂಕ್ ರಾಮದಾಸ್ (17) ಮೃತ ನತದೃಷ್ಟ ಯುವಕ. ಹಲ್ಲುಗಳು ಮುಂದೆ ಇರುವ ಕಾರಣ ವೈದ್ಯರನ್ನು ಸಂಪರ್ಕಿಸಿ ಅವರ ಸಲಹೆಯಂತೆ ಚಿಕ್ಕದೊಂದು ಶಸ್ತ್ರ ಚಿಕಿತ್ಸೆಗಾಗಿ ಸೆಪ್ಟೆಂಬರ್ 30 ರಂದು ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದನು. ಮಾರನೆ ದಿನ ಆಗಸ್ಟ್ ಒಂದರಂದು ಶಸ್ತ್ರಚಿಕಿತ್ಸೆ ಮಾಡಲು ವೈದ್ಯರು ಅನಸ್ತೇಶಿಯಾ ನೀಡಿದ್ದಾರೆ. ಇದಾದ ಕೆಲ ಹೊತ್ತಿನಲ್ಲಿ ಶಶಾಂಕ್ ಕೋಮಾ ಸ್ಥೀತಿಗೆ ತಲುಪಿದ್ದಾನೆ ಅಂತ ಆತನ ಕುಟುಂಬಸ್ಥರು ಆರೋಪಿಸಿದ್ದಾರೆ.
ಕೋಮಾ ಸ್ಥಿತಿಯಲ್ಲಿರುವ ಶಶಾಂಕ್ ಮೂರು ದಿನ ವೆಂಟಿಲೇಟರ್ ಸಹಾಯದಿಂದ ಉಸಿರಾಡಿದ್ದಾನೆ. ವೆಂಟಿಲೇಟರ್ ತೆಗೆದಾಗ ಉಸಿರು ಚಲ್ಲಿದ್ದಾನೆ. ನಮ್ಮ ಮಗನ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಅಂತ ಆರೋಪಿಸಿದ ಕುಟುಂಬಸ್ಥರು, ಆಸ್ಪತ್ರೆ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ ಕೂಡಾ ನಡೆಸಿದ್ದಾರೆ. ಸದ್ಯ ಈ ಕುರಿತು ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.



