
ನವದೆಹಲಿ: ಜವಾದ್ ಚಂಡಮಾರುತವು ಕಡಲ ತೀರ ಪ್ರದೇಶಗಳಲ್ಲಿ ಚಲಿಸುತ್ತಿದ್ದು, ಶನಿವಾರ ಬೆಳಗ್ಗೆ ಒಡಿಶಾ ಕರಾವಳಿ ಪ್ರದೇಶಗಳಲ್ಲಿ ವೇಗದ ಗಾಳಿ, ಹಾಗೂ ಮಳೆಯ ಆರ್ಭಟ ಜೋರಾಗಿದೆ.
ಆಂಧ್ರಪ್ರದೇಶ ಹಾಗೂ ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಪುರಿ ಸಮೀಪ ಭೂಕುಸಿತ ಉಂಟಾಗುವ ಸಂಭವವಿದೆ ಎನ್ನಲಾಗಿದೆ. ಮುಂದಿನ 12 ಗಂಟೆಗಳಲ್ಲಿ ಉತ್ತರ ಭಾಗಕ್ಕೆ ಚಲಿಸುವ ಸಾಧ್ಯತೆಯಿದೆ. ನಂತರ ಉತ್ತರ-ಈಶಾನ್ಯಕ್ಕೆ ಒಡಿಶಾ ಕರಾವಳಿಯುದ್ದಕ್ಕೂ ಚಲಿಸಲಿದೆ. ಕ್ರಮೇಣ ಚಂಡಮಾರುತ ದುರ್ಬಲಗೊಳ್ಳುವ ಸಾಧ್ಯತೆಯಿದೆ.
ಮಳೆ ಆರ್ಭಟದಿಂದಾಗಿ ಒಡಿಶಾದ 19 ಜಿಲ್ಲೆಗಳಲ್ಲಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಆಂಧ್ರಪ್ರದೇಶದ ಶ್ರೀಕಾಕುಳಂ, ವಿಜಯನಗರಂ ಹಾಗೂ ವಿಶಾಖಪಟ್ಟಣಂ ಜಿಲ್ಲೆಗಳಿಂದ 54008 ಮಂದಿಯನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.



