
ಬೆಂಗಳೂರು: ಉತ್ತರ ಪ್ರದೇಶ ಮತ್ತು ಅಸ್ಸಾಂನಲ್ಲಿಯಂತೆ ನಮ್ಮಲ್ಲಿಯೂ ಹೊಸ ಜನಸಂಖ್ಯಾ ನೀತಿ ಜಾರಿಗೆ ತರಬೇಕಿದೆ ಎಂದು ರಾಜ್ಯ ಬಿಜೆಪಿ ನಾಯಕ ಸಿ ಟಿ ರವಿ ಹೇಳಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಲಭ್ಯವಿರುವ ಸಂಪನ್ಮೂಲ ಮಿತವಾಗಿದ್ದು, ಜನಸಂಖ್ಯೆ ಹೆಚ್ಚಾದರೆ ಪ್ರತಿಯೊಬ್ಬರಿಗೂ ಸಂಪನ್ಮೂಲ ದೊರಕುವಂತಾಗುವುದು ಕಷ್ಟ ಎಂದಿದ್ದಾರೆ.
ಆದರೆ, ಸಿ ಟಿ ರವಿ ಟ್ವೀಟ್ ಮೇಲ್ನೋಟಕ್ಕೆ ಕಾಣಿಸುವಷ್ಟು ಸರಳ ಉದ್ದೇಶದ್ದೇ ಎಂಬ ಅನುಮಾನವಂತೂ ಏಳುತ್ತದೆ. ಇದುವರೆಗೂ ಕಾಣಿಸದ ಸಂಪನ್ಮೂಲದ ಬಗೆಗಿನ ಕಾಳಜಿ ಇದ್ದಕ್ಕಿದ್ದಂತೆ ಕಾಣಿಸಿಕೊಂಡಿರುವುದಕ್ಕೂ, ಉತ್ತರ ಪ್ರದೇಶದಲ್ಲಿ ಎರಡಕ್ಕಿಂತ ಹೆಚ್ಚು ಮಕ್ಕಳು ಇರಬಾರದೆಂಬ ಕಾನುನಿನ ಕರಡು ಸಿದ್ಧವಾಗಿರುವುದಕ್ಕೂ ನಂಟಿದೆಯೇ ಎಂಬುದನ್ನು ಗಮನಿಸಬೇಕಿದೆ.
ಇದರೊಂದಿಗೇ, ನಾವು ಕೂಡ ನಾಲ್ಕಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಬೇಕು ಎಂದು ಕಲ್ಲಡ್ಕ ಪ್ರಭಾಕರ್ ಭಟ್ ಅವರಂಥ ನಾಯಕರು ಹೇಳುವುದು ಕೂಡ ಯಾವ ಉದ್ದೇಶದ್ದು ಎಂಬ ಪ್ರಶ್ನೆಯೂ ಏಳದೇ ಇರುವುದಿಲ್ಲ.

ಆದರೆ, ಯುಪಿ ಜಾರಿಗೆ ತರಲು ಹೊರಟ ಕಾನೂನಿನ ಬಗ್ಗೆ ಕಲ್ಲಡ್ಕ ಪ್ರಭಾಕರ್ ಭಟ್ ಕೂಡ ಪ್ರತಿಕ್ರಿಯಿಸಿದ್ದು, ಇಂಥದೇ ಕಾನೂನನ್ನು ಕರ್ನಾಟಕದಲ್ಲಿ ಜಾರಿಗೆ ತರಲು ಸಿಎಂಗೆ ಮನವಿ ಸಲ್ಲಿಸಲಾಗುವುದು ಎಂದಿದ್ದಾರೆ. ಇದು ರಾಷ್ಟ್ರೀಯ ನೀತಿಯಾಗಬೇಕು ಎಂದಿರುವ ಅವರು, ಮುಂದೆ ಬೇಕಾದರೆ ಮತ್ತೆ ಕಾನೂನು ಬದಲಿಸಿಕೊಳ್ಳಬಹುದು ಎಂಭ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇನ್ನೊಂದೆಡೆ, ಉತ್ತರ ಪ್ರದೇಶದ ಈ ಪ್ರಸ್ತಾಪಿತ ಕಾನೂನಿನಲ್ಲಿರುವ ಎರಡೇ ಮಕ್ಕಳು ಅಂಶಕ್ಕೆ ವಿಎಚ್ಪಿ ವಿರೋದ ವ್ಯಕ್ತಪಡಿಸಿರುವುದು ಕೂಡ ಪ್ರಭಾಕರ್ ಭಟ್ ಅವರ ನಿಲುವಿನದೇ ಇನ್ನೊಂದು ಆವೃತ್ತಿಯೇ ಎಂಬ ಪ್ರಶ್ನೆ ಕೂಡ ಕಾಡುತ್ತದೆ.
ಒಂದೆಡೆ ಅಲ್ಪಸಂಖ್ಯಾತ ಸಮುದಾಯದ ಜನಸಂಖ್ಯೆ ಹೆಚ್ಚದಂತೆ ನೋಡುವ ಹುನ್ನಾರ, ಇನ್ನೊಂದೆಡೆ ಹಿಂದೂ ಸಮುದಾಯದ ಜನಸಂಖ್ಯೆ ಹೆಚ್ಚುವಂತೆ ನಿಗಾ ವಹಿಸಬೇಕೆಂಬ ಧೋರಣೆ ಇವೆರಡೂ ಬೆಸೆದುಕೊಳ್ಳುವುದನ್ನೇ ಇಲ್ಲಿ ಕಾಣಬಹುದಾಗಿದೆ.



