Hijab Controversay: ಹಿಜಾಬ್, ಕೇಸರಿ ವಿವಾದಕ್ಕೆ ಹೊರಗಡೆಯವರಿಂದ ಪ್ರಚೋದನೆ: ಸಿಎ ಬೊಮ್ಮಾಯಿ

ಬೆಂಗಳೂರು: ರಾಜ್ಯದಲ್ಲಿ ಎದ್ದಿರುವಂತ ಹಿಜಾಬ್ ಮತ್ತು ಕೇಸರಿ ಶಾಲು ಸಂಘರ್ಷಕ್ಕೆ ಹೊರಗಡೆಯವರು ಪ್ರಚೋದನೆ ನೀಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಹಿಜಾಬ್ ಹಾಗೂ ಕೇಸರಿ ಶಾಲು ವಿವಾದ ಕುರಿತಂತೆ ಹಲವರು, ಹಲವು ರೀತಿಯ ಹೇಳಿಕೆ ನೀಡುತ್ತಿದ್ದಾರೆ. ದಯವಿಟ್ಟು ಯಾರೂ ಪ್ರಚೋದಿಸಬೇಡಿ. ಎಲ್ಲರೂ ಶಾಂತಿಯಿಂದ ವರ್ತಿಸೋಣ ಎಂಬುದಾಗಿ ಮನವಿ ಮಾಡಿದರು.
ಈ ಸಂಬಂಧದ ಪ್ರಕರಣ ಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿದೆ. ತೀರ್ಪಿನವರೆಗೆ ಎಲ್ಲರೂ ಕಾಯೋಣ ಎಂದ ಅವರು, ಹಿಜಾಬ್ ಮತ್ತು ಕೇಸರಿ ಶಾಲು ಸಂಘರ್ಷದ ಹಿಂದೆ ಹೊರಗಿನವರ ಪ್ರಚೋದನೆಯಿದೆ ಎಂಬುದಾಗಿ ಗಂಭೀರ ಆರೋಪ ಮಾಡಿದರು.
ಶಿಕ್ಷಣ ಸಚಿವರು, ಅಧಿಕಾರಿಗಳೊಟ್ಟಿಗೆ ಸಭೆ:
ಹಿಜಾಬ್ ಸಂಘರ್ಷ ಭುಗಿಲೆದ್ದಿರುವ ಹಿನ್ನೆಲೆಯಲ್ಲಿ ಸಭೆ ಕರೆದಿದ್ದು, ಇಂದು ಸಂಜೆ ಶಿಕ್ಷಣ ಸಚಿವರು, ಅಧಿಕಾರಿಗಳೊಟ್ಟಿಗೆ ಸಭೆ ನಡೆಸಲಿದ್ದಾರೆ. ಈ ಬೆಳವಣಿಗೆಗಳ ಬಗ್ಗೆ ಗೃಹ ಸಚಿವರೊಂದಿಗೂ ಮಾತುಕತೆ ನಡೆಸಲಾಗುತ್ತದೆ. ಶಾಲಾ ಕಾಲೇಜುಗಳಲ್ಲಿ ಮೊದಲಿನಂತೆ ಶಿಸ್ತು, ಪರಸ್ಪರ ಸೌಹರ್ದತೆ ಮೂಡಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಇದೇ ವೇಳೆ ಶಾಲೆಗಳ ರಜೆ ಮುಂದುವರಿಕೆ ಬಗ್ಗೆ ಸಂಜೆ ನಿರ್ಧಾರ ಮಾಡಲಾಗುತ್ತದೆ. ಮಕ್ಕಳ ವಿಚಾರದಲ್ಲಿ ನಾವು ಸಂವೇದನಾಶೀಲರಾಗಿರಬೇಕು ಎಂದು ಅಭಿಪ್ರಾಯಪಟ್ಟರು
