ಚಿಕ್ಕಮಗಳೂರು ರೈಲ್ವೆ ಸೇವೆ ಜ.3 ರಿಂದ ಪುನರಾರಂಭ

ಚಿಕ್ಕಮಗಳೂರು: ಸ್ಥಗಿತಗೊಂಡಿದ್ದ ಬೆಂಗಳೂರು ಹಾಗೂ ಶಿವಮೊಗ್ಗಕ್ಕೆ ತೆರಳುತ್ತಿದ್ದ ರೈಲ್ವೆ ಸೇವೆ ಜ.3 ಮತ್ತು 4ರಿಂದ ಮತ್ತೆ ಆರಂಭಗೊಳ್ಳಲಿದೆ.
ನಿರಂತರ ಮಳೆಯ ಕಾರಣದಿಂದ ಹಳಿಗಳ ಮೇಲೆ ಮಣ್ಣು ಹಾಗೂ ಬಂಡೆ ಕುಸಿತದಿಂದ ಹಲವೆಡೆ ಸಂಚಾರಕ್ಕೆ ವ್ಯತ್ಯಯ ಉಂಟಾಗಿದ್ದ ಹಿನ್ನೆಲೆಯಲ್ಲಿ ಬೆಂಗಳೂರನ್ನು ಸಂಪರ್ಕಿಸುತ್ತಿದ್ದ ಏಕೈಕ ರೈಲು ಮತ್ತು ಚಿಕ್ಕಮಗಳೂರು-ಶಿವಮೊಗ್ಗ ರೈಲುಗಳ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು.
ಪ್ರವಾಸಿ ತಾಣವೂ ಆದ ಕಾಫಿನಾಡು ಚಿಕ್ಕಮಗಳೂರು ವಿವಿಧ ವಾಣಿಜ್ಯ ಬೆಳೆಗಳ ಸಹಿತ ವಿವಿಧ ಕೃಷಿಯ ಸ್ಥಳವಾಗಿದ್ದು, ರೈತರಿಗೆ ಅನುಕೂಲವಾಗುವಂತಹ ಕೃಷಿ ಸಂಬಂಧಿತ ಕಿಸಾನ್ ರೈಲುಗಳ ಅವಶ್ಯಕತೆಯೂ ಇದೆ. ಅಲ್ಲದೆ ನಿತ್ಯ ಸಾವಿರಾರು ಜನರು ಪ್ರಯಾಣ ದೃಷ್ಟಿಯಿಂದ ರೈಲ್ವೆ ಸೇವೆ ಪುನರಾರಂಭಿಸುವಂತೆ ರೈಲ್ವೆ ಸಚಿವರಿಗೆ ಹಾಗೂ ರೈಲ್ವೆ ಅಧಿಕಾರಿಗಳಿಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಪತ್ರ ಬರೆದಿದ್ದರು.
ಚಿಕ್ಕಮಗಳೂರು-ಬೆಂಗಳೂರು ನಡುವೆ ರಾತ್ರಿ ಸ್ಲೀಪರ್ ರೈಲು, ಹಗಲಲ್ಲಿ ಬೆಂಗಳೂರು ಕಡೆಗೆ ಪ್ರಯಾಣಿಸುವವರಿಗೆ ಕಡೂರು, ಬೀರೂರಲ್ಲಿ ಸಂಪರ್ಕ ನೀಡುವ ಚಿಕ್ಕಮಗಳೂರು-ಬೀರೂರು-ಕಡೂರು ಡೆಮು ಸೇವೆ ಹಾಗೂ ಕೃಷಿ ಸಂಬಂಧಿತ ಕಿಸಾನ್ ರೈಲುಗಳ ಸೇವೆ ಬಗ್ಗೆ ಶೋಭಾ ಕರಂದ್ಲಾಜೆ ಚರ್ಚೆ ನಡೆಸಿದ್ದಾರೆ.
ಇದಕ್ಕೆ ಪೂರಕವಾಗಿ ಸ್ಪಂದಿಸಿರುವ ರೈಲ್ವೆ ಸಚಿವರು, ಸಮಯ ಬದಲಾವಣೆ, ಹೊಸ ರೈಲುಗಳ ಸೇವೆ ಬಗ್ಗೆ ಪರಿಶೀಲಿಸಿ ಪ್ರಸ್ತಾವನೆ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ



