ರೈಲು ಸಂಚಾರ ಪುನರಾರಂಭಕ್ಕೆ ಕೇಂದ್ರ ಸಚಿವರಿಗೆ ಶೋಭಾ ಕರಂದ್ಲಾಜೆ ಪತ್ರ

ಚಿಕ್ಕಮಗಳೂರು: ಜಿಲ್ಲಾ ಕೇಂದ್ರವನ್ನು ಸಂಪರ್ಕಿಸುತ್ತಿದ್ದ ರೈಲ್ವೆ ಸೇವೆ ಸ್ಥಗಿತದಿಂದ ಜನರಿಗೆ ಸಮಸ್ಯೆಯಾಗಿದ್ದು ತ್ವರಿತವಾಗಿ ಪುನರಾರಂಭಿಸಬೇಕೆಂದು ಕೃಷಿ ಸಚಿವೆ ಕರಂದ್ಲಾಜೆ ಕೇಂದ್ರ ರೈಲ್ವೆ ಸಚಿವೆ ಅಶ್ವಿನಿ ವೈಷ್ಣವ್ ಅವರಿಗೆ ಪತ್ರ ಬರೆದಿದ್ದಾರೆ.
ಚಿಕ್ಕಮಗಳೂರಿಗೆ ಇದ್ದ ರೈಲ್ವೆ ಸೇವೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ. ಶಿವಮೊಗ್ಗ-ಚಿಕ್ಕಮಗಳೂರು ರೈಲು ಇದ್ದರೂ ಬೀರೂರುವರೆಗೆ ಮಾತ್ರ ಸಂಚರಿಸುತ್ತಿದೆ. ಕೃಷಿ ಉತ್ಪನ್ನಗಳ ಜತೆಗೆ ಕಾಫಿ, ಅಡಕೆ, ಮೆಣಸು ಇತ್ಯಾದಿ ವಾಣಿಜ್ಯ ಬೆಳೆಗಳನ್ನು ಹೆಚ್ಚಾಗಿ ಈ ಭಾಗದಲ್ಲಿ ಬೆಳೆಯುತ್ತಿದ್ದು ಸಾಗಣೆಗೂ ತೊಂದರೆಯಾಗಿದೆ. ರೈಲ್ವೆ ಸೇವೆ ಕೇವಲ ಪ್ರಯಾಣಿಕರ ಉದ್ದೇಶಕ್ಕಾಗಿ ಮಾತ್ರ ಬಳಕೆಯಾಗದೆ, ಸರಕು ಸಾಗಣೆಗೂ ಬಳಕೆಯಾಗುತ್ತಿದೆ ಎಂದು ಉಲ್ಲೇಖಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಇಲಾಖೆ, ಬೀರೂರು ಚಿಕ್ಕಮಗಳೂರು ಮಧ್ಯೆ ನೈಸರ್ಗಿಕ ವಿಕೋಪದಿಂದ ಸಂಚಾರಕ್ಕೆ ತೊಡಕು ಉಂಟಾಗಿರುವುದರಿಂದ ರೈಲ್ವೆ ಸೇವೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಿದೆ ಎಂದು ತಿಳಿಸಿದ್ದು, ಪ್ರಯಾಣಿಕರು ಮತ್ತು ಕೃಷಿಕರ ಅನುಕೂಲತೆ ದೃಷ್ಟಿಯಿಂದ ರೈಲ್ವೆ ಮಾರ್ಗದ ಕಾಮಗಾರಿಗಳನ್ನು ಕೂಡಲೇ ಪೂರ್ಣಗೊಳಿಸಿ ರೈಲ್ವೆ ಸೇವೆ ಪುನರಾರಂಭಿಸುವಂತೆ ಮನವರಿಕೆ ಮಾಡಿರುವುದಾಗಿ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.
