ಕೃಷಿ ಕಾಯ್ದೆ ರದ್ದು: ತಡವಾದರೂ ರೈತ ಸಮುದಾಯಕ್ಕೆ ದೊಡ್ಡ ಕೊಡುಗೆ; ಬಿಎಸ್ವೈ ಹೇಳಿಕೆ

ಬಾಗಲಕೋಟೆ: ಪ್ರಧಾನಿ ನರೇಂದ್ರ ಮೋದಿ ಕೃಷಿ ಕಾಯ್ದೆ ಹಿಂಪಡೆಯುವ ಮೂಲಕ ರೈತ ಸಮುದಾಯಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ.ಸ್ವಲ್ಪ ತಡವಾದರೂ ಈ ದೃಢ ನಿರ್ಧಾರ ರೈತ ಸಮುದಾಯಕ್ಕೆ ದೊಡ್ಡ ಕೊಡುಗೆಯಾಗಿದೆ ಎಂದು ಬಾಗಲಕೋಟೆಯಲ್ಲಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಹೇಳಿದರು.
ಬಾಗಲಕೋಟೆಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿಯವರನ್ನು ಅಭಿನಂದಿಸುತ್ತೇನೆ.ಪ್ರತಿಷ್ಠೆ ಬದಿಗಿಟ್ಟುರೈತರ ಹೋರಾಟ ನೋಡಿದ ಮೇಲೆ ನರೇಂದ್ರ ಮೋದಿಯವರು ಮೂರು ಕಾಯ್ದೆ ಹಿಂಪಡೆದಿದ್ದು ದೇಶದಲ್ಲಿ ರೈತರ ವಿಶ್ವಾಸ, ಗೌರವ ಹೆಚ್ಚಾಗಿದೆ.ರೈತ ಸಮುದಾಯಕ್ಕೆ ಬಹಳ ಒಳ್ಳೆಯದಾಗುತ್ತೆ. ೧೧ತಿಂಗಳ ಸತ್ಯಾಗ್ರಹ ನಡೆಸಿಕೊಂಡು ಬಂದಿದ್ದಾರೆ. ತಡವಾದರೂ ಅದರ ಸತ್ಯಾಂಶ ನೋಡಿಕೊಂಡು ಪ್ರಧಾನಿಯವರು ನಿರ್ಧಾರ ತೆಗೆದುಕೊಂಡಿದ್ದಾರೆ.ರೈತರ ಹಿತದೃಷ್ಟಿಯಿಂದ ನಿರ್ಧಾರ ತೆಗೆದುಕೊಂಡಿದ್ದು ಸ್ವಾಗತಾರ್ಹ ಎಂದರು.
ಮುಂದಿನ ಚುನಾವಣೆ ಹಾಗೂ ಕಳೆದ ಚುನಾವಣೆಯಲ್ಲಿ ಬಿಜೆಪಿ ಸೋಲು ಹಿನ್ನೆಲೆ ಕೃಷಿ ಕಾಯ್ದೆ ಹಿಂಪಡೆಯಲಾಗಿದೆ ಎನ್ನುವ ವಿಚಾರವನ್ನು ಅಲ್ಲಗಳೆದ ಯಡಿಯೂರಪ್ಪ, ಇನ್ನೂ 20ವರ್ಷವಾದರೂ ಬಿಜೆಪಿ ಬಿಟ್ಟು ಯಾರೂ ಗೆಲ್ಲೋದಕ್ಕೆ ಆಗೋಲ್ಲ. ನರೇಂದ್ರ ಮೋದಿಯವರನ್ನು ವಿಶ್ವದ ನಾಯಕರೇ ಕೊಂಡಾಡುತ್ತಿದ್ದಾರೆ. ಮೋದಿಜಿ ವಿಶ್ವದ ನಾಯಕರೆಂದು ಪರಿಗಣಿಸಿದ್ದಾರೆ. ಮೋದಿಯವರ ಹೆಸರೆ ಸಾಕು ಬರುವ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿಗಳು ಬಹುಮತ ಪಡೆಯುತ್ತಾರೆ ಎಂದರು.
ಜನ ಸ್ವರಾಜ್ ಸಮಾವೇಶ ಮುಗಿದ ಬಳಿಕ ನಾನು ಮತ್ತೊಮ್ಮೆ ರಾಜ್ಯಾದ್ಯಂತ ಪ್ರವಾಸ ಮಾಡುವೆ, ಸಾಮೂಹಿಕವಾಗಿ ಬಿಜೆಪಿ ಪಕ್ಷವನ್ನು ತಳಮಟ್ಟದಿಂದ ಸಂಘಟಿಸಿ ಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 140ಸೀಟು ಗೆಲ್ಲಿಸುವ ಗುರಿ ಹೊಂದಲಾಗಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಸಚಿವ ಗೋವಿಂದ ಕಾರಜೋಳ, ಸಂಸದ ಪಿಸಿ ಗದ್ದಿಗೌಡರ,ಶಾಸಕ ವೀರಣ್ಣ ಚರಂತಿಮಠ, ದೊಡ್ಡನಗೌಡ ಪಾಟೀಲ್, ಸೇರಿದಂತೆ ಬಿಜೆಪಿ ಮುಖಂಡರು ಇದ್ದರು.
