Latestಜಿಲ್ಲಾ ಸುದ್ದಿದಾವಣಗೆರೆರಾಜಕೀಯ

ದಾವಣಗೆರೆ ಜಿಲ್ಲೆಯ ಇಬ್ಬರು ಶಾಸಕರ ಯಡವಟ್ಟು : ಬಿಜೆಪಿಗೆ ಇಕ್ಕಟ್ಟು…!

ದಾವಣಗೆರೆ: ಜಿಲ್ಲೆಯಲ್ಲಿ ಕೊರೊನಾ ಸೋಂಕು ದಿನೇ ದಿನೇ ಹೆಚ್ಚಾಗುತ್ತಿದೆ. ಅದರಲ್ಲಿಯೂ ಮಕ್ಕಳಲ್ಲಿ ಸೋಂಕು ಹೆಚ್ಚಾಗುತ್ತಿರುವುದು ಆತಂಕಕಾರಿ ಬೆಳವಣಿಗೆ. ಈ ಮಧ್ಯೆ, ಹೊನ್ನಾಳಿ ಶಾಸಕ ಎಂ. ಪಿ. ರೇಣುಕಾಚಾರ್ಯ ಹಾಗೂ ಜಗಳೂರು ಶಾಸಕ ಎಸ್. ವಿ. ರಾಮಚಂದ್ರಪ್ಪರ ಯಡವಟ್ಟುಗಳು ಬಿಜೆಪಿಗೆ ಇಕ್ಕಟ್ಟು ತಂದಿರುವ ಜೊತೆಗೆ ಇರಿಸು ಮುರಿಸಿಗೂ ಕಾರಣವಾಗಿದೆ.

ಕೋವಿಡ್ ಮಾರ್ಗಸೂಚಿ ಪಾಲಿಸುವಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ. ಆದ್ರೆ, ಈ ನಾಯಕರು ಮಾತ್ರ ಈ ನಿಮಯಾವಳಿಗೆ ಕ್ಯಾರೇ ಎನ್ನುತ್ತಿಲ್ಲ. ರೇಣುಕಾಚಾರ್ಯ ಅವರಂತೂ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಪಾಲ್ಗೊಂಡು ಜನರ ಮತ್ತು ಬಿಜೆಪಿ ನಾಯಕರ ಕೆಂಗಣ್ಣಿಗೆ ಗುರಿಯಾಗಿದ್ದರು. ಜೊತೆಗೆ ಹೊನ್ನಾಳಿ ತಾಲೂಕಿನ ಅರಬಗಟ್ಟೆಯ ಆರಕ್ಕೂ ಹೆಚ್ಚು ವಿದ್ಯಾರ್ಥಿನಿಯರಿಗೆ ಕೊರೊನಾ ಸೋಂಕು ತಗುಲಿತ್ತು. ಅಲ್ಲಿಗೆ ಹೋಗಿ ಮಕ್ಕಳು, ಮೇಲುಸ್ತುವಾರಿ ನೋಡಿಕೊಳ್ಳುವವರನ್ನೆಲ್ಲಾ ಒಂದೆಡೆ ಸೇರಿಸಿ ಜಾಗೃತಿ ಪಾಠ ಮಾಡಿದ್ದರು. ಇದಾದ ಮೇಲೆ ಸಾಸ್ವೆಹಳ್ಳಿಯ ಶಾಲೆಯೊಂದರಲ್ಲಿ ಮಕ್ಕಳ ಜೊತೆ ಕುಳಿತು ಊಟ ಮಾಡಿದ್ದರು. ಮೊದಲೇ ಮಕ್ಕಳಿಗೆ ಕೊರೊನಾ ಸೋಂಕು ವಕ್ಕರಿಸುವುದು ಆತಂಕಕ್ಕೆ ಕಾರಣವಾಗಿದ್ದರೆ ಶಾಸಕರ ಈ ನಡೆ ಈಗ ಚರ್ಚೆಗೂ ಕಾರಣವಾಗಿದೆ.

ಕೆಪಿಸಿಸಿ ಟ್ವೀಟ್ ಮಾಡಿ ರೇಣುಕಾಚಾರ್ಯರ ನಡೆಗೆ ವಿರೋಧ ವ್ಯಕ್ತಪಡಿಸಿತ್ತು. ಮಕ್ಕಳ ಜೊತೆ ಕುಳಿತು ಕೊರೊನಾ ನಿಯಮಾವಳಿ ಉಲ್ಲಂಘಿಸಿರುವ ಶಾಸಕರ ವಿರುದ್ಧ ಸಿಎಂ ಬಸವರಾಜ್ ಬೊಮ್ಮಾಯಿ ಅವರು ಕ್ರಮ ಕೈಗೊಳ್ಳುವರೇ ಎಂದು ಪ್ರಶ್ನಿಸಿತ್ತು. ಇದಕ್ಕೆ ಟ್ವೀಟ್ ನಲ್ಲೇ ಉತ್ತರಿಸಿದ್ದ ರೇಣುಕಾಚಾರ್ಯ, ಮಾಸ್ಕ್ ಧರಿಸಿ ಊಟ ಹೇಗೆ ಮಾಡಲು ಆಗುತ್ತೆ. ಇದು ಕಾಂಗ್ರೆಸ್ ಹೊಸ ಕೋವಿಡ್ ನಿಯಮ ಎಂದು ವ್ಯಂಗ್ಯವಾಡಿದ್ದರು.

ರೇಣುಕಾಚಾರ್ಯರು ಬೆಂಗಳೂರು, ಹೊನ್ನಾಳಿ, ಶಿವಮೊಗ್ಗ ಸೇರಿದಂತೆ ಎಲ್ಲೆಡೆ ಪ್ರವಾಸ ಮಾಡುತ್ತಾರೆ. ಈ ವೇಳೆ ಅವರ ಜೊತೆಗೆ ಬೆಂಬಲಿಗರು ಇರುತ್ತಾರೆ. ಇವರಲ್ಲಿ ಯಾರಿಗಾದರೂ ಕೊರೊನಾ ಸೋಂಕು ತಗುಲಿದ್ದರೆ, ಇವರು ಹೋದ ಕಡೆಗಳೆಲೆಲ್ಲಾ ಸೋಂಕು ಹರಡುವ ಭೀತಿಯೂ ಇದೆ. ಕೊರೊನಾ ಹೆಚ್ಚಳವಾಗುತ್ತಿರುವ ಇಂಥ ಪರಿಸ್ಥಿತಿಯಲ್ಲಿ ಹೋಗುವ ಅವಶ್ಯಕತೆ ಏನಿದೆ ಎಂಬ ಪ್ರಶ್ನೆಯೂ ಎದ್ದಿದೆ.

ಇನ್ನು ಜಗಳೂರು ಶಾಸಕ ಎಸ್. ವಿ. ರಾಮಚಂದ್ರಪ್ಪರು ವೀಕೆಂಡ್ ಕರ್ಫ್ಯೂ ಇದ್ದರೂ ಕೊರೊನಾ ಮಾರ್ಗಸೂಚಿ ಗಾಳಿಗೆ ತೂರಿ ಅದ್ಧೂರಿಯಾಗಿ ಜನುಮದಿನ ಆಚರಿಸಿಕೊಂಡಿದ್ದರು. ನಗರದ ಕೆ. ಬಿ. ಬಡಾವಣೆಯಲ್ಲಿ ನೂರಾರು ಮಂದಿ ಪಾಲ್ಗೊಂಡಿದ್ದರು. ಸಭೆ, ಸಮಾರಂಭ, ಜಾತ್ರೆ ಸೇರಿದಂತೆ ನಿರ್ಬಂಧ ಹೇರಿದ್ದರೂ, ಜನರು ಕೊರೊನಾದಂಥ ಸಂಕಷ್ಟದ ಸುಳಿಗೆ ಸಿಲುಕಿರುವಾಗ ಅದ್ಧೂರಿಯಾಗಿ ಬರ್ತ್ ಡೇ ಆಚರಿಸಿಕೊಳ್ಳುವ ಅಗತ್ಯ ಏನಿತ್ತು? ಕೊರೊನಾ ಸೋಂಕು ಜಾಸ್ತಿಯಾಗುತ್ತಿರುವ ಭಯ ಒಂದೆಡೆ, ವ್ಯಾಪಾರ ವಹಿವಾಟು ಇಲ್ಲದೇ, ದಿನಗೂಲಿ ಕೆಲಸ ಮಾಡುವವರು ಕೆಲಸ ಇಲ್ಲದೇ ಆರ್ಥಿಕ ಸಂಕಷ್ಟಕ್ಕೊಳಗಾಗಿರುವ ಸಂದಿಗ್ಧ ಪರಿಸ್ಥಿತಿಯಲ್ಲಿ ಹಣ ಖರ್ಚು ಮಾಡಿ ಜನರನ್ನು ಸೇರಿಸಿ ಎಲ್ಲರಿಗೂ ಊಟ ಹಾಕಿ ಹಬ್ಬದಂತೆ ಹುಟ್ಟುಹಬ್ಬ ಆಚರಿಸಿಕೊಂಡಿರುವ ಬಿಜೆಪಿ ಶಾಸಕರ ನಡೆಗೂ ವಿರೋಧ ವ್ಯಕ್ತವಾಗಿದೆ. ಜಗಳೂರು ತಾಲೂಕಿನ ವಿವಿಧೆಡೆಯಿಂದ ಬಂದಿದ್ದ ಎಸ್ ವಿ ಆರ್ ಅಭಿಮಾನಿಗಳು, ಬಿಜೆಪಿ ಮುಖಂಡರು, ಹಿತೈಷಿಗಳು ಸೇರಿದಂತೆ ಹೆಚ್ಚಿನ ಮಂದಿ ಮಾಸ್ಕ್ ಧರಿಸಿರಲಿಲ್ಲ. ಸಾಮಾಜಿಕ ಅಂತರವನ್ನೂ ಕಾಪಾಡಿರಲಿಲ್ಲ. ಸ್ಥಳದಲ್ಲಿದ್ದ ಪೊಲೀಸರು ಮೂಕಪ್ರೇಕ್ಷಕರಾಗಿದ್ದರು.

11 ಮಂದಿ ಮೇಲೆ ಕೇಸ್…!

ಇನ್ನು ಹುಟ್ಟುಹಬ್ಬ ಕಾರ್ಯಕ್ರಮ ಸಂಘಟಿಸಿದ್ದ ಆಯೋಜಕರ ಪೈಕಿ ಮೂವರ ಮೇಲೆ ಕೇಸ್ ದಾಖಲಾಗಿದೆ. ಕೆಟಿಜೆ ನಗರ ಎಎಸ್ಐ ವೀರಣ್ಣ ಅವರೇ ದೂರು ಕೊಟ್ಟಿದ್ದಾರೆ. ಅಂದರೆ ಪೊಲೀಸರೇ ಸುಮೊಟೋ ಕೇಸ್ ದಾಖಲಿಸಿದ್ದಾರೆ.

ಶಾಸಕ ಎಸ್. ವಿ. ರಾಮಚಂದ್ರಪ್ಪರ ಮನೆ ಪಕ್ಕದಲ್ಲಿ ಎಸ್ ವಿ ಆರ್ ಅಭಿಮಾನಿಗಳ ಬಳಗದ ವತಿಯಿಂದ ಕಾರ್ಯಕ್ರಮ ಆಯೋಜನೆ ಮಾಡಿದ್ದು, ಈ ಕಾರ್ಯಕ್ರಮದಲ್ಲಿ ಜಿಲ್ಲಾಡಳಿತದ ಮಾರ್ಗಸೂಚಿ ಉಲ್ಲಂಘನೆ, ಮಾಸ್ಕ್ ಧರಿಸದೇ ಇರುವುದು, ಸಾಮಾಜಿಕ ಅಂತರ ಕಾಪಾಡಿಕೊಳ್ಳದಿರುವುದು ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಸಮಾರಂಭ ಆಯೋಜಿಸಿದ್ದ ಮೂವರು ಸೇರಿದಂತೆ 11 ಮಂದಿ ವಿರುದ್ಧ ಕರ್ನಾಟಕ ಎಪಿಡಿಮಿಕ್ ಡಿಸೀಸಸ್ ಆ್ಯಕ್ಟ್ ಅಡಿ ಪ್ರಕರಣ ದಾಖಲಾಗಿಸಲಾಗಿದೆ.

ಒಟ್ಟಿನಲ್ಲಿ ಈ ನಾಯಕರ ನಡೆ ಬಿಜೆಪಿ ಪಾಳೆಯದಲ್ಲಿಯೇ ಅಸಮಾಧಾನ ವ್ಯಕ್ತವಾಗುತ್ತಿದೆ. ಜನರು ಮಾಸ್ಕ್ ಧರಿಸದಿದ್ದರೆ ದಂಡ ವಿಧಿಸಲಾಗುತ್ತೆ. ಉಲ್ಲಂಘನೆ ಮಾಡಿದರೆ ಕೂಡ ಕ್ರಮ ಕೈಗೊಳ್ಳಲಾಗುತ್ತದೆ. ಆದ್ರೆ, ಈ ನಾಯಕರ ವರ್ತನೆ ಎಷ್ಟರ ಮಟ್ಟಿಗೆ ಸರಿ. ವೀಕೆಂಡ್ ಕರ್ಫ್ಯೂ ಇದ್ದರೂ ಶಾಸಕರು ಬಹಿರಂಗವಾಗಿ ಜನುಮ ದಿನ ಆಚರಿಸಿಕೊಂಡರೂ ಇದನ್ನು ಯಾಕೆ ತಡೆ ಹಿಡಿಯಲಿಲ್ಲ. ಸ್ಥಳದಲ್ಲಿ ಪೊಲೀಸರು ಇದ್ದರೂ ಸುಮ್ಮನೆ ನೋಡಿಕೊಂಡು ಸುಮ್ಮನಿದ್ದರೆ ವಿನಾ ಯಾಕೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಂಡಿಲ್ಲ ಎಂಬುದು ಜನಸಾಮಾನ್ಯರ ಪ್ರಶ್ನೆಯಾಗಿದೆ.

ಪದೇ ಪದೇ ಶಾಸಕರು ಕೋವಿಡ್ ಉಲ್ಲಂಘನೆ ಮಾಡುತ್ತಲೇ ಇರುತ್ತಾರೆ. ಆದ್ರೆ, ಇವರಿಗೆ ಇದುವರೆಗೆ ಯಾವ ಕಾನೂನು ಕ್ರಮವೂ ಆಗಿಲ್ಲ. ಈ ನಿಟ್ಟಿನಲ್ಲಿ ಜಿಲ್ಲಾಡಳಿತವಾಗಲೀ, ಪೊಲೀಸ್ ಇಲಾಖೆಯಾಗಲೀ ಮನಸ್ಸು ಮಾಡಿಲ್ಲ. ಇನ್ನು ಅರಬಗಟ್ಟೆ ಕೋವಿಡ್ ಸೆಂಟರ್ ನಲ್ಲಿ ಎಂ. ಪಿ. ರೇಣುಕಾಚಾರ್ಯ ಅವರು ಕಳೆದ ವರ್ಷ ಹೋಮ, ಹವನ ಮಾಡಿದ್ದರು. ಆಗ ಪ್ರಕರಣ ದಾಖಲಾಗಿದ್ದರೂ, ಯಾವುದೇ ಕ್ರಮವಂತೂ ಆಗಿಲ್ಲ. ಜನಸಾಮಾನ್ಯರಿಗಷ್ಟೇ ಕೋವಿಡ್ ಮಾರ್ಗಸೂಚಿಗಳು, ಜನಪ್ರತಿನಿಧಿಗಳಿಗೆ ಅನ್ವಯಿಸುವುದಿಲ್ಲವಾ ಎಂಬ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.

Spread the love

Related Articles

Leave a Reply

Your email address will not be published. Required fields are marked *

Back to top button