
ಬೆಂಗಳೂರು: ಕೋವಿಡ್ ಸಂಕಷ್ಟದ ಹಿನ್ನಲೆಯಲ್ಲಿ ನನ್ನ ಹುಟ್ಟಿದ ದಿನವನ್ನು ಯಾವುದೇ ವಿಶೇಷ ರೀತಿಯಲ್ಲಿ ಆಚರಿಸಿಕೊಳ್ಳುತ್ತಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಟ್ವೀಟ್ ಮಾಡಿರುವ ಯಡಿಯೂರಪ್ಪ ‘ಆತ್ಮೀಯರೇ, ಹಿತೈಷಿಗಳೇ, ಕೊರೋನಾ ಸಂಕಷ್ಟಗಳ ಹಿನ್ನಲೆಯಲ್ಲಿ, ನನ್ನ ಹುಟ್ಟಿದ ದಿನವನ್ನು ಯಾವುದೇ ವಿಶೇಷ ರೀತಿಯಲ್ಲಿ ನಾನು ಆಚರಿಸಿಕೊಳ್ಳುತ್ತಿಲ್ಲ. ಆದ್ದರಿಂದ ಯಾರೂ ಕೂಡ ಹಾರ, ತುರಾಯಿ, ಉಡುಗೊರೆ ಇತ್ಯಾದಿ ತರಬೇಡಿ ಎಂದು ಕೋರುತ್ತೇನೆ. ನೀವು ಇದ್ದಲ್ಲಿಂದಲೇ ಹಾರೈಸಿ. ನಿಮ್ಮೆಲ್ಲರ ಪ್ರೀತಿ, ಅಭಿಮಾನ, ಆಶೀರ್ವಾದಗಳೇ ನನಗೆ ಶ್ರೀರಕ್ಷೆ ಎಂದು ಬರೆದುಕೊಂಡಿದ್ದಾರೆ.
80ನೇ ವರ್ಷದ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಬೆಂಗಳೂರಿನ ಸಂಜಯ್ ನಗರದಲ್ಲಿರುವ ರಾಧಾಕೃಷ್ಣ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಪೂಜೆಯಲ್ಲಿ ಬಿಡಿಎ ಅಧ್ಯಕ್ಷ ವಿಶ್ವನಾಥ್, ಎಂಎಲ್ಸಿ ನಾರಾಯಣಸ್ವಾಮಿ ಸೇರಿದಂತೆ ಕೆಲವು ಮಂದಿ ಭಾಗಿಯಾಗಿದ್ರು. ಜೊತೆಗೆ ಬಿಎಸ್ವೈ ಬರ್ತಡೇ ಹಿನ್ನೆಲೆ ಬೆಂಗಳೂರಿನ ಅಣ್ಣಮ್ಮ ದೇವಿ ದೇವಸ್ಥಾನದಲ್ಲಿ ಯಡಿಯೂರಪ್ಪ ಬೆಂಬಲಿಗರು ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಕುಮಾರಕೃಪ ರಸ್ತೆಯಲ್ಲಿರುವ ಕಾವೇರಿ ನಿವಾಸದಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಸಿಂಪಲ್ ಆಗಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದು ಈ ವೇಳೆ ಬಿಎಸ್ವೈ ರೈತರಿಗೆ ಉಚಿತ ಟ್ರ್ಯಾಕ್ಟರ್ಗಳನ್ನ ವಿತರಣೆ ಮಾಡಿದ್ದಾರೆ. ಬಿಎಸ್ವೈ ಅವರಿಗೆ ಸಚಿವರಾದ ಎಸ್.ಟಿ.ಸೋಮಶೇಖರ್, ಕೆ.ಗೋಪಾಲಯ್ಯ, ಭೈರತಿ ಬಸವರಾಜ್, ಎಸ್.ಆರ್. ವಿಶ್ವನಾಥ್ ಪುತ್ರರಾದ ಬಿ.ವೈ.ರಾಘವೇಂದ್ರ, ಬಿ.ವೈ.ವಿಜಯೇಂದ್ರ ಶುಭ ಹಾರೈಸಿದ್ದಾರೆ.



