ಅಪ್ಪು ನಿಧನದ ಬಳಿಕ ಬದುಕು ಡಿಪ್ರೆಸ್ ಆಯಿತು

ನಟ ಪುನೀತ್ ರಾಜ್ಕುಮಾರ್ ಅಗಲಿ ನಾಲ್ಕು ತಿಂಗಳು ಕಳೆದಿದೆ. ಆದ್ರೆ ಇಂದಿಗೂ ಅಪ್ಪು ಅವರನ್ನ ನೆನಪಿಸಿಕೊಳ್ಳುವ ಕೆಲಸಗಳು ನಿತ್ಯ ನಡೆಯುತ್ತಲೆ ಇದೆ. ಪ್ರತಿ ದಿನ ಒಬ್ಬರಲ್ಲ ಒಬ್ಬರ ಪುನೀತ್ ಮನೆಗೆ ಭೇಟಿ ನೀಡಿ ಕುಟುಂಬ ಸದಸ್ಯರಿಗೆ ಸಾಂತ್ವಾನ ಹೇಳುತ್ತಿದ್ದಾರೆ. ಇದೀಗ ನಟ ಅರ್ಜುನ್ ಸರ್ಜಾ ಪತ್ನಿ ಜೊತೆ ಪುನೀತ್ ಮನೆಗೆ ಭೇಟಿ ನೀಡಿ ಅಶ್ವಿನಿ ಪುನೀತ್ ರಾಜ್ಕುಮಾರ್ ಅವರಿಗೆ ಸಾಂತ್ವಾನ ಹೇಳಿದ್ದಾರೆ.
ಯಾರು ಊಹಿಸಿರದ ರೀತಿಯಲ್ಲಿ ನಟ ಪುನೀತ್ ರಾಜ್ಕುಮಾರ್ 2021 ಅಕ್ಟೋಬರ್ 29ರಂದು ಇಹಲೋಕ ತ್ಯಜಿಸಿದ್ರು. ಅಪ್ಪು ನಿಧನ ಹೊಂದಿದ ಸುದ್ದಿ ತಿಳಿಯುತ್ತಿದ್ದಂಗೆ ಲಕ್ಷಾಂತರ ಅಭಿಮಾನಿಗಳು ಅಪ್ಪು ಅಂತಿಮ ದರ್ಶನ ಪಡೆಯಲು ಆಗಮಿಸಿದ್ರು. ಇನ್ನೂ ಚಿತ್ರರಂಗವೂ ಕೂಡ ಕೆಲಸ ಕಾರ್ಯಗಳನ್ನ ಸ್ಥಗಿತಗೊಳಿಸಿ ಅಪ್ಪು ನಿಧನಕ್ಕೆ ಕಂಬನಿ ಮಿಡಿದಿತ್ತು. ಜೊತೆಗೆ ಪರಭಾಷೆಯ ಕಲಾವಿದರು ಕೂಡ ಸ್ವತಃ ಸಹೋದರನನ್ನೇ ಕಳೆದುಕೊಂಡಿದ್ದೇವೆ ಅನ್ನೋ ಅಷ್ಟರ ಮಟ್ಟಿಗೆ ಮರುಗಿದ್ರು. ಕನ್ನಡದ ಜೊತೆಗೆ ಪರಭಾಷೆಯ ಕಲಾವಿದರು ಕೂಡ ಅಪ್ಪು ಕುಟುಂಬಕ್ಕೆ ಭೇಟಿ ನೀಡಿ ಕುಟುಂಬ ಸದಸ್ಯರಿಗೆ ಸಾಂತ್ವಾನ ಹೇಳಿದ್ದರು.
ಪುನೀತ್ ರಾಜ್ಕುಮಾರ್ ನಿಧನದ ಸುದ್ದಿ ತಿಳಿಯುತ್ತಿದ್ದಂಗೆ ನಟ ಅರ್ಜುನ್ ಸರ್ಜಾ ತುಂಬಾನೆ ಡಿಪ್ರೆಸ್ ಆಗಿದ್ರು. ಜೊತೆಗೆ ಅಪ್ಪು ಅಂತಿಮ ದರ್ಶನ ಪಡೆದು ಪುನೀತ್ ಪತ್ನಿ ಅಶ್ವಿನಿಗೆ ಸಾಂತ್ವಾನ ಹೇಳಿದ್ದರು. ಇದೀಗ ಮತ್ತೆ ಪತ್ನಿ ನಿವೇದಿತಾ ಜೊತೆ ಪುನೀತ್ ಕುಟುಂಬಕ್ಕೆ ಭೇಟಿ ನೀಡಿ ಸಾಂತ್ವಾನ ಹೇಳಿದ್ದಾರೆ.
ಪುನೀತ್ ಮನೆಗೆ ಭೇಟಿ ನೀಡಿದ ಬಳಿಕ ಮಾತನಾಡಿದ ಅರ್ಜುನ್ ಸರ್ಜಾ “ಪುನೀತ್ ನಿಧನರಾಗಿ ಮೂರು ತಿಂಗಳು ಆಯ್ತು. ಈ ಹಿಂದೆ ನಾನು ಬಂದು ಹೋಗಿದ್ದೆ. ಆದರೆ ನನ್ನ ಹೆಂಡತಿ ಬಂದಿರಲಿಲ್ಲ. ಅಪ್ಪು ಅವರಿಗೆ ನನ್ನ ಹೆಂಡತಿ ತುಂಬಾ ಕ್ಲೋಸ್. ಚಿಕ್ಕ ವಯಸ್ಸಿನಿಂದಲೂ ಜೊತೆಯಲ್ಲಿ ಬೆಳೆದವರು. ಹಾಗಾಗಿ ಪತ್ನಿ ಜೊತೆ ಬಂದು ಪುನೀತ್ ಕುಟುಂಬದವರ ಯೋಗಕ್ಷೇಮ ವಿಚಾರಿಸಿದ್ದೇನೆ. ಅಪ್ಪು ಬಗ್ಗೆ ಎಷ್ಟು ಹೇಳಿದರೂ ಅದು ಕಮ್ಮಿ. ಇಷ್ಟು ಚಿಕ್ಕ ವಯಸ್ಸಿನಲ್ಲಿ ದೊಡ್ಡ ಸಾಧನೆ ಮಾಡಿರುವ ಹುಡುಗನನ್ನು ಎಷ್ಟು ನೆನಪಿಸಿಕೊಂಡರೂ ಅದು ಕಮ್ಮಿ ಎನಿಸುತ್ತದೆ. ಅಪ್ಪು ನಿಧನದ ಬಳಿಕ ಬದುಕು ಡಿಪ್ರೆಸ್ ಆಯಿತು. ನಮಗೆ ಹೀಗಾಗಿರುವಾಗ ಅವರ ಕುಟುಂಬಕ್ಕೆ ಎಷ್ಟು ನೋವಾಗಿರುತ್ತದೆ ಎಂಬುದನ್ನು ನಾವು ಊಹಿಸಬಹುದು. ಕಷ್ಟದಲ್ಲಿ ನಾವಿದ್ದೇವೆ ಎಂದು ಹೇಳ ಬಹುದು. ಇನ್ನೇನೂ ಹೇಳಲು ಸಾಧ್ಯವಿಲ್ಲ ಎಂದಿದ್ದಾರೆ.



