ಕಾಂಗ್ರೆಸ್ ನಿಂದ ಬಿಜೆಪಿ ಸೇರಿರುವ ಯಾವ ಶಾಸಕರೂ ಕಾಂಗ್ರೆಸ್ ಸೇರುವ ಪ್ರಶ್ನೆಯೇ ಇಲ್ಲ: ಸಚಿವ ಮುನಿರತ್ನ

ಕೋಲಾರ : ಕಾಂಗ್ರೆಸ್ ಪಕ್ಷದಿಂದ ಆಪರೇಷನ್ ಕಮಲದ ಮೂಲಕ ಬಿಜೆಪಿ ಸೇರಿರುವ ಯಾವೊಬ್ಬ ಮಂತ್ರಿ ಮತ್ತು ಶಾಸಕರೂ ಕಾಂಗ್ರೆಸ್ ಸೇರುವ ಪ್ರಶ್ನೆಯೇ ಇಲ್ಲ, ನಾವು ಹಾಗೇನಾದರೂ ಕಾಂಗ್ರೆಸ್ ಗೆ ಸೇರುವುದಾದರೆ ಸಿದ್ದರಾಮಯ್ಯ ಮತ್ತು ರಮೇಶ್ ಕುಮಾರ್ ಕಾಂಗ್ರೆಸ್ ಪಕ್ಷದಲ್ಲಿ ಇರುವುದಿಲ್ಲ ಎಂದು ಮೊದಲೇ ಹೇಳಿದ್ದಾರೆ ಎಂದು ಸಿದ್ದರಾಮಯ್ಯಗೆ ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ ಟಾಂಗ್ ನೀಡಿದ್ದಾರೆ.
ಜಿಲ್ಲಾಡಳಿತ ಏರ್ಪಡಿಸಲಾಗಿದ್ದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿ ಪಕ್ಷ ನಮ್ಮನ್ನು ಗೌರವದಿಂದ ನಡೆಸಿಕೊಳ್ಳುತ್ತಿದೆ. ಪಕ್ಷ ಬಿಡುವ ಅನಿವಾರ್ಯತೆ ಮತ್ತು ಪ್ರಶ್ನೆ ನಮ್ಮಲ್ಲಿ ಇಲ್ಲ. ಅಂತಹ ಪರಿಸ್ಥಿತಿ ಯಾವತ್ತೂ ಬರುವುದಿಲ್ಲ ಎಂದು ಸ್ವಷ್ಟನೆ ನೀಡಿದರು.
ಕೋಲಾರ ಜಿಲ್ಲೆಯ ಉಸ್ತುವಾರಿ ಸ್ಥಾನ ನನಗೆ ಯಾವುದೇ ಅಸಮಾಧಾನವಿಲ್ಲ. ಕೊಟ್ಟಿರುವ ಕೆಲಸ ನಿರ್ವಹಿಸುತ್ತೇನೆ. ತವರು ಜಿಲ್ಲೆ ಬಿಟ್ಟು ಬೇರೆ ಜಿಲ್ಲೆಗಳಲ್ಲಿ ಕೆಲಸ ಮಾಡಲು ಪಕ್ಷದ ಹೈಕಮಾಂಡ್ ಸೂಚನೆ ನೀಡಿದೆ. ಪಕ್ಷದ ತೀರ್ಮಾನಕ್ಕೆ ಎಲ್ಲರೂ ಬದ್ದರಾಗಿರಬೆಕು ಎಂದರು.
ಸಚಿವ ಸಂಪುಟ ಪುನರ್ ರಚನೆ ಪಕ್ಷದ ತೀರ್ಮಾನ, ಸಚಿವ ಈಶ್ವರಪ್ಪ ಸೆರಿದಂತೆ ಎಲ್ಲರೂ ಹೈಕಮಾಂಡ್ ತೆಗೆದುಕೊಳ್ಳುವ ತೀರ್ಮಾನಕ್ಕೆ ಬಧ್ದರಾಗಿರಬೇಕು. ಶಾಸಕ ರಮೇಶ್ ಜಾರಕಿಹೊಳಿ ಸಂಪರ್ಕದಲ್ಲಿ ಕಾಂಗ್ರೆಸ್ ಪಕ್ಷದ ಹಲವು ಶಾಸಕರು ಇರುವುದು ನಿಜ ಅವರು ಒಬ್ಬ ಪ್ರಭಾವಿ ವ್ಯಕ್ತಿ ಅವರ ಹೇಳಿಕೆಯನ್ನು ತೆಗೆದುಹಾಕುವಂತಿಲ್ಲ ಎಂದು ಹೇಳಿದರು.
ಡಿ.ಕೆ ಶಿವಕುಮಾರ್ ರವರ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಮೆಕೆದಾಟು ಪಾದಯಾತ್ರೆಯ ಬಗ್ಗೆ ವ್ಯಂಗ್ಯವಾಗಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ ರಾಜಕೀಯ ಹಾಗು ಪ್ರಚಾರದ ಯೋಜನೆ ಅದಾಗಿದೆ. ಬೆಂಗಳೂರು ನಗರಕ್ಕೆ ನೀರು ಸರಬರಾಜು ಮಾಡುವಂತಹ ಯೋಜನೆ ಅದು ಯಾವ ಭಾಗದಲ್ಲಿ ಪಾದಯಾತ್ರೆ ಮಾಡಿದ್ದರೋ ಆ ಭಾಗದಲ್ಲಿ ರಾಜಕೀಯಕ್ಕಾಗಿ ಕಾಂಗ್ರೆಸ್ ಮಾಡಿರುವ ಪಾದಯಾತ್ರೆ ಅದಾಗಿತ್ತು. ರಾಜ್ಯ ಹಾಗು ಕೇಂದ್ರ ಸರ್ಕಾರಗಳು ಮೇಕೆದಾಟು ಯೋಜನೆ ಜಾರಿಗೊಳಿಸಲು ಬದ್ದವಾಗಿದೆ. ಅದಕ್ಕೆ ಕೆಲವು ಕಾನೂನು ತೊಡಕುಗಳಿವೆ. ಅದನ್ನು ಸರಿಪಡಿಸಿಕೊಂಡು ಮೇಕೆದಾಟು ಯೋಜನೆ ಡಿಪಿಆರ್ ನಲ್ಲಿ ಕೋಲಾರ ಜಿಲ್ಲೆಯ ಹೆಸರು ಸೇರಿಸುವ ಕೆಲಸ ನಾನು ಮಾಡುತ್ತೇನೆ. ಕೋಲಾರ ಜಿಲ್ಲೆಯ ಜನತೆಯ ಜೊತೆಗೆ ನಾನಿದ್ದೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
