ಪ್ರಧಾನಿ ಭದ್ರತಾ ಲೋಪ ಪ್ರಕರಣ: 14 ಪೊಲೀಸ್ ಅಧಿಕಾರಿಗಳಿಗೆ ಪುರಸ್ಕಾರ

ಚಂಡೀಗಢ: ಪ್ರಧಾನಿ ನರೇಂದ್ರ ಮೋದಿ ಪಂಜಾಬ್ ನ ಜಲಂಧರ್ ಗೆ ಭೇಟಿ ನೀಡಿದ ಸಂದರ್ಭದಲ್ಲಿ ಫಿರೋಜ್ ಪುರದ ಫ್ಲೈ ಓವರ್ ಮೇಲೆ ನಡೆದ ಭದ್ರತಾ ಲೋಪ ಘಟನೆ ದೇಶಾದ್ಯಂತ ವ್ಯಾಪಕ ಚರ್ಚೆಗೆ ಕಾರಣವಾಗಿತ್ತು.
ಈ ಸಂದರ್ದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ಸಂಭವಿಸದಂತೆ ಕರ್ತವ್ಯ ನಿರ್ವಹಿಸಿದ್ದ 14 ಮಂದಿ ಪೊಲೀಸರನ್ನು ಪುರಸ್ಕಾರ ನೀಡಿ ಗೌರವಿಸಲಾಗಿದೆ.
ಭದ್ರತಾ ಲೋಪ ಘಟನೆಯಿಂದಾಗಿ ಆಗಿನ ಸಿಎಂ ಆಗಿದ್ದ ಚನ್ನಿ ಹಾಗೂ ಪಂಜಾಬ್ ಪೊಲೀಸರ ಮೇಲೆ ಆರೋಪಗಳು ಕೇಳಿ ಬಂದಿದ್ದವು. ಭದ್ರತಾ ಲೋಪ ಘಟಿಸಿದ ಸಂದರ್ಭದಲ್ಲಿ ಕರ್ತವ್ಯ ನಿಷ್ಠೆ ಮೆರೆದಿದ್ದ 14 ಮಂದಿ ದಕ್ಷ ಪೊಲೀಸ್ ಅಧಿಕಾರಿಗಳನ್ನು ಪುರಸ್ಕರಿಸುವ ಆದೇಶವನ್ನು ಡಿಜಿಪಿ ಹೊರಡಿಸಿದ್ದರು. ಇದೀಗ ಅಂದು ಕರ್ತವ್ಯ ನಿರ್ವಹಿಸಿದ್ದ 14 ಮಂದಿ ಪೊಲೀಸರನ್ನು ಪುರಸ್ಕಾರಿಸಿ ಗೌರವಿಸಲಾಗಿದೆ.
ಘಟನೆ ವಿವರ
ಪ್ರಧಾನಿ ನರೇಂದ್ರ ಮೋದಿ ಪಂಜಾಬ್ ನ ಫಿರೋಜ್ ಪುರದಲ್ಲಿ ಸಮಾವೇಶ ಉದ್ದೇಶಿಸಿ ಮಾತನಾಡಬೇಕಿತ್ತು. ಕಾರ್ಯಕ್ರಮ ನಿಗದಿಯಾಗಿದ್ದ ಸ್ಥಳಕ್ಕೆ ಹೆಲಿಕಾಪ್ಟರ್ ನಲ್ಲಿ ಮೋದಿ ಆಗಮಿಸಬೇಕಿತ್ತು ಆದರೆ ವಾತಾವರಣ ಸರಿ ಇಲ್ಲದ ಕಾರಣ ಅನಿವಾರ್ಯವಾಗಿ ಕಾರಿನಲ್ಲಿ ಬರಬೇಕಾಯಿತು. ಮೆಮೋರಿಯಲ್ ನಿಂದ 30 ಕಿ.ಮೀ ದೂರದಲ್ಲಿ ಫ್ಲೈ ಓವರ್ ಮೇಲೆ ಕಾನ್ವಾಯ್ ಬರುತ್ತಿದ್ದಂತೆ ಪ್ರತಿಭಟನಾಕಾರರು ಸುತ್ತುವರೆದರು.
ಪ್ರತಿಭಟನೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸುಮಾರು 10 ರಿಂದ 15 ನಿಮಿಷ ಫ್ಲೈ ಓವರ್ ನಲ್ಲಿ ಸಿಲುಕಿದ್ದರು, ಬಳಿಕ ಬಟಿಂಡಾದಲ್ಲಿ ನಡೆಯಬೇಕಿದ್ದ ಕಾರ್ಯಕ್ರಮವನ್ನು ರದ್ದುಗೊಳಿಸಿ ಏರ್ಪೋರ್ಟ್ಗೆ ತೆರಳಿದರು. ಈ ಘಟನೆ ವ್ಯಾಪಾಕ ಟೀಕೆಗೆ ಗುರಿಯಾಗಿತ್ತು.
