ಹೊಂಬಾಳೆ ಬ್ಯಾನರ್ನಲ್ಲಿ ಒಂದಾಗಲಿರೋ ಶಿವಣ್ಣ, ಸಂತೋಷ್

ಕೊರೊನಾ ಕೊಂಚ ಕಡಿಮೆ ಆಗ್ತಿದ್ದಂಗೆ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾಗಿರೋ ನಟ ಶಿವರಾಜ್ ಕುಮಾರ್ ಕಡೆಯಿಂದ ಅಭಿಮಾನಿಗಳಿಗೆ ಮತ್ತೊಂದು ಸಿಹಿ ಸುದ್ದಿ ಸಿಗೋ ಸಾಧ್ಯತೆ ಇದೆ. ಮೊನ್ನೆ ಮೊನ್ನೆ ತಾನೇ ಶಿವಣ್ಣ ಮುಂದಿನ ಚಿತ್ರದಲ್ಲಿ ರೆಟ್ರೋ ಲುಕ್ನಲ್ಲಿ ಕಾಣಿಸಿಕೊಳ್ತಾರೆ ಅನ್ನೊ ಸುದ್ದಿಯಾಗಿತ್ತು. ಇದೀಗ ಹ್ಯಾಟ್ರಿಕ್ ಹಿರೋ ನಟನೆಯ 127ನೇ ಚಿತ್ರದ ಮಾತುಕತೆ ನಡೆಯುತ್ತಿದೆ ಅನ್ನೋ ಸುದ್ದಿ ಗಾಂಧಿನಗರದಲ್ಲಿ ಕೇಳಿ ಬರ್ತಿದೆ.
ವರ್ಷಕ್ಕೆ ಕಮ್ಮಿ ಎಂದರು ಶಿವಣ್ಣ ನಟನೆಯ ನಾಲ್ಕೈದು ಸಿನಿಮಾಗಳು ರಿಲೀಸ್ ಆಗುತ್ತಿದ್ದವು. ಆದರೆ ಕೊವಿಡ್ನಿಂದಾಗಿ ಚಿತ್ರಗಳ ಸಂಖ್ಯೆ ಕಮ್ಮಿಯಾಗಿದ್ದು ಇದೀಗ ಮತ್ತೆ ಶಿವರಾಜ್ ಕುಮಾರ್ ಫುಲ್ ಬ್ಯುಸಿಯಾಗಿದ್ದಾರೆ. ಬ್ಯಾಕ್ ಟು ಬ್ಯಾಕ್ ಚಿತ್ರಗಳಿಗೆ ಬಣ್ಣ ಹಚ್ಚುತ್ತಿರೋ ಶಿವಣ್ಣ ಮುಂದಿನ ಸಿನಿಮಾದಲ್ಲಿ ನಿರ್ದೇಶಕ ಸಂತೋಷ್ ಆನಂದ್ ರಾಮ್ ಜೊತೆ ಕೈ ಜೋಡಿಸಲಿದ್ದಾರೆ ಅನ್ನೋ ಸುದ್ದಿ ಹರಿದಾಡುತ್ತಿದೆ.
ಪುನೀತ್ ನಟನೆಯ ರಾಜಕುಮಾರ ಹಾಗೂ ಯುವರತ್ನ ಚಿತ್ರಗಳನ್ನ ನಿರ್ದೆಶನ ಮಾಡಿದ್ದ ಸಂತೋಷ್ ಆನಂದ್ ರಾಮ್ ಶಿವಣ್ಣನ ಜೊತೆ ಸಿನಿಮಾ ಮಾಡಿಲ್ಲ ಎಂಬ ಕೊರಗು ಅವರ ಅಭಿಮಾನಿಗಳಿಗಿತ್ತು. ಇದೀಗ ಅದಕ್ಕೆ ಕಾಲ ಕೂಡಿ ಬಂದಿದ್ದು ಇಬ್ಬರು ಒಂದಾಗೋ ಕಾಲ ಹತ್ತಿರವಾಗಿದೆ.
ಹೊಂಬಾಳೆ ಬ್ಯಾನರ್ನಲ್ಲಿ ತಯಾರಾಗಲಿರೋ ಸಿನಿಮಾದಲ್ಲಿ ಶಿವಣ್ಣ ನಟಿಸುತ್ತಿದ್ದು ಈಗಾಗ್ಲೆ ನಿರ್ಮಾಪಕ ವಿಜಯ್ ಕಿರಗಂದೂರು ಜೊತೆ ಒಂದು ಸುತ್ತಿನ ಮಾತುಕತೆ ನಡೆಸಿದ್ದಾರಂತೆ. ಅಲ್ಲದೆ ಸಂತೋಷ್ ಆನಂದ್ ರಾಮ್ ಶಿವಣ್ಣನಿಗೆ ಕಥೆ ರೆಡಿಮಾಡಿಕೊಂಡಿದ್ದಾರೆ ಎನ್ನಲಾಗ್ತಿದೆ.
ಸದ್ಯ ಶಿವಣ್ಣ ಕೈಯಲ್ಲಿ ಬೈರಾಗಿ, ನೀ ಸಿಗೋವರೆಗೂ ಹಾಗೂ ವೇದ ಸಿನಿಮಾಗಳಿವೆ.ಅಲ್ಲದೆ ನಿರ್ದೇಶಕ ಸಂತೋಷ್ ಆನಂದ್ ರಾಮ್ ಜಗ್ಗೇಶ್ ನಟನೆಯ ರಾಘವೇಂದ್ರ ಸ್ಟೋರ್ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರದ ಬಳಿಕ ಯುವರಾಜ್ ಕುಮಾರ್ ಜೊತೆ ಸಿನಿಮಾ ಮಾಡಲಿದ್ದಾರಂತೆ. ಅಲ್ಲದೆ ಹೊಂಬಾಳೆ ಟೀಂ ಕೆಜಿಎಫ್ 2 ಚಿತ್ರದ ಪ್ರಮೋಶನ್ ಬಗ್ಗೆ ಗಮನ ಹರಿಸುತ್ತಿದೆ. ಹೀಗಾಗಿ ಈ ಎಲ್ಲಾ ಸಿನಿಮಾಗಳು ಮುಗಿದ ಬಳಿಕವಷ್ಟೇ ಹೊಂಬಾಳೆ ಬ್ಯಾನರ್ನಲ್ಲಿ ಶಿವಣ್ಣ, ಸಂತೋಷ್ ಆನಂದ್ ರಾಮ್ ಒಂದಾಗಲಿದ್ದಾರೆ ಅನ್ನೋ ಸುದ್ದಿ ಹರಿದಾಡುತ್ತಿದೆ.




