ಭಾರ್ಗವಿ ನಾರಾಯಣ್ ನಿಧನಕ್ಕೆ ಕಂಬನಿ ಮಿಡಿದ ಚಿತ್ರರಂಗ

ಕನ್ನಡದ ರಂಗಭೂಮಿ, ಕಿರುತೆರೆ ಹಾಗೂ ಸಿನಿಮಾಗಳಲ್ಲಿ ಗುರುತಿಸಿಕೊಂಡಿದ್ದ ಹಿರಿಯ ಕಲಾವಿದೆ ಭಾರ್ಗವಿ ನಾರಾಯಣ್ ನಿಧನಕ್ಕೆ ಇಡೀ ಕನ್ನಡ ಚಿತ್ರರಂಗವೇ ಕಣ್ಣೀರು ಹಾಕ್ತಿದೆ. 84 ವರ್ಷದ ಹಿರಿಯ ಜೀವವನ್ನ ಕಳೆದುಕೊಂಡು ಸಿನಿ ರಂಗ ಅನಾಥವಾಗಿದೆ. ಭಾರ್ಗವಿ ನಾರಾಯಣ್ ನಿಧನಕ್ಕೆ ಸಾಕಷ್ಟು ಮಂದಿ ಸಂತಾಪ ಸೂಚಿಸಿದ್ದಾರೆ.
ಬಣ್ಣದ ಬದುಕಿನ ಸೆಳೆತದಿಂದ ರಂಗಭೂಮಿಗೆ ಕಾಲಿಟ್ಟ ಭಾರ್ಗವಿ ನಾರಾಯಣ್ ಸುಮಾರು 600ಕ್ಕೂ ಹೆಚ್ಚು ನಾಟಕಗಳಲ್ಲಿ ನಟಿಸಿದ್ರು. ಬಳಿಕ ಕಿರುತೆರೆಯತ್ತ ಮುಖ ಮಾಡಿ ಅಲ್ಲಿಯೂ ಸೈ ಎನಿಸಿಕೊಂಡು ಹಿರಿತೆರೆಯಲ್ಲೂ ತಮ್ಮದೇ ಆದ ಚಾಪು ಮೂಡಿಸಿದ್ರು. ಯಾವುದೇ ಪಾತ್ರ ನೀಡಿದರು ಲೀಲಾಜಾಲವಾಗಿ ನಟಿಸಿ ಸೈ ಎನಿಸಿಕೊಳ್ತಿದ್ದ ಭಾರ್ಗವಿ ನಾರಾಯಣ್ ಅದೆಷ್ಟೋ ಕಲಾವಿದರಿಗೆ ರೋಲ್ ಮಾಡೆಲ್ ಆಗಿದ್ದರು.
ಭಾರ್ಗವಿ ನಾರಾಯಣ್ ಅವರದ್ದು ಕಲಾ ಕುಟುಂಬ. ಭಾರ್ಗವಿ ಪತಿ ನಾರಾಯಣ್ ಮೇಕಪ್ ಆರ್ಟಿಸ್ಟ್ ಆಗಿದ್ದರು. ಅವರನ್ನ ಮೇಕಪ್ ನಾಟಿ ಎಂದೇ ಕರೆಯಲಾಗುತ್ತಿತ್ತು. ಭಾರ್ಗವಿ ಪುತ್ರ ಪ್ರಕಾಶ್ ಬೆಳವಾಡಿ ಚಿತ್ರರಂಗ ಹಾಗೂ ರಂಗಭೂಮಿಯಲ್ಲಿ ದೊಡ್ಡ ಹೆಸರು ಮಾಡಿದ್ದಾರೆ. ಮಗಳು ಸುಧಾ ಬೆಳವಾಡಿ ಕೂಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಜೊತೆಗೆ ಮೊಮ್ಮಗಳ ಸಂಯುಕ್ತಾ ಹೊರನಾಡು ಅವರು ಚಿತ್ರರಂಗದಲ್ಲಿ ಬ್ಯುಸಿಯಾಗಿದ್ದಾರೆ.
1960ರ ದಶಕದಲ್ಲಿ ಚಿತ್ರರಂಗಕ್ಕೆ ಕಾಲಿಟ್ಟ ಭಾರ್ಗವಿ ನಾರಾಯಣ್ ಪ್ರೊ.ಹುಚ್ಚುರಾಯ ಚಿತ್ರದಲ್ಲಿ ಪೋಷಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಚಿತ್ರಕ್ಕೆ ಅವರಿಗೆ ಅತ್ಯುತ್ತಮ ಪೋಷಕ ನಟಿ ರಾಜ್ಯ ಪ್ರಶಸ್ತಿ ಸಿಕ್ಕಿತ್ತು. ಇದ್ರ ಜೊತೆಗೆ ಭಾರ್ಗವಿ ನಾರಾಯಣ್ ಅವರಿಗೆ ಹಲವು ಪ್ರಶಸ್ತಿಗಳು ಲಭಿಸಿದ್ದು 2012ರಲ್ಲಿ ನಾನು ಭಾರ್ಗವಿ ಎಂಬ ಆತ್ಮಕಥನ ಕೂಡ ಬಿಡುಗಡೆಯಾಗಿತ್ತು.




