
ಬೆಂಗಳೂರು: ಇತ್ತೀಚೆಗೆ ಅಪಘಾತದಿಂದ ಸಾವನ್ನಪ್ಪಿದ ನಮ್ಮಮ್ಮ ಸೂಪರ್ ಸ್ಟಾರ್ ಖ್ಯಾತಿಯ ಸಮನ್ವಿ ಅವರ ಮನೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಆಕೆ ಫೋಟೊಗೆ ಪೂಜೆ ಮಾಡಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಪಘಾತದಿಂದ ಬಾಲಕಿ ಸಾವನ್ನಪ್ಪಿರುವುದು ಕೇಳಿ ತುಂಬಾ ನೋವು ಆಯ್ತು. ಪ್ರತಿಭಾವಂತ ಬಾಲಕಿ ಆಗಿದ್ದಳು. ಇಂತಹ ಘಟನೆ ನಡೆಯಬಾರದಿತ್ತು ಎಂದು ಬೇಸರ ವ್ಯಕ್ತಪಡಿಸಿದರು.
ಅವರ ಕುಟುಂಬಕ್ಕೆ ತಂದೆ. ತಾಯಿಗೆ ಧೈರ್ಯ ಹೇಳಬೇಕು. ಅವರಿಗೆ ನಾನು ಧೈರ್ಯ ತುಂಬಿದ್ದೇನೆ. ಆ ಮಗು ಹುಟ್ಟಿ ಬರುತ್ತದೆ ಎಂದು ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಘಟನೆ ಹಿನ್ನೆಲೆ: ಕಳೆದ ಗುರುವಾರದಂದು ತಾಯಿ, ಮಗಳು ಬೈಕ್ ನಲ್ಲಿ ಹೋಗುತ್ತಿದ್ದ ವೇಳೆ ಹಿಂಬದಿಯಿಂದ ಟಿಪ್ಪರಿ ಲಾರಿ ಡಿಕ್ಕಿ ಹೊಡೆದ ಪರಿಣಾಮ ಸಮನ್ವಿ ಮೃತಪಟ್ಟಿದ್ದಳು. ತಾಯಿ ಅಮೃತಾ ನಾಯ್ಡು ಗೆ ಸಣ್ಣಪುಟ್ಟ ಗಾಯವಾಗಿತ್ತು. ಮಗಳ ಸಾವಿನ ಸುದ್ದಿ ಕೇಳಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.




