ದೊಡ್ಡ ರಿಲೀಸ್ ವಿಷಯಕ್ಕೆ ಶುರುವಾಯ್ತು ಪೈಪೋಟಿ!

ಪೂರ್ಣ ವಿ-ರಾಮ
ಲಾಕ್ ಡೌನ್ ಮುಗೀತು. ಎರಡನೇ ಅಲೆ ಅಂತಿಮ ಹಂತ ತಲುಪಿ ಇದೀಗ ತಾನೇ ಎಲ್ಲವೂ ಮೊದಲಿನ ಸ್ಥಿತಿಗೆ ಬಂದು ನಿಂತಿತು. ಇನ್ನೇನು ಸದ್ಯದಲ್ಲೇ ಥಿಯೇಟರ್ ಗಳೂ ಓಪನ್ ಆಗಬಹುದು. ಮಲ್ಟಿಪ್ಲೆಕ್ಸ್ ಗಳೂ ತೆರೆದುಕೊಳ್ಳಬಹುದು ಎನ್ನುವ ಹಂತದಲ್ಲಿ ದೊಡ್ಡ ದೊಡ್ಡ ಸಿನೆಮಾಗಳು ರಿಲೀಸ್ ಗೆ ರೆಡಿ ಇವೆ. ಶಿವರಾಜ್ ಕುಮಾರ್, ಸುದೀಪ್, ದುನಿಯಾ ವಿಜಯ್ ಮೊದಲಾದ ತಾರೆಯರ ಸಿನೆಮಾಗಳು ಬಿಡುಗಡೆ ಮಾಡಲು ಅಖಾಡ ಸಿದ್ದ ಮಾಡುತ್ತಿವೆ.
ಭಜರಂಗಿ 2 ಭೋರ್ಗರೆಯಲು ರೆಡಿ?
ಶಿವರಾಜ್ ಕುಮಾರ್ ನಟನೆಯ ಭಜರಂಗಿ 2 ಸಿನೆಮಾ ಬಿಡುಗಡೆಗೆ ಸಿದ್ಧವಾಗಿದ್ದು, ಥಿಯೇಟರ್ ವ್ಯವಸ್ಥೆ ಯಾವಾಗ ಓಪನ್ ಆಗುತ್ತದೆ ಎಂಬ ವಿಷಯದಲ್ಲಿ ಸರ್ಕಾರದ ನಿರ್ಧಾರಕ್ಕೆ ಕಾದು ಕೂತಿದೆ ಚಿತ್ರತಂಡ. ಇನ್ನೊಂದು ಕಡೆ ಸುದೀಪ್ ನಟನೆಯ ಕೋಟಿಗೊಬ್ಬ 3 ಚಿತ್ರ ಕೂಡ ಕೊನೇ ಹಂತದ ತಾಂತ್ರಿಕ ಕೆಲಸ ಮುಗಿಸಿ ತೆರೆಗೆ ಅಪ್ಪಳಿಸಲು ಸಿದ್ಧತೆ ಮಾಡಿಕೊಳ್ಳುತ್ತಿದೆ.
ಇನ್ನೊಂದು ಕಡೆ ಸುದೀಪ್ ಅವರ ವಿಕ್ರಾಂತ್ ರೋಣ ಕೂಡ ಸದ್ದಿಲ್ಲದೇ ಬಿಡುಗಡೆ ಮಾಡಲು ಎಲ್ಲಾ ತಯಾರಿ ನಡೆಸಿದೆ. ಮತ್ತೊಂದು ಕಡೆ ಗಾಳಿಪಟ 2, ಪೆಟ್ರೋಮ್ಯಾಕ್ಸ್ ಮೊದಲಾದ ನಿರೀಕ್ಷೆ ಇರುವ ಸಿನೆಮಾಗಳೂ ಬಿಡುಗಡೆಯ ಹಾದಿಯಲ್ಲಿವೆ.
ಮತ್ತೆ ಕೆಲ ನಿರ್ಮಾಪಕರು ತಮ್ಮ ಚಿತ್ರವನ್ನು ರೀ ರಿಲೀಸ್ ಮಾಡಬೇಕು ಎಂಬ ಪ್ಲಾನ್ ಕೂಡ ಮಾಡಿಕೊಂಡಿದ್ದು, ಕೃಷ್ಣ ಟಾಕೀಸ್ ಚಿತ್ರತಂಡ ಮತ್ತೊಮ್ಮೆ ಬಿಡುಗಡೆ ಮಾಡಲು ಸಿದ್ಧತೆ ನಡೆಸುತ್ತಿದೆ!
ಸರ್ಕಾರದ ತೀರ್ಮಾನದ ಮೇಲೆ ನಿರ್ಧಾರ!
ಕಳೆದ ಲಾಕ್ ಡೌನ್ ನಲ್ಲಿ ಬಂದ ಪೊಗರು, ರಾಬರ್ಟ್ ಚಿತ್ರ ದೊಡ್ಡ ಮಟ್ಟದಲ್ಲೇ ಸದ್ದು ಮಾಡಿತ್ತಾದರೂ ಯುವರತ್ನ ಚಿತ್ರಕ್ಕೆ ಎರಡನೇ ಅಲೆ ದೊಡ್ಡ ಮಟ್ಟದಲ್ಲೇ ಹೊಡೆತ ಕೊಟ್ಟಿತು. ಪುನೀತ್ ರಾಜ್ ಕುಮಾರ್ ನಟನೆಯ ಯುವರತ್ನ ಚಿತ್ರ ಚೆನ್ನಾಗಿಯೇ ಇದ್ದರೂ ಲಾಕ್ ಡೌನ್ ಅನಿವಾರ್ಯವಾಗಿ ಒಂದೇ ವಾರದಲ್ಲಿ ಅದನ್ನು ಥೀಯೇಟರ್ನಿಂದ ತೆಗೆಯುವ ಹಾಗಾಯಿತು. ಕೊನೆಗದು ಒಟಿಟಿ ಫ್ಲಾಟ್ ಫಾರ್ಮ್ ನಲ್ಲಿ ಬಿಡುಗಡೆಯಾಗಿ ಅಲ್ಲಿ ಒಳ್ಳೇ ಹೆಸರು ಮಾಡಿತು. ಆದರೆ ಬಿಡುಗಡೆಗೆ ರೆಡಿಯಾಗಿದ್ದ ಕೋಟಿಗೊಬ್ಬ 3, ಸಲಗ ಮೊದಲಾದ ಚಿತ್ರಗಳ ನಿರ್ಮಾಪಕರಿಗೆ ಆತಂಕ ಮೂಡುವಂತೆ ಮಾಡಿತು…
ಇದೀಗ ಎಲ್ಲವೂ ಕ್ಲೀಯರ್ ಆಗಿದ್ದು, ಮತ್ತೊಂದು ಕಡೆ ಮೂರನೇ ಅಲೆಯ ಸೌಂಡ್ ಕೇಳಿಬರುತ್ತಿವೆ. ಬಿಡುಗಡೆಗೆ ಸಿದ್ಧವಿರೋ ಸಿನೆಮಾಗಳು ಇನ್ನೇನು ಬಂದೇಬಿಟ್ಟವು ಎನ್ನುವಷ್ಟರಲ್ಲಿ ಮೂರನೇ ಕಂತಿನ ಲಾಕ್ ಡೌನ್ ಆದರೆ ಏನು ಮಾಡುವುದು?
ಈ ಎಲ್ಲಾ ಸಾಧ್ಯಾಸಾಧ್ಯತೆಗಳನ್ನು ಗಮನಿಸಿಯೇ ಮುಂಬರುವ ಚಿತ್ರದ ನಿರ್ಮಾಪಕರು ಒಂದು ಒಕ್ಕೋರಲಿನ ನಿರ್ಧಾರಕ್ಕೆ ಬರಬೇಕಿದೆ.
ಏನಾಗುತ್ತೋ ಲೆಟ್ಸ್ ಸೀ…!




