ಸರ್ಕಾರದ 50-50 ನಿಯಮದ ವಿರುದ್ಧ ಗುಡುಗಿನ ವಿನೋದ್ ರಾಜ್ಕುಮಾರ್

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಿನ್ನೆ ಉನ್ನತ ಮಟ್ಟದ ಸಭೆ ನಡೆದಿದ್ದು ಕೋವಿಡ್ ನಿಯಂತ್ರಣಕ್ಕೆ ಹೇರಿದ್ದ ಸಾಕಷ್ಟು ನಿರ್ಬಂಧಗಳನ್ನ ಸಡಿಲ ಮಾಡಲಾಗಿದೆ. ಆದ್ರೆ ಸಿನಿಮಾ ಥಿಯೇಟರ್ನಲ್ಲಿ 50-50 ರೂಲ್ಸ್ ಮುಂದುವರಿಕೆ ಹಿನ್ನೆಲೆ ಸರ್ಕಾರದ ವಿರುದ್ಧ ಚಲನಚಿತ್ರ ವಾಣಿಜ್ಯ ಮಂಡಳಿ ಅಸಮಾಧಾನ ಹೊರ ಹಾಕಿತ್ತು. ಇದರ ಬೆನ್ನಲ್ಲೆ ಇದೀಗ ನಟ ವಿನೋದ್ ರಾಜ್ ಕುಮಾರ್ ಆಕ್ರೋಶ ಹೊರ ಹಾಕಿದ್ದಾರೆ.
ಚಿತ್ರಮಂದಿರಗಳಿಗೆ ಶೇ.50ರಷ್ಟು ಮಾತ್ರ ಅವಕಾಶ ನೀಡಿರುವ ಬಗ್ಗೆ ಕೇಳಿ ನನಗೆ ಶಾಕ್ ಆಯ್ತು. ಸಿನಿಮಾದವರಿಗೆ ಎಲ್ಲಾ ಸಮಯದಲ್ಲೂ ಅನ್ಯಾಯ ಆಗಿದೆ. ನಾವು ಭೂಮಿ ಮೇಲೆ ಬಂಡವಾಳ ಹಾಕುತ್ತಿಲ್ಲ. ಇದು ಕಲೆ ಮೇಲೆ ಹಾಕುವ ಬಂಡವಾಳ. ಅಡುಗೆ ಮಾಡಿ ಬಿಸಿಯಾಗಿ ತಿಂದರೆ ರುಚಿ. ಚಿತ್ರಗಳು ಹಾಗೆ.ಆದರೆ ಈಗ ಎಷ್ಟೋ ದೊಡ್ಡ ದೊಡ್ಡ ಸಿನಿಮಾಗಳು ದೊಡ್ಡ ಬಂಡವಾಳ ಹಾಕಿವೆ. ಸಿನಿಮಾ ಮುಗಿದು 2,3 ವರ್ಷಗಳೇ ಆಗುತ್ತಿದೆ. ಆದರೆ ಸಿನಿಮಾ ರಿಲೀಸ್ ಮಾಡಲು ಸಾಧ್ಯ ಆಗುತ್ತಿಲ್ಲ.
ಈಗ ರಿಲೀಸ್ ಆದರೂ ಕೂಡ 50% ಜನ ಮಾತ್ರ ಸಿನಿಮಾ ನೋಡ್ತಾರೆ. ಆ ಮೇಲೆ ಯಾವುದೋ ಪ್ಲ್ಯಾಟ್ ಫಾರ್ಮ್ ನಲ್ಲಿ ಸಿನಿಮಾ ಬರುತ್ತೆ ಅಂತಾರೆ. ಆದರೆ ಬಾಕ್ಸ್ ಆಫೀಸ್ ಆಂತ ನಾವು ಯಾಕೆ ಹೇಳ್ತಿವಿ ಅಂದರೆ, ಮೊದಲ ಹತ್ತು ದಿನಗಳ ಕಲೆಕ್ಷನ್ ನಲ್ಲಿ ನಿರ್ಮಾಪಕನ ಖರ್ಚು ಒಂದು ಹಂತಕ್ಕೆ ಸರಿದೂಗುತ್ತೆ ಅಂತ. ಆದರೆ ಈಗ 50% ಜನ ಮಾತ್ರ ಸಿನಿಮಾ ನೋಡಿದರೆ ಅದು ಸಾಧ್ಯ ಆಗಲ್ಲ. ಎಲ್ಲಿ ಹೋದರು ನಿರ್ದೇಶಕ, ನಿರ್ಮಾಪಕ, ಕಲಾವಿದರಿಗೆ ಕಷ್ಟ. ತುಂಬಾನೇ ಲಾಸ್ ಆಗ್ತಿದೆ ಎಂದು ನಟ ವಿನೋದ್ ರಾಜ್ ಕುಮಾರ್ ವಿಡಿಯೋದಲ್ಲಿ ಹೇಳಿದ್ದಾರೆ.
ರೈತರಿಗೆ ವಿಮೆ ಇದೆ. ಫ್ಯಾಕ್ಟರಿ ಸುಟ್ಟರೆ ಇನ್ಸುರೆನ್ಸ್ ಇದೆ, ಆದರೆ ಸಿನಿಮಾ ಸುಟ್ಟರೂ ಏನಿಲ್ಲ. ನಿರ್ಮಾಪಕ ಬೀದಿಗೆ ಬಂದರು ಇಲ್ಲ, ಕಲಾವಿದ ಹಾಳಾದರು ಏನೂ ಇಲ್ಲ. ಇವತ್ತು ಎಲ್ಲರೂ ನೋಡಿ ನಗುವ ಪರಿಸ್ಥಿತಿ ಇದೆ, ಈ ಪರಿಸ್ಥಿತಿಯಿಂದ ಮನಸ್ಸಿಗೆ ನೋವಾಗುತ್ತದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ಗೃಹ ಕಚೇರಿ ಕೃಷ್ಣಾಗೆ ಆಗಮಿಸಿದ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಜಯರಾಜ್, ಉಪಾಧ್ಯಕ್ಷ ಉಮೇಶ್ ಬಣಕಾರ್, ಕಾರ್ಯದರ್ಶಿ ಎನ್ ಎಂ ಸುರೇಶ್ ಸೇರಿದಂತೆ ವಾಣಿಜ್ಯ ಮಂಡಳಿ ಸದಸ್ಯರ ನಿಯೋಗ ಸಿಎಂಗೆ ಮನವಿ ಸಲ್ಲಿಸಿದ್ದಾರೆ. ಅಲ್ಲದೆ ಸೋಮವಾರ ಮತ್ತೊಮ್ಮೆ ಸಿಎಂರನ್ನ ಭೇಟಿ ಮಾಡಲು ವಾಣಿಜ್ಯ ಮಂಡಳಿ ಸದಸ್ಯರು ನಿರ್ಧರಿಸಿದ್ದಾರೆ.




