ಪಂಜಾಬಿ ನಟ ದೀಪ್ ಸಿಧು ರಸ್ತೆ ಅಪಘಾತದಲ್ಲಿ ಸಾವು, ಪ್ರೇಯಸಿ ಆಸ್ಪತ್ರೆಗೆ ದಾಖಲು

ಕಳೆದ ವರ್ಷ ಗಣರಾಜ್ಯೋತ್ಸವ ದಿನ ರೈತರ ಪ್ರತಿಭಟನೆ ವೇಳೆ ಕೆಂಪು ಕೋಟೆ ಹಿಂಸಾಚಾರದ ನಂತರ ಬೆಳಕಿಗೆ ಬಂದಿದ್ದ ಪಂಜಾಬಿ ನಟ, ಕಾರ್ಯಕರ್ತ ದೀಪ್ ಸಿಧು ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಮಂಗಳವಾರ ರಾತ್ರಿ ಕುಂಡ್ಲಿ-ಮನೇಸರ್-ಪಲ್ವಾಲ್ ಎಕ್ಸ್ಪ್ರೆಸ್ವೇಯಲ್ಲಿ ದೀಪ್ ಸಿಧು ಚಲಾಯಿಸುತ್ತಿದ್ದ ಬಿಳಿ ಬಣ್ಣದ ಮಹೀಂದ್ರಾ ಸ್ಕಾರ್ಪಿಯೋ ಕಾರು ಟ್ರಕ್ಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ.
ದೀಪ್ ಸಿಧು ಓಡಿಸುತ್ತಿದ್ದ ಕಾರು ಅಪಘಾತದಲ್ಲಿ ಸಂಪೂರ್ಣ ನಜ್ಜುಗುಜ್ಜಾಗಿದ್ದು ಅಪಘಾತ ನಡೆದ ಸ್ಥಳದಲ್ಲಿಯೇ ದೀಪ್ ಸಿಧು ನಿಧನ ಹೊಂದಿದ್ದಾರೆ. 2021ರ ಗಣರಾಜ್ಯೋತ್ಸವದಲ್ಲಿ ಕೆಂಪು ಕೋಟೆಯ ಮೇಲೆ ಧ್ವಜವನ್ನು ಹಾರಿಸುವ ವಿಷಯದಲ್ಲಿ ಸಿಧು ಜೈಲು ಸೇರಿದ್ದರು. ಅಂದ್ಹಾಗೆ ದೀಪ್ ಸಿಧು ರಸ್ತೆ ಅಪಘಾತದ ಸಂದರ್ಭದಲ್ಲಿ ರೀನಾ ರಾಯ್ ಎಂಬ ಯುವತಿಯೂ ಇದ್ದು ಸದ್ಯ ಆಕೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅಪಘಾತದ ಸಂದರ್ಭದಲ್ಲಿ ದೀಪ್ ಸಿಧು ಜೊತೆಗಿದ್ದಿದ್ದು ಪಂಜಾಬಿ ನಟಿ ರೀನಾ ರಾಯ್. ಸಿಧು ಹಾಗೂ ರೀನಾ ನಿಶ್ಚಿತಾರ್ಥ ಮಾಡಿಕೊಂಡಿದ್ದು ಸದ್ಯದಲ್ಲೇ ಹಸೆಮಣೆ ಏರಬೇಕಿತ್ತು. ರೀನಾ ಹಾಗೂ ದೀಪ್ ಅನೇಕ ಪಂಜಾಬಿ ಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದಾರೆ. ಸಿಧು ಹಾಗೂ ರೀನಾ ಮೊದಲು ಸ್ನೇಹಿತರಾಗಿದ್ದು ಬಳಿಕ ಪ್ರೀತಿಯಲ್ಲಿ ಬಿದ್ದು ಇತ್ತೀಚೆಗೆ ಕುಟುಂಬಸ್ಥರ ಸಮ್ಮುಖದಲ್ಲಿ ಎಂಗೇಜ್ಮೆಂಟ್ ಮಾಡಿಕೊಂಡಿದ್ದರು.
ಮುಂಬೈನಲ್ಲಿ ಜನಿಸಿದ ರೀನಾ ಅಮೆರಿಕಾದ ಕ್ಯಾಲಿಫೋರ್ನಿಯಾದಲ್ಲಿ ನೆಲೆಸಿದ್ದರು. ಅಪಘಾತಕ್ಕೂ ಮುನ್ನ ದಿನ ದೀಪ್ ಹಾಗೂ ರೀನಾ ಪ್ರೇಮಿಗಳ ದಿನವನ್ನ ಒಟ್ಟಿಗೆ ಆಚರಿಸಿದ್ದು ಅವುಗಳ ಫೋಟೋವನ್ನ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.
ದೀಪ್ ಹಾಗೂ ರೀನಾ ಅನೇಕ ಪಂಜಾಬಿ ಸಿನಿಮಾಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದಾರೆ. ಈ ಜೋಡಿಯ ರಂಗ್ ಪಂಜಾಬ್ ಸಿನಿಮಾ ಈಗಾಗ್ಲೆ ರಿಲೀಸ್ ಆಗಿದ್ದು ದೇಸಿ ಚಿತ್ರ ಬಿಡುಗಡೆಗೆ ಸಿದ್ದವಾಗಿದೆ.




