ಅಪಾಯದ ಅಂಚಿನಲ್ಲಿರುವ ವಿದ್ಯುತ್ ಮಾರ್ಗ ಸುಧಾರಣೆ ಮತ್ತು ಸ್ಥಳಾಂತರಕ್ಕೆ ಆಗ್ರಹ

ಕೊಡಗು : ಜಿಲ್ಲೆಯ ಪೊನ್ನಂಪೇಟೆ ತಾಲ್ಲೂಕಿನ ಬಿ.ಶೆಟ್ಟಿಗೇರಿ ಗ್ರಾಮದಲ್ಲಿ ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದ ಸಮಯದಲ್ಲಿ 22 ವಯಸ್ಸಿನ ಯುವಕ ದಿಶನ್ ದೇವಯ್ಯ ಅವರು ವಿದ್ಯುತ್ ತಂತಿ ತಗುಲಿ ಮರಣ ಪಟ್ಟಿದ್ದು, ಈ ವ್ಯಾಪ್ತಿಯಲ್ಲಿ ತೋಟ ಮತ್ತು ಕೃಷಿ ಪ್ರದೇಶದಲ್ಲಿರುವ 11 ಕೆ.ವಿ.ವಿದ್ಯುತ್ ಮಾರ್ಗಗಳನ್ನು ರಸ್ತೆ ಬದಿಗೆ ಸ್ಥಳಾಂತರ ಮಾಡಬೇಕು, ತೋಟದ ಒಳಗೆ ಇರುವ ಮಾರ್ಗಗಳಿಗೆ ರಬ್ಬರ್ ಹೊದಿಕೆ ಸಹಿತ ಕೇಬಲ್ ಅಳವಡಿಕೆ ಮಾಡಬೇಕೆಂದು ಬಿ. ಶೆಟ್ಟಿಗೇರಿ ಗ್ರಾಮ ಪಂಚಾಯತಿ ಜನಪ್ರತಿನಿಧಿಗಳು ಮತ್ತು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಬಿ.ಶೆಟ್ಟಿಗೇರಿ ಗ್ರಾಮದ ನಾಮೆರ ಪ್ರಸನ್ನ ಅವರ ಪುತ್ರ ದಿಶನ್ ದೇವಯ್ಯ ವಿದ್ಯುತ್ ತಂತಿ ತಗುಲಿ ಮರಣ ಪಟ್ಟಿದ್ದು,ಅವರ ಕುಟುಂಬಕ್ಕೆ ಸಾಂತ್ವನ ಹೇಳಿ ಮಾಧ್ಯಮಕ್ಕೆ ಹೇಳಿಕೆ ನೀಡಿದ ಬಿ. ಶೆಟ್ಟಿಗೇರಿ ಗ್ರಾ.ಪಂ.ಅಧ್ಯಕ್ಷೆ ನೇತ್ರಾವತಿ, ಉಪಾಧ್ಯಕ್ಷ ಮದ್ರಿರ ಗಿರೀಶ್ ಗಣಪತಿ, ತಾ. ಪಂ.ಮಾಜಿ ಉಪಾಧ್ಯಕ್ಷ ಉಮೇಶ್ ಕೇಚಮ್ಮಯ್ಯ, ಗೋಣಿಕೊಪ್ಪ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಮಾಜಿ ಸದಸ್ಯೆ ಕಡೆಮಾಡ ಕುಸುಮ ಜೋಯಪ್ಪ ಅವರು ಈ ಒತ್ತಾಯ ಮಾಡಿದರು.
ಕೃಷಿಯನ್ನೇ ಅವಲಂಭಿಸಿ ರೈತ ಕುಟುಂಬ ಮತ್ತು ತೋಟ ಕಾರ್ಮಿಕರ ಕುಟುಂಬ ಜೀವನ ನಡೆಸುತ್ತಿದೆ. ವಿದ್ಯುತ್ ಮಾರ್ಗದ ತಂತಿಗಳು ನಿಗಧಿತ ಎತ್ತರಕ್ಕಿಂತ ಕಡಿಮೆ ಎತ್ತರಲ್ಲಿ ಇಲ್ಲದೇ ಹಲವು ಕಡೆ ಜೋತು ಬಿದ್ದಿದೆ. ಸುಮಾರು 40-50 ವರ್ಷ ಹಿಂದಿನ ಮಾರ್ಗ ಶಿಥಿಲಾವಸ್ಥೆಯಲ್ಲಿದೆ. ವಿದ್ಯುತ್ ಮಾರ್ಗದ ತಂತಿ ತೋಟದಲ್ಲಿ ಮರಗಳಿಗೆ ತಗುಲುತ್ತಿವೆ. ಇದರಿಂದ ವಿದ್ಯುತ್ ತಂತಿ ತಗುಲಿ ಕಾರ್ಮಿಕರು, ಬೆಳೆಗಾರರು ದುರ್ಮರಣಕ್ಕೆ ತುತ್ತಾಗುತ್ತಿದ್ದಾರೆ ಇದನ್ನು ತಪ್ಪಿಸಲು ತೋಟದೊಳಗೆ ಇರುವ 11 ಕೆ.ವಿ.ವಿದ್ಯುತ್ ಮಾರ್ಗಗಳನ್ನು ರಸ್ತೆ ಬದಿಗೆ ಸ್ಥಳಾಂತರಿಸಲು ಸೆಸ್ಕ್ ಇಲಾಖೆ ಮತ್ತು ಸರಕಾರ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಈ ಬಗ್ಗೆ ಜಿಲ್ಲೆಯ ಶಾಸಕರು ಸರಕಾರದ ಗಮನ ಸೆಳೆದು ಆದಷ್ಟು ಬೇಗ ಯೋಜನೆ ಜಾರಿಗೆ ತರಬೇಕೆಂದು ಒತ್ತಾಯಿಸಿದರು.




