ಒಂದೂವರೆ ವರ್ಷದ ಬಳಿಕ ತೆರೆದ ಜ್ಞಾನ ದೇಗುಲ : ಉತ್ತರಕನ್ನಡದಲ್ಲಿ ಶಾಲಾರಂಭ

ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ಕೋವಿಡ್ ಮುಂಜಾಗೃತಾ ಕ್ರಮಗಳೊಂದಿಗೆ ಶಾಲಾ, ಕಾಲೇಜುಗಳನ್ನು ಪ್ರಾರಂಭಿಸಿದ್ದು, ಮಕ್ಕಳು ಕೂಡ ಉತ್ಸಾಹದಿಂದಲೇ ತರಗತಿಗಳತ್ತ ಹೆಜ್ಜೆ ಹಾಕಿದರು. ಕಳೆದ ಒಂದೂವರೆ ವರ್ಷದಿಂದ ಸ್ಥಗಿತಗೊಂಡಿದ್ದ ಶಾಲಾ ಕಾಲೇಜುಗಳನ್ನು ಕೊನೆಗೂ ಸರ್ಕಾರ ಕೋವಿಡ್ ಮುಂಜಾಗೃತೆಯೊಂದಿಗೆ ತೆರೆಯಲು ಅನುಮತಿಸಿದೆ.
ಶೇ.0.85 ಕೊರೋನಾ ಪಾಸಿಟಿವಿಟಿ ಹೊಂದಿರುವ ಉತ್ತರ ಕನ್ನಡ ಜಿಲ್ಲೆಯಲ್ಲಿ ಉತ್ತರ ಕನ್ನಡದ 189, ಶಿರಸಿ ಶೈಕ್ಷಣಿಕ ಜಿಲ್ಲೆಯ 175 ಪ್ರೌಢಶಾಲೆ ಹಾಗೂ 99 ಪದವಿ ಪೂರ್ವ ಕಾಲೇಜುಗಳನ್ನು ತೆರೆಯಲು ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಅದರಂತೆ ಇಂದು ಕಾರವಾರದಲ್ಲಿ ಬೆಳಿಗ್ಗೆ ಖುಷಿಯಿಂದಲೇ ಶಾಲೆಯತ್ತ ಹೆಜ್ಜೆ ಹಾಕಿದ್ದ ಮಕ್ಕಳನ್ನು ಕೆಲ ಪ್ರೌಢಶಾಲೆಗಳಲ್ಲಿ ಮಾವಿನ ತೋರಣ ಕಟ್ಟಿ ಸ್ವಾಗತ ಕೋರುವ ಬ್ಯಾನರ್ಗಳ ಮೂಲಕ ಮಕ್ಕಳನ್ನು ಬರಮಾಡಿಕೊಳ್ಳಲಾಯಿತು.
ಮಾತ್ರವಲ್ಲದೆ, ಎಲ್ಲ ಶಾಲಾ ಕಾಲೇಜುಗಳಲ್ಲಿ ಮಕ್ಕಳು ತರಗತಿ ಸೇರುವ ಮುನ್ನ ಥರ್ಮಲ್ ಸ್ಕ್ರೀನಿಂಗ್, ಸ್ಯಾನಿಟೈಸರ್ ಮಾಡಿ ಮಾಸ್ಕ್ ಕಡ್ಡಾಯವಾಗಿ ಹಾಕಿಸಿ ತರಗತಿಗಳಿಗೆ ಕಳುಹಿಸಲಾಯಿತು. ತರಗತಿಗಳಲ್ಲಿಯೂ ಕೂಡ ಕೇವಲ 20 ಮಂದಿಗೆ ಮಾತ್ರ ಅವಕಾಶ ನೀಡಿದ್ದು,ಉಳಿದವರನ್ನು ಬೇರೆ ತರಗತಿಗಳಲ್ಲಿ ಕೂರಿಸಿ ಪಾಠ ಮಾಡಲು ವ್ಯವಸ್ಥೆ ಮಾಡಲಾಗುತ್ತಿದೆ. ಕೆಲ ವಿದ್ಯಾರ್ಥಿಗಳಿಗೆ ಆನ್ಲೈನ್ ಮೂಲಕವೂ ಕೂಡ ಪಾಠ ಮುಂದುವರಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.




