Car Accident: ಅಣ್ಣಿಗೇರಿ ಕೊಂಡಿಕೊಪ್ಪ ಬ್ರಿಡ್ಜ್ ಬಳಿ ಕಾರುಗಳ ನಡುವೆ ಡಿಕ್ಕಿ: ಓರ್ವನ ಸಾವು

ಧಾರವಾಡ: ಎರಡು ಕಾರುಗಳ ನಡುವೆ ಡಿಕ್ಕಿ ಸಂಭವಿಸಿ ಭೀಕರ ರಸ್ತೆ ಅಪಘಾತವಾಗಿ ಓರ್ವ ಕಾರು ಚಾಲಕ ಸಾವನಪ್ಪಿರುವ ಘಟನೆ ಹುಬ್ಬಳ್ಳಿ ಗದಗ ರಸ್ತೆ ಅಣ್ಣಿಗೇರಿ ತಾಲೂಕಿನ ಹೊರವಲಯದಲ್ಲಿ ನಡೆದಿದೆ.
ಅಣ್ಣಿಗೇರಿ ತಾಲೂಕಿನ ಹೊರವಲಯದ ಕೊಂಡಿಕೊಪ್ಪ ಬ್ರಿಡ್ಜ್ ಬಳಿಯಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಭೀಕರ ಅಪಘಾತದಲ್ಲಿ ಗದಗ ಮೂಲದ ಹಾತಲಗೇರಿ ನಿವಾಸಿ ವಿಠೋಬಾ ಹನಮಪ್ಪ ಹೂವಣ್ಣನವರ ಸಾವನಪ್ಪಿದ್ದಾರೆ. ಕಾರು ಅಪಘಾತದಲ್ಲಿ ವಿಠೋಬಾ ಅವರು ಗಂಭೀರವಾಗಿ ಗಾಯಗೊಂಡಿದ್ದರು. ಈ ವೇಳೆ ಸ್ಥಳಿಯರು ಆ್ಯಂಬ್ಯುಲೆನ್ಸ್ ಸಾಹಾಯ ಪಡೆದುಕೊಂಡು ಆಸ್ಪತ್ರೆಗೆ ಸಾಗಿಸಲು ಮುಂದಾಗಿದ್ದರು. ಆದರೆ ರಸ್ತೆ ಮಧ್ಯದಲ್ಲಿಯೇ ಅವರ ಪ್ರಾಣ ಪಕ್ಷಿ ಹಾರಿ ಹೋಗಿದೆ.
ಇನ್ನೊಂದು ಕಾರಿನಲ್ಲಿದ್ದ ಚಾಲಕ ಶ್ರೀನಿವಾಸ್ ವೆಂಕಟೇಶ್ ನಾಯ್ಡು ಸದ್ಯ ಪ್ರಾಣಾಪಾಯದಿಂದ ಪಾರಾಗಿದ್ದು, ಅವರನ್ನು ಕೂಡಾ ತಾಲೂಕು ಆಸ್ಪತ್ರೆಗೆ ರವಾನೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಘಟನೆಯಲ್ಲಿ ವಿರುಪಾಕ್ಷಿ ಎಂಬಾತನಿಗೆ ಅಲ್ಪ ಪ್ರಮಾಣದಲ್ಲಿ ಗಾಯಗಳಾಗಿವೆ.
ಇನ್ನೂ ಅತಿ ವೇಗವಾಗಿ ಕಾರುಗಳು ಬರುತ್ತಿದ್ದ ಸಮಯದಲ್ಲಿ ಡಿಕ್ಕಿ ಸಂಭವಿಸಿದ್ದರಿಂದ, ಕಾರೊಂದು ಪಲ್ಟಿಯಾಗಿದ್ದು, ಮತ್ತೊಂದು ಕಾರಿನ ಮುಂಭಾಗ ಸಂಪೂರ್ಣ ಜಖಂಗೊಂಡಿದೆ. ಘಟನಾ ಸ್ಥಳಕ್ಕೆ ಅಣ್ಣಿಗೇರಿ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ಕೈಗೊಂಡಿದ್ದಾರೆ.




