ಬೆಲೆಬಾಳುವ ಮರಗಳ ಅಕ್ರಮ ಸಾಗಾಟ: ಟ್ರ್ಯಾಕ್ಟರ್ ಸಮೇತ ಆರೋಪಿಗಳನ್ನು ಹಿಡಿದ ಗ್ರಾಮಸ್ಥರು…!

ದಾವಣಗೆರೆ: ಭದ್ರಾ ಸಕ್ಕರೆ ಕಾರ್ಖಾನೆ ಆವರಣದಲ್ಲಿ ಬೆಳೆದಿದ್ದ ಬೆಲೆ ಬಾಳುವ ಮರಗಳನ್ನು ಅಕ್ರಮವಾಗಿ ಕಡಿದು ಸಾಗಾಟ ಮಾಡುತ್ತಿದ್ದವರನ್ನು ಗ್ರಾಮಸ್ಥರು ಹಿಡಿದು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಒಪ್ಪಿಸಿದ ಘಟನೆ ತಾಲೂಕಿನ ಹಳೇಬಾತಿ ಗ್ರಾಮದಲ್ಲಿ ನಡೆದಿದೆ.
ಕಡಿದ ಮರದ ತುಂಡುಗಳನ್ನು ಟ್ರ್ಯಾಕ್ಟರ್ ನಲ್ಲಿ ಸಾಗಣೆ ಮಾಡಲಾಗುತಿತ್ತು. ಈ ವಿಷಯ ತಿಳಿಯುತ್ತಿದ್ದಂತೆ ಗ್ರಾಮದ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು ಹಾಗೂ ಗ್ರಾಮಸ್ಥರು ಹಿಡಿದಿದ್ದಾರೆ. ಭದ್ರಾ ಸಕ್ಕರೆ ಕಾರ್ಖಾನೆ ಆವರಣದಲ್ಲಿ ಯಾರೋ ದುಷ್ಕರ್ಮಿಗಳು ಸುಮಾರು 76 ಕ್ಕೂ ಹೆಚ್ಚು ಮರಗಳನ್ನು ಐದಾರು ದಿನಗಳ ಹಿಂದೆ ಕಡಿದಿದ್ದರು. ಆದ್ರೆ ಮೂರ್ನಾಲ್ಕು ದಿನಗಳಿಂದ ಸಾಗಾಟ ಮಾಡಲಾಗುತಿತ್ತು. ಅನುಮಾನ ಬಂದು ವಿಚಾರಿಸಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ.
ಹರಿಹರದ ಜೆಡಿಎಸ್ ನ ಮಾಜಿ ಶಾಸಕರ ಕುಮ್ಮಕ್ಕಿನಿಂದ ಮರ ಕಳ್ಳತನಕ್ಕೆ ಯತ್ನಿಸಲಾಯಿತಾ ಎಂಬ ಅನುಮಾನವೂ ಕಾಡಲಾರಂಭಿಸಿದೆ. ಹರಿಹರದ ಮಾಜಿ ಶಾಸಕ ಎಚ್ ಶಿವಶಂಕರ್ ಕುಮ್ಮಕ್ಕಿನಿಂದ ಮರಕಳ್ಳತನಕ್ಕೆ ಯತ್ನ ನಡೆಸಲಾಗಿದೆ ಎಂಬ ಆರೋಪವೂ ಕೇಳಿ ಬಂದಿದೆ.
ಬೆಲೆ ಬಾಳುವ 76 ಕ್ಕೂ ಅಧಿಕ ಮರಗಳನ್ನ ಕಡಿದ ಕದ್ದು ಸಾಗಿಸುತ್ತಿದ್ದ ಖದೀಮರನ್ನು ಬಾತಿ ಗ್ರಾಮ ಪಂಚಾಯತ್ ಸದಸ್ಯರು ಹಿಡಿದಿದ್ದಾರೆ. ಈ ವೇಳೆ ಆರೋಪಿಗಳು “ಶಿವಶಂಕರ ಸಾಹೇಬ್ರು ಮರ ಕಡಿಯಲು ಹೇಳಿದ್ದಾರೆ” ಎಂದು ತಪ್ಪೊಪ್ಪಿಕೊಂಡಿದ್ದಾರೆ ಎನ್ನಲಾಗಿದೆ.
ಅರಣ್ಯ ಕಾಯ್ದೆ ಅಡಿ ಆರೋಪಿ ವಿರುದ್ಧ ಪ್ರಕರಣ ದಾಖಲಾಗಿದ್ದು, ಅರಣ್ಯ ಇಲಾಖೆಯ ಅಧಿಕಾರಿಗಳು ತನಿಖೆ ಕೈಗೊಂಡಿದ್ದಾರೆ.




