ಜಾಲಿ ಪಟ್ಟಣ ಪಂಚಾಯತ್ ಚುನಾವಣೆಯಲ್ಲಿ ತಂಜೀಮ್ ಗೆ ವಿಜಯದ ಮಾಲೆ : ಮಕಾಡೆ ಮಲಗಿದ ರಾಜಕೀಯ ಪಕ್ಷಗಳು

ಕಾರವಾರ : ಉತ್ತರ ಕನ್ನಡ (Uttara Kannada) ಜಿಲ್ಲೆಯ ಭಟ್ಕಳ (Bhatkal) ತಾಲೂಕಿನ ಜಾಲಿ ಪಟ್ಟಣ ಪಂಚಾಯತ್ (Jali Pattan Panchayat) ಚುನಾವಣೆಯಲ್ಲಿ 13 ಸ್ಥಾನಗಳಿಗೆ ಚುನಾವಣೆ ನಡೆದಿದ್ದು,13 ಸ್ಥಾನಗಳ ಪೈಕಿ 6 ಸ್ಥಾನಕ್ಕೆ ತಂಜೀಮ್ ಬೆಂಬಲಿತ ಅಭ್ಯರ್ಥಿಗಳು (Tanzeem SUPPORTERS Candidates) ಆಯ್ಕೆಯಾಗಿದ್ದು, ನಾಲ್ಕು ಸ್ಥಾನಕ್ಕೆ ಕಾಂಗ್ರೆಸ್, (Congress) ಮೂರು ಸ್ಥಾನಕ್ಕೆ ಬಿಜೆಪಿ (BJP) ತೃಪ್ತಿ ಪಟ್ಟುಕೊಳ್ಳುವಂತಾಗಿದೆ. ಈ ಮೊದಲು ತಂಜೀಮ್ ಬೆಂಬಲಿತ 7 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಗೊಂಡಿದ್ದರು. ರಾಜಕೀಯ ಪಕ್ಷಗಳು ಜಾಲಿ ಪಟ್ಟಣ ಪಂಚಾಯತ್ ಚುನಾವಣೆಯಲ್ಲಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಾಗಿದೆ
ರಾಜಕೀಯ ವಲಯದಲ್ಲಿ ಜಾಲಿ ಪಟ್ಟಣ ಪಂಚಾಯತ್ ಚುನಾವಣೆ ಚರ್ಚೆಗೆ ಕೂಡ ಗ್ರಾಸ ಒದಗಿಸಿತ್ತು. ಭಟ್ಕಳ ತಾಲೂಕಿನ ಪ್ರತಿಷ್ಠಿತ ಸಂಸ್ಥೆ ತಂಜೀಮ್ ತನ್ನ ಅಭ್ಯರ್ಥಿಯನ್ನು ಚುನಾವಣಾ ಅಖಾಡಕ್ಕೆ ಇಳಿಸುವುದರ ಮೂಲಕ ಜಾಲಿ ಪಟ್ಟಣ ಪಂಚಾಯತ್ ಅನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಇಲ್ಲಿ ಮುಖ್ಯವಾಗಿ ತಾಲೂಕಿನ ಪುರಸಭೆ ಅಥವಾ ಪಟ್ಟಣ ಪಂಚಾಯತ್ ವ್ಯಾಪ್ತಿಯು ಮುಸ್ಲಿಂ ಸಮುದಾಯದ ಬಾಹುಳ್ಯವನ್ನು ಹೊಂದಿರುವ ಪ್ರದೇಶವಾಗಿದೆ. ಈ ಕಾರಣಕ್ಕೆ ತಂಜೀಮ್ ಈ ಪ್ರದೇಶಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಚುನಾವಣಾ ಅಖಾಡಕ್ಕೆ ಇಳಿಸಿ ತನ್ನ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳುವುದರಲ್ಲಿ ಸಫಲವಾಗುತ್ತಿದೆ. ಈ ಕಾರಣಕ್ಕೆ ರಾಜಕೀಯ ಪಕ್ಷಗಳು ಚುನಾವಣೆಯಲ್ಲಿ ಸ್ಪರ್ಧಿಸಿದರೂ ಕೂಡ ಹೆಚ್ಚಿನ ಸಂಖ್ಯೆಯಲ್ಲಿ ತನ್ನ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳುವುದರಲ್ಲಿ ವಿಪಲವಾಗುತ್ತಲೇ ಬಂದಿದೆ.
ಜಾಲಿ ಪಟ್ಟಣ ಪಂಚಾಯತ್ ಚುನಾವಣೆಯಲ್ಲಿ 13 ಕ್ಷೇತ್ರಗಳಲ್ಲಿ,ಕಾಂಗ್ರೆಸ್ 4, ಬಿಜೆಪಿ 3 ಸ್ಥಾನಗಳನ್ನು ಪಡೆದರೆ ತಂಜೀಮ್ ಬೆಂಬಲಿತ 6 ಸ್ವತಂತ್ರ ಅಭ್ಯರ್ಥಿಗಳು ಚುನಾವಣೆಯಲ್ಲಿ ಗೆದ್ದು ಬರುವುದರ ಮೂಲಕ ತಾಲೂಕಿನಲ್ಲಿ ತಂಜೀಮ್ ತನ್ನ ಕದಂಬ ಬಾಹುವನ್ನು ಎಷ್ಟರಮಟ್ಟಿಗೆ ಚಾಚಿಕೊಳ್ಳುತ್ತಿದೆ ಎಂಬುದನ್ನು ತೋರಿಸಿಕೊಟ್ಟಿದೆ.
ಇದು ಒಂದು ಕಡೆಯಾದರೆ ಪಟ್ಟಣ ಪಂಚಾಯತ್ ಚುನಾವಣೆಯಲ್ಲಿ 72 ಮತಗಳು ನೋಟಾಕ್ಕೆ ಬಿದ್ದಿದೆ. ಬಹುತೇಕ ತಂಜೀಮ್ ಬೆಂಬಲಿತ ಪಕ್ಷೇತರ ಅಭ್ಯರ್ಥಿಗಳ ಆಯ್ಕೆಯಿಂದ ಜಾಲಿ ಪಟ್ಟಣ ಪಂಚಾಯತ್ ನಲ್ಲಿ ತಂಜೀಮ್ ಅಧಿಕಾರ ನಡೆಸುವಂತಾಗಿದೆ.ಮುಖ್ಯವಾಗಿ ಎಸ್.ಡಿ.ಪಿ.ಜಿಲ್ಲಾಧ್ಯಕ್ಷ ತೌಪಿಕ್ ಬ್ಯಾರಿ, ಜಿಲ್ಲಾ ಕಾರ್ಯದರ್ಶಿ ವಾಸಿಂ ಮನೆಗಾರ,ತಂಜೀಮ್ ಬೆಂಬಲದಿಂದ ಗೆಲುವು ಸಾದಿಸಿದ್ದಾರೆ. ವಾರ್ಡ್ ನಂ 1ರ ಪರಿಶಿಷ್ಟ ಜಾತಿ ಮೀಸಲಾತಿಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದ ಈಶ್ವರ ಮೊಗೇರ್ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ರದ್ದಾದ ಹಿನ್ನೆಲೆಯಲ್ಲಿ ನ್ಯಾಯಾಲಯದ ತೀರ್ಪು ಹಾಗೂ ಚುನಾವಣಾ ಆಯೋಗದ ನಿಂಬಂಧನೆ ಏನೆಂದು ಕಾದು ನೋಡಬೇಕಾಗಿದೆ.
ಈ ಬಾರಿಯ ಚುನಾವಣೆ ಶಾಂತಿಯುತವಾಗಿ ನಡೆದಿದ್ದು,ಯಾವುದೇ ಗಲಾಟೆಗೆ ಆಸ್ಪದವಿಲ್ಲದೆ ನಡೆಸಲಾಗಿದೆ.ಇದರ ಶ್ರೇಯಸ್ಸು ತಾಲೂಕು ದಂಡಾಧಿಕಾರಿಗಳಾದ ಮಮತಾದೇವಿ ಹಾಗೂ ತಹಶೀಲ್ದಾರ್ ರವಿಚಂದ್ರರವರಿಗೆ ಸಲ್ಲಬೇಕಾಗಿದೆ. ಇಷ್ಟು ವರ್ಷ ಒಂದಿಲ್ಲೊಂದು ಗೊಂದಲಗಳಿಗೆ ಚುನಾವಣೆ ಕಾರಣವಾಗುತ್ತಿತ್ತು. ಆದರೆ ಈ ವರ್ಷ ಚುನಾವಣೆ ಶಾಂತಿಯುತವಾಗಿ ನಡೆದಿದೆ.ಈ ಬಗ್ಗೆ ತಾಲೂಕಿನಾಧ್ಯಂತ ಪ್ರಶಂಸೆ ವ್ಯಕ್ತವಾಗಿದೆ.
ಒಟ್ಟಾರೆಯಾಗಿ ಜಾಲಿ ಪಟ್ಟಣ ಪಂಚಾಯತ್ ತಂಜೀಮ್ ತನ್ನ ತೆಕ್ಕೆಗೆ ತೆಗೆದುಕೊಂಡಿದೆ.



