ಹುಬ್ಬಳ್ಳಿ: ನಟ ಪುನೀತ್ ಹೆಸರಿನಲ್ಲಿ ಮ್ಯೂಸಿಯಂ, ಮಕ್ಕಳಿಗೆ ನೃತ್ಯ ಹಾಗೂ ಸಂಗೀತ ಶಾಲೆ ತೆರೆಯಲು ಆಗ್ರಹ

ಧಾರವಾಡ: ವರನಟ ದಿವಂಗತ ಡಾ.ರಾಜಕುಮಾರ ಅತ್ಯಂತ ಪ್ರೀತಿಯ ಕಿರಿಯ ಪುತ್ರ ಪ್ರಸಿದ್ಧ ನಟ ಪವರ್ ಸ್ಟಾರ್ ಪುನೀತ್ ರಾಜಕುಮಾರ ನಿಧನರಾಗಿ ವಾರಗಳು ಉರುಳುತ್ತಾ ಬಂದಿದ್ದು, ಈಗಾಗಲೇ ಹಲವು ಕಡೆಗಳಲ್ಲಿ ಅಪ್ಪುರವರ ಹೆಸರುಗಳನ್ನು ರಸ್ತೆಗಳಿಗೆ ನಾಮಕರಣ ಮಾಡಲಾಗುತ್ತಿದೆ. ಅದೇ ರೀತಿಯಾಗಿ ರಾಜ್ಯ ಪ್ರತಿ ಜಿಲ್ಲಾ ಕೇಂದ್ರ ಸೇರಿದಂತೆ ತಾಲೂಕು ಕೇಂದ್ರಗಳಲ್ಲಿಯು ಚಿಕ್ಕ ಮಕ್ಕಳಿಗೆ ನೃತ್ಯ ಹಾಗೂ ಸಂಗೀತ ಶಾಲೆಯನ್ನು ಆರಂಭ ಮಾಡಬೇಕು ಎಂದು ಒತ್ತಾಯಿಸಿ, ಹುಬ್ಬಳ್ಳಿಯಲ್ಲಿ ಅಪ್ಪು ಅಭಿಮಾನಿಗಳು ಮನವಿ ಮಾಡಿದರು.
ಇದಕ್ಕೂ ಮುನ್ನ ನಗರದ ಚೆನ್ನಮ್ಮ ವೃತದಿಂದ ನೂರಾರು ಸಂಖ್ಯೆಯಲ್ಲಿ ಅಪ್ಪು ಅಭಿಮಾನಿಗಳು ಹಾಗೂ ಕನ್ನಡ ಪರ ಸಂಘಟನೆಯ ಕಾರ್ಯಕರ್ತರು ಕನ್ನಡ ಕ್ರಾಂತಿ ದೀಪ ಸಂಘಟನೆ ನೇತೃತ್ವದಲ್ಲಿ, ದಿವಂಗತ ಪುನೀತ್ ರಾಜಕುಮಾರ ಪರ ಜೈ ಘೋಷಣೆ ಕೂಗಿಕೊಂಡು ಮಿನಿ ವಿಧಾನಸೌಧದಲ್ಲಿರುವ ತಹಶೀಲ್ದಾರ್ ಕಚೇರಿಯವರೆಗೆ ತಹಶೀಲ್ದಾರರ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಿದರು.
ಪುನೀತ್ ರಾಜಕುಮಾರ ಅವರು ತಮ್ಮ ಎರಡು ಕಣ್ಣುಗಳನ್ನು ದಾನ ಮಾಡುವ ಮೂಲಕ ಯುವ ಸಮುದಾಯಕ್ಕೆಮಾದರಿಯ ಕಾರ್ಯವನ್ನು ಮಾಡಿದ್ದಾರೆ. ಅವರು ಸ್ಪೂರ್ತಿಯಿಂದಾಗಿ ರಾಜ್ಯಾದ್ಯಂತ ಸಾವಿರಾರು ಸಂಖ್ಯೆಯಲ್ಲಿ ಅವರ ಅಭಿಮಾನಿಗಳು ನೇತ್ರದಾನಕ್ಕೆ ನೋಂದಣಿ ಮಾಡಿಕೊಳ್ಳುತ್ತಿದ್ದಾರೆ. ಹೀಗೆ ಪವರ ಸ್ಟಾರ್ ಪುನೀತ್ ರಾಜಕುಮಾರ ಅವರು ತಮ್ಮಜೀವನದ ಉದ್ದಕ್ಕೂ ಯುವ ಸಮುದಾಯಕ್ಕೆ ಮಾದರಿಯಾಗುವ ಕೆಲಸಗಳನ್ನು ಮಾಡಿಕೊಂಡು ಬಂದಿದ್ದಾರೆ. ಇವರ ಸವಿ ನೆನಪನ್ನು ಹಚ್ಚ ಹಸಿರಾಗಿ ಇಡುವುದು ನಮ್ಮೆಲ್ಲರ ಕೆಲಸವಾಗಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಉತ್ತಮವಾದ ನಿರ್ಧಾರ ತೆಗೆದುಕೊಳ್ಳಬೇಕುಎಂದು ಒತ್ತಾಯ ಮಾಡಿದರು.
ಬಳಿಕ ಕನ್ನಡ ಕ್ರಾಂತಿ ದೀಪ ಸಂಘಟನೆಯ ರಾಜ್ಯಾಧ್ಯಕ್ಷ ರಾಘವೆಂದ್ರ ವದ್ದಿ ಮಾತನಾಡಿ, ಹುಬ್ಬಳ್ಳಿಯೊಂದಿಗೆ ನಟ ಪುನೀತ್ ರಾಜಕುಮಾರ ಅವರ ಒಡನಾಟ ಹೆಚ್ಚಿತ್ತು, ಅಷ್ಟೇ ಅಲ್ಲದೇ ಅವರು ಉತ್ತರ ಕರ್ನಾಟಕದ ಜನರ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದರು. ಜೊತೆಗೆ ಉತ್ತರ ಕರ್ನಾಟಕ ಭಾಗಕ್ಕೆ ಅವರ ಕೊಡುಗೆಯೂ ಅಪಾರವಾಗಿದೆ. ಹಾಗಾಗಿ ಅವರ ನೆನೆಪು ಸದಾ ನಮ್ಮೊಂದಿಗೆ ಇರಬೇಕು ಎಂದು ಅವಳಿನಗರದ ಪ್ರತಿಯೊಬ್ಬ ಅಭಿಮಾನಿಯು ಬಯಸುತ್ತಾನೆ. ಆದ್ದರಿಂದ ಇಂದಿರಾ ಗ್ಲಾಸ್ ಹೌಸ್ ನಲ್ಲಿ ಪುನೀನ್ ರಾಜಕುಮಾರ ಅವರ ಕೊಡುಗೆ ಮತ್ತು ಸಾಧನೆಯನ್ನ ಸಾರುವ ಮ್ಯೂಸಿಯಂ ಹಾಗೂ ಅವರ ಸ್ಮಾರಕವನ್ನ ಪ್ರತಿಷ್ಟಾಪಿಸಬೇಕು. ಜೊತೆಗೆ ರಾಜ್ಯದ ಪ್ರತಿಯೊಂದು ಜಿಲ್ಲಾ ಕೇಂದ್ರ ಹಾಗೂ ತಾಲೂಕು ಕೇಂದ್ರದಲ್ಲಿ ಪುನೀತ್ ಸಾಧನೆ ಸಾರುವ ಮ್ಯೂಸಿಯಂ, ಚಿಕ್ಕಮಕ್ಕಳಿಗೆ ನೃತ್ಯ ಹಾಗೂ ಸಂಗೀತ ಶಾಲೆಯನ್ನು ಸ್ಥಾಪಿಸಬೇಕು ಎಂದು ಮನವಿ ಮಾಡಿಕೊಂಡರು.




