ಉತ್ತರ ಕನ್ನಡ ಜಿಲ್ಲೆಯ ಪ್ರವಾಹ ಸೂಚನೆ ನೀಡಲು ತಂತ್ರಾಂಶ ಅಭಿವೃದ್ಧಿ: ಡಿಸಿ ಮುಲ್ಲೈ ಮುಗಿಲನ್

ಕಾರವಾರ : ಉತ್ತರ ಕನ್ನಡ ಜಿಲ್ಲೆಯಲ್ಲಿ ಪದೇ ಪದೇ ಪ್ರವಾಹ ಆಗುತ್ತಿದೆ. ಎಲ್ಲೋ ಮಳೆಯಾದರೆ ಮತ್ತೊಂದೆಡೆ ಪ್ರವಾಹ ಆಗುತ್ತದೆ. ಈ ಕಾರಣದಿಂದ ಪ್ರವಾಹದಂಥ ಪ್ರಾಕೃತಿಕ ವಿಕೋಪಗಳನ್ನು ಮುಂಚಿತವಾಗಿ ತಿಳಿಯಲು ಹಾಗೂ ಜನರಿಗೆ ಸೂಚನೆ ನೀಡಲು ತಂತ್ರಾಂಶವೊಂದನ್ನು ಅಭಿವೃದ್ಧಿ ಪಡಿಸಲು ಚಿಂತಿಸಲಾಗಿದೆ. ಈ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಪ್ರಾಕೃತಿಕ ವಿಕೋಪಗಳ ನಿರ್ವಹಣೆಗೆ ಕೇಂದ್ರೀಕೃತ ವ್ಯವಸ್ಥೆಯೊಂದನ್ನು ಜಾರಿಗೊಳಿಸಲಾಗುವುದು.ನೆರೆ ಪೀಡಿತ ಪ್ರದೇಶಗಳನ್ನು ಗುರುತಿಸಿ,ಯಾವ ಕಾರಣಗಳಿಂದ ಪ್ರವಾಹ ಆಗಲಿದೆ, ಎಷ್ಟು ಸಮಯದಲ್ಲಿ ಹಾಗೂ ಯಾವ ಮಟ್ಟದಲ್ಲಿ ಆಗಲಿದೆ ಎಂದು ಸಾಕಷ್ಟು ಮೊದಲೇ ವೈಜ್ಞಾನಿಕ ಕ್ರಮದಿಂದ ತಿಳಿಯಲು ಸಾಧ್ಯವಿದೆ. ಜೊತೆಗೆ ಆ ಪ್ರದೇಶಗಳ ಜನರನ್ನು ಸುರಕ್ಷಿತವಾಗಿ ತೆರವು ಮಾಡಬಹುದು. ಮುಂದಿನ ಮಳೆಗಾಲಕ್ಕೂ ಮೊದಲು ಈ ಯೋಜನೆಯನ್ನು ಜಾರಿಗೆ ತರಲು ಪ್ರಯತ್ನಿಸಲಾಗುವುದು.ಇದಕ್ಕಾಗಿ ಜಿಲ್ಲಾ ಕಛೇರಿಯಲ್ಲಿ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ ಎಂದರು.
ಇನ್ನು ಜೊಯಿಡಾ ಭಾಗಕ್ಕೆ ತೆರಳುವ ಅಣಶಿ ಘಟ್ಟದಲ್ಲಿ ಹೆದ್ದಾರಿಯಿಂದ ಮಣ್ಣನ್ನು ಸ್ಥಳೀಯರು ತೆರವು ಮಾಡಿದ್ದಾರೆ.ಅವರ ಶ್ರಮದಾನ ಶ್ಲಾಘನೀಯ. ಆ ಭಾಗದಲ್ಲಿ ಮಣ್ಣಿನ ಧಾರಣಾ ಸಾಮರ್ಥ್ಯದ ಬಗ್ಗೆ ಅಧ್ಯಯನ ಆಗಬೇಕಿದೆ. ಹುಬ್ಬಳ್ಳಿಯ ಬಿ.ವಿ.ಬಿ ಎಂಜಿನಿಯರಿಂಗ್ ಕಾಲೇಜು ಮತ್ತು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ತಜ್ಞರ ತಂಡಗಳು ಪರಿಶೀಲನೆ ಮಾಡಿವೆ.ನಾಡಿದ್ದು ಅವರು ವರದಿಯನ್ನು ಸಲ್ಲಿಸಲಿದ್ದಾರೆ ಎಂದು ತಿಳಿಸಿದರು.
ಕಾರವಾರದಲ್ಲಿ ಅತೀ ಹೆಚ್ಚು ಲಸಿಕೆ
ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣದಲ್ಲಿದೆ. ಪ್ರವಾಸಿ ತಾಣಗಳು,ಸಾರ್ವಜನಿಕರು ಹೆಚ್ಚು ಬಂದು ಹೋಗುವ ಸ್ಥಳಗಳಲ್ಲಿ ಒಂದು ವಾರ,10 ದಿನಗಳಿಗೊಮ್ಮೆ ಸ್ಥಳೀಯರ ಗಂಟಲು ದ್ರವದ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಜಿಲ್ಲೆಯಲ್ಲಿ ಸದ್ಯ ಸೋಂಕು ದೃಢಪಡುವ ಪ್ರಮಾಣವು ಶೇ.1 ಕ್ಕಿಂತ ಕಡಿಮೆಯಿದೆ ಎಂದು ತಿಳಿಸಿದರು.
ಲಸಿಕಾ ಅಭಿಯಾನಕ್ಕೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಜಿಲ್ಲೆಯಲ್ಲಿ 10.24 ಲಕ್ಷ ಜನರಿಗೆ ಲಸಿಕಾ ಗುರಿ ಹೊಂದಲಾಗಿದೆ. ಈಗಾಗಲೇ ಸುಮಾರು 6 ಲಕ್ಷ ಮಂದಿ ಕನಿಷ್ಠ ಒಂದು ಡೋಸ್ ಪಡೆದುಕೊಂಡಿದ್ದಾರೆ. ಕಾರವಾರ ತಾಲೂಕಿನಲ್ಲಿ ಶೇ. 91ರಷ್ಟು ಪ್ರಗತಿಯಾಗಿದೆ ಎಂದರು.




