ಜನರ ಗಮನ ಬೇರೆಡೆ ಸೆಳೆದು ಹಣ ದೋಚುತ್ತಿದ್ದ ಆರೋಪಿಗಳ ಬಂಧನ

ದಾವಣಗೆರೆ: ಜನರ ಗಮನ ಬೇರೆಡೆ ಸೆಳೆದು ಹಣ ದೋಚುತ್ತಿದ್ದ ಖತರ್ನಾಕ್ ಗ್ಯಾಂಗ್ ಪತ್ತೆ ಹಚ್ಚಿರುವ ದಾವಣಗೆರೆ ಡಿಸಿಆರ್ ಬಿ ಘಟಕದ ಪೊಲೀಸರು, 21 ಲಕ್ಷ ರೂಪಾಯಿ ವಶಪಡಿಸಿಕೊಂಡಿದ್ದಾರೆ.
ಚೆನ್ನೈ ಮೂಲದ ನರೇಶ್ ಹಾಗೂ ಬೆಳಗಾವಿ ಜಿಲ್ಲೆಯ ಲೋಂಡಾ ಮೂಲದ ಮಹಮದ್ ಹುಸೇನ್ ಅಲಿಯಾಸ್ ಮುಲ್ಲಾ ಎಂಬುವವರನ್ನು ದಾವಣಗೆರೆಯ ಹೈಸ್ಕೂಲ್ ಮೈದಾನದಲ್ಲಿ ಸೆರೆ ಹಿಡಿಯಲಾಗಿದೆ.
ನಗರದ ವಿದ್ಯಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಎರಡು ಪ್ರಕರಣದಲ್ಲಿ ಆರು ಲಕ್ಷ ರೂಪಾಯಿ, ಹರಿಹರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಎರಡು ಲಕ್ಷ ರೂಪಾಯಿ, ಹಾವೇರಿ ಜಿಲ್ಲೆಯ ಹಾನಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಒಂದು ಪ್ರಕರಣದಲ್ಲಿ 13 ಲಕ್ಷ ರೂಪಾಯಿ ಸೇರಿದಂತೆ ಒಟ್ಟು 21 ಲಕ್ಷ ರೂಪಾಯಿಯನ್ನು ಜಫ್ತಿ ಮಾಡಲಾಗಿದೆ. ಇನ್ನು ಈ ಗ್ಯಾಂಗ್ ನ ಕೆಲವರು ತಲೆಮರೆಸಿಕೊಂಡಿದ್ದು, ಪತ್ತೆಗೆ ಕಾರ್ಯಾಚರಣೆ ಮುಂದುವರಿದಿದೆ ಎಂದು ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ. ಬಿ. ರಿಷ್ಯಂತ್ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಗ್ಯಾಂಗ್ ವೃದ್ದರು, ರಸ್ತೆ ಮೇಲೆ ನೋಟು ಎಸೆದು ಗಮನ ಬೇರೆಡೆ ಸೆಳೆದು ಹಣ ದೋಚುತ್ತಿದ್ದರು. ಇದೇ ರೀತಿಯಲ್ಲಿ ಬೇರೆ ಕಡೆಗಳಲ್ಲಿ ಮಾಡಿದ್ದಾರೋ ಇಲ್ಲವೋ ಎಂಬ ಬಗ್ಗೆ ತನಿಖೆ ನಡೆಸಲಾಗುವುದು. ಜನರು ಈ ರೀತಿ ಮೋಸ ಹೋಗಬಾರದು ಎಂದು ಹೇಳಿದರು.
