ಮತ್ತೆ ಕೋವಿಡ್ ನಿಯಮ ಉಲ್ಲಂಘಿಸಿದ ರೇಣುಕಾಚಾರ್ಯ…!

ದಾವಣಗೆರೆ: ಸಿಎಂ ರಾಜಕೀಯ ಕಾರ್ಯದರ್ಶಿ ಎಂ. ಪಿ. ರೇಣುಕಾಚಾರ್ಯ ಮತ್ತೆ ಕೋವಿಡ್ ನಿಯಮಾವಳಿ ಉಲ್ಲಂಘಿಸಿರುವ ಘಟನೆ ಹೊನ್ನಾಳಿ ತಾಲೂಕಿನ ಹೊಸಮಳಲಿ ಗ್ರಾಮದಲ್ಲಿ ನಡೆದಿದೆ.
ಕೆಲ ದಿನಗಳ ಹಿಂದೆಯಷ್ಟೇ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಪಾಲ್ಗೊಂಡು ಬಿಜೆಪಿ ಪಕ್ಷದ ಆಕ್ರೋಶಕ್ಕೆ ಗುರಿಯಾಗಿದ್ದ ರೇಣುಕಾಚಾರ್ಯ ಬಳಿಕ ಕ್ಷಮೆಯಾಚಿಸಿದ್ದರು. ಆದ್ರೆ ಮತ್ತೆ ಈಗ ಕೋವಿಡ್ ಹೆಚ್ಚಳವಾಗುತ್ತಿದ್ದರೂ ಲೆಕ್ಕಿಸದೇ ಬಿಂದಾಸ್ ಆಗಿ ಪಾಲ್ಗೊಳ್ಳುವ ಮೂಲಕ ಜನರ ಆಕ್ರೋಶಕ್ಕೆ ಗುರಿಯಾಗಿದ್ದಾರೆ.
ಕಳೆದೊಂದು ವಾರದಿಂದ ಹೊನ್ನಾಳಿ ತಾಲೂಕಿನಲ್ಲಿ ಕೊರೊನಾ ಪ್ರಕರಣಗಳು ಜಾಸ್ತಿಯಾಗುತ್ತಿವೆ. ಶಾಲಾ ಮಕ್ಕಳಿಗೂ ವೈರಸ್ ಹರಡುತ್ತಿದೆ. ಇಂಥ ವೇಳೆಯಲ್ಲಿ ಜವಾಬ್ದಾರಿಯುತ ಸ್ಥಾನದಲ್ಲಿರುವ ಶಾಸಕರೇ ಈ ರೀತಿ ವರ್ತಿಸಿದರೆ ಹೇಗೆ ಎಂದು ಜನಸಾಮಾನ್ಯರು ಪ್ರಶ್ನಿಸುತ್ತಿದ್ದಾರೆ.
ಪುನೀತ್ ರಾಜಕುಮಾರ್ ಸ್ಮರಣಾರ್ಥ ಹೊಸ ಮಳಲಿ ಗ್ರಾಮದಲ್ಲಿ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿ ಆಯೋಜಿಸಲಾಗಿತ್ತು. ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ರೇಣುಕಾಚಾರ್ಯ ಮಾಸ್ಕ್ ಧರಿಸಿರಲಿಲ್ಲ. ನೆರೆದಿದ್ದವರಾಗಲೀ, ಕಾರ್ಯಕ್ರಮ ಸಂಘಟಕರು ಕೋವಿಡ್ ನಿಯಮಾವಳಿ ಪಾಲಿಸಿರಲಿಲ್ಲ. ರೇಣುಕಾಚಾರ್ಯ ಬಂದಾಗ ಸಾಮಾಜಿಕ ಅಂತರವೂ ಮಾಯವಾಗಿತ್ತು. ತಾಲೂಕು ಆಡಳಿತ, ಜಿಲ್ಲಾಡಳಿತ ಮೌನ ವಹಿಸಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.




