ಜಾತ್ರೆ, ಉತ್ಸವಕ್ಕೆ ಅನುಮತಿ ನೀಡಲು ಆಗ್ರಹಿಸಿ ಪ್ರತಿಭಟನೆ

ಧಾರವಾಡ: ಕೊರೊನಾ ಮಾರ್ಗಸೂಚಿ ಮುಂದಿಟ್ಟುಕೊಂಡು ಜಾತ್ರೆ,ಯಾತ್ರೆ ಹಾಗೂ ಉತ್ಸವಕ್ಕೆ ನಿರ್ಬಂಧ ಹೇರಿರುವುದನ್ನು ಖಂಡಿಸಿ ಹಾಗೂ ಅನುಮತಿ ನೀಡಲು ಅಗ್ರಹಿಸಿ, ಧಾರವಾಡದಲ್ಲಿ ಶ್ರೀ ರಾಮ ಸೇನೆಯ ಕಾರ್ಯಕರ್ತರು ಬೀದಿಗೆ ಇಳಿದು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಶ್ರೀ ರಾಮ ಸೇನೆ ಧಾರವಾಡ ಘಟಕದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ತಮ್ಮ ಆಕ್ರೋಶ ಹೊರಹಾಕಿದರು.
ಈಗಾಗಲೇ ಕೊರೊನಾ ಮಾಹಾಮಾರಿ ವೈರಸ್ನ ಮಾರ್ಗ ಸೂಚಿಗಳನ್ನು ಬಹುತೇಕ ಕ್ಷೇತ್ರಗಳಲ್ಲಿ ಸಡಿಲಿಕೆ ಮಾಡಲಾಗಿದೆ. ಬಾರ್ ಹಾಗೂ ರೆಸ್ಟೋರೆಂಟ್ ಸೇರಿದಂತೆ ವಾಣಿಜ್ಯ ಚಟುವಟಿಕೆ ಕ್ಷೇತ್ರದಲ್ಲಿ ಕೊರೊನಾ ಮಾರ್ಗ ಸೂಚಿಯನ್ನು ಸಡಿಲಿಗೆ ಮಾಡಲಾಗಿದೆ. ಆದರೆ ಧಾರ್ಮಿಕ ಕೇಂದ್ರ ಜಾತ್ರೆ, ಉತ್ಸವ ಹಾಗೂ ಯಾತ್ರೆಗಳಿಗೆ ನಿರ್ಬಂಧ ಹಾಕಲಾಗಿದ್ದು, ಇದು ಎಷ್ಟರಮಟ್ಟಿಗೆ ಸರಿ ಇದೆ ಎಂಬುವುದನ್ನು ರಾಜ್ಯದ ಮುಖ್ಯಮಂತ್ರಿಗಳು ಯೋಚನೆ ಮಾಡಬೇಕು.
ಜಾತ್ರೆ, ಉತ್ಸವ ಹಾಗೂ ಯಾತ್ರೆಗಳ ನಂಬಿಕೊಂಡು ನೂರಾರು ಕುಟುಂಬಗಳು ಜೀವನ ನಡೆಸುತ್ತಿವೆ. ಆದರೆ ಕಳೆದ ಎರಡ್ಮೂರು ವರ್ಷಗಳಿಂದ ಜಾತ್ರೆ ಉತ್ಸವಗಳು ನಡೆಯದೆ. ಈ ಕುಟುಂಬಗಳು ಈಗ ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿಕೊಂಡಿವೆ. ಹಾಗಾಗಿ ಕೂಡಲೇ ರಾಜ್ಯ ಸರ್ಕಾರ ಧಾರ್ಮಿಕ ಕೇಂದ್ರಗಳ ಜಾತ್ರೆ ಉತ್ಸವ ಹಾಗೂ ಯಾತ್ರೆಗಳಿಗೂ ಕೊರೊನಾ ಮಾರ್ಗಸೂಚಿ ಸಡಿಲಿಕೆ ಮಾಡಬೇಕು ಎಂದು ಅಗ್ರಹಿಸಿದರು.
ಒಂದು ವೇಳೆ ರಾಜ್ಯ ಸರ್ಕಾರ ಧಾರ್ಮಿಕ ಕೇಂದ್ರಗಳ ಜಾತ್ರೆ ಹಾಗೂ ಉತ್ಸವಕ್ಕೆ ಅನುಮತಿ ನೀಡದಿದ್ದಲ್ಲಿ, ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟಕ್ಕೆ ನಾವು ಮುಂದಾಗುತ್ತೇವೆ ಎಂದು ಎಚ್ಚರಿಕೆ ನೀಡಿ, ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಿದರು.




