ಜಿಲ್ಲಾ ಸುದ್ದಿಬೆಳಗಾವಿ

ಕೊರೊನಾಗೆ ಡೋಂಟ್‌ ಕೇರ್: ಹೂವು ಹಣ್ಣು ಖರೀದಿಗೆ ಮುಗಿಬಿದ್ದ ಕುಂದಾನಗರಿ ಜನರು:

ಬೆಳಗಾವಿ : ಗಣೇಶ ಚತುರ್ಥಿ ಮುನ್ನಾ ದಿನವಾದ ಗುರುವಾರ ಜನರು, ವ್ಯಾಪಾಸ್ಥರು ನಗರದ ಹೂವು ಮಾರುಕಟ್ಟೆಗೆ ಹೂವು ಖರೀದಿಗೆ ಮುಗಿಬಿದ್ದ ಪರಿಣಾಮ ಜನಜಂಗುಳಿ ಉಂಟಾಗಿತ್ತು. ಬೆಳಗ್ಗೆ 6 ಗಂಟೆಗೆ ವ್ಯಾಪಾರಸ್ಥರು, ಸಾರ್ವಜನಿಕರು ಮಾರುಕಟ್ಟೆಯತ್ತ ದೌಡಾಯಿಸಿದರು. ಮಧ್ಯಾಹ್ನ 12 ಗಂಟೆಯವರೆಗೂ ಖರೀದಿಯಲ್ಲಿ ತೊಡಗಿದ್ದರು. ಖರೀದಿಗೆ ಬಂದ ಜನರು, ರೈತರು ಹಾಗೂ ವ್ಯಾಪಾತಸ್ಥರು ರಸ್ತೆ ಬದಿಗೆ ವಾಹನಗಳನ್ನು ನಿಲ್ಲಿಸಿದ್ದರಿಂದ ಬೆಳಗ್ಗೆ 7 ರಿಂದ ಒಂದು ತಾಸು ರಸ್ತೆ ಸಂಚಾರಕ್ಕೆ ತೀವ್ರ ಅಡಚಣೆಯಾಗಿತ್ತು.

ಹೂವು ಬೆಳಗಾರರಿಗೆ ಸಿಹಿ ಕಹಿ

ಕಳೆದ ಎರಡು ವರ್ಷಗಳಿಂದ ಹಬ್ಬದ ಸೀಸನ್ ನಲ್ಲಿ ಲಾಕ್ ಡೌನ್ ಪರಿಣಾಮ ವ್ಯಾಪಾರವಿಲ್ಲದೆ ಹೂವು ಬೆಳೆಗಾರರು ತೀವ್ರ ಸಂಕಷ್ಟ ಎದುರಿಸಿದ್ದರು. ಆತಂಕದಲ್ಲೇ ಹೂವು ಕೃಷಿ ಮಾಡಿದ್ದ ರೈತರಿಗೆ ಈ ಬಾರಿ ಅದೃಷ್ಟ ಕೈಹಿಡಿದಿದೆ. ಶ್ರಾವಣ ಮಾಸದ ಸರಣಿ ಹಬ್ಬದ ಸೀಸನ್ ನಲ್ಲಿ ಹೂಗಳಿಗೆ ಸಾಕಷ್ಟು ಬೇಡಿಕೆ ಬಂದಿದೆ.

ಚೆಂಡು ಹೂವು ಬೆಳೆಗಾರರಿಗೆ ಕಹಿ – ಗುಲಾಬಿ, ಸೇವಂತಿಗೆ ರೈತರಿಗೆ ಸಿಹಿ: ಎರಡು ವರ್ಷಗಳ ಬಳಿಕ ಹಬ್ಬಗಳ ಆಚರಣೆ ಆರಂಭವಾಗಿದ್ದರೂ ಚೆಂಡು ಹೂವು ಬೆಲೆಯಲ್ಲಿ ಏರಿಕೆ ಕಾಣದೇ ಬೆಳೆಗಾರರು ನಿರಾಸೆ ಹೊಂದಿದ್ದಾರೆ. ಕೆಜಿಗೆ ಚೆಂಡು ಹೂವು ಬೆಲೆ 50-60 ರೂ. ದಾಟುತ್ತಿಲ್ಲ. ಹೂವು ಬೆಳೆಗಾರರು ದರ ಕುಸಿತದಿಂದ ನಿರಾಸೆಗೆ ಒಳಗಾಗಿದ್ದಾರೆ.

ಇನ್ನು ಸೇವಂತಿಗೆ, ಗುಲಾಬಿ ಹೂವಿಗೆ ಉತ್ತಮ ಬೇಡಿಕೆ ಬಂದಿದ್ದು ರೈತರು ಖುಷ್ ಆಗಿದ್ದಾರೆ. ಗುಲಾಬಿ ಹೂವು ಕೆಜಿಗೆ 200-300, ಸೇವಂತಿಗೆ 80 ರಿಂದ 200 ರೂ.ವರೆಗೆ ಮಾರಾಟವಾಗುತ್ತಿವೆ.

ಕೊರೊನಾ ಮರೆತು ಮುಗಿಬಿದ್ದ ಜನ: ದೇಶದಲ್ಲಿ ಕೊರೊನಾ ಮೂರನೇ ಅಲೆಯ ಆತಂಕ ಇದ್ದರೂ ಜನರು ಲೆಕ್ಕಿಸದೇ ಖರೀದಿಯಲ್ಲಿ ತೊಡಗಿದ್ದರು. ಮಾಸ್ಕ್, ಸಾಮಾಜಿಕ ಅಂತರ ಲೆಕ್ಕವೇ ಇರಲಿಲ್ಲ. ಜನಜಂಗುಳಿ ನಿರ್ಮಾಣವಾಗಿತ್ತು. ಜನರು ಕೊರೊನಾ ಇರುವುದನ್ನೆ ಮರೆತು ಹಬ್ಬದ ಹೂವು ಖರೀದಿಗೆ ಮುಗಿಬಿದ್ದಿದ್ದರು.

Spread the love

Related Articles

Leave a Reply

Your email address will not be published. Required fields are marked *

Back to top button