ಪಂಚಮಸಾಲಿ ಮೂರನೇ ಪೀಠ ಅಸ್ತಿತ್ವಕ್ಕೆ ಟ್ರಸ್ಟ್ ರಚನೆ ಮೈಲುಗಲ್ಲು

ಬಾಗಲಕೋಟೆ: ಲಿಂಗಾಯತ ಪಂಚಮಸಾಲಿ ಸಮಾಜದಲ್ಲಿ ಮನೆಯೊಂದು ಮೂರು ಬಾಗಿಲು ಎನ್ನುವಂತಾಗಿದ್ದು. ಮೂರನೇ ಪೀಠಕ್ಕಾಗಿ ವೀರಶೈವ ಲಿಂಗಾಯತ ಪಂಚಮಸಾಲಿ ಮಠಾಧೀಶರ ಒಕ್ಕೂಟ ಚಾರಿಟೇಬಲ್ ಟ್ರಸ್ಟ್ ನೊಂದಣಿಗೆ ಮುಂದಾಗಿದ್ದಾರೆ.
ಬಾಗಲಕೋಟೆ ಜಿಲ್ಲೆ ಜಮಖಂಡಿ ಉಪನೊಂದಣಾಧಿಕಾರಿ ಕಚೇರಿಯಲ್ಲಿ ನೊಂದಣಿಗಾಗಿ ಪರ್ಯಾಯ ಒಕ್ಕೂಟದ ಸ್ವಾಮೀಜಿಗಳು ಪ್ರಸ್ತಾವನೆ ಸಲ್ಲಿಸಿದ್ದಾರೆ. ಟ್ರಸ್ಟ್ ಅಧ್ಯಕ್ಷರಾಗಿ ಬಬಲೇಶ್ವರ ಮಹಾದೇವ ಶಿವಾಚಾರ್ಯ ಸ್ವಾಮೀಜಿ, ಉಪಾಧ್ಯಕ್ಷ ರೇವಣಸಿದ್ದ ಸ್ವಾಮೀಜಿ ಬೆಂಡವಾಡ, ಕಾರ್ಯದರ್ಶಿ ಸಂಗನ ಬಸವಸ್ವಾಮೀಜಿ ಮನಗೂಳಿ ಹಿರೇಮಠ ಜೊತೆಗೆ 25 ಜನ ಸ್ವಾಮೀಜಿಗಳನ್ನೊಳಗೊಂಡ ಟ್ರಸ್ಟ್ ನೊಂದಣಿ ಪ್ರಕ್ರಿಯೆಗೆ ಅರ್ಜಿ ಸಲ್ಲಿಸಿದ್ದಾರೆ.
ಕೆಲವೇ ದಿನದಲ್ಲಿ ಜಮಖಂಡಿ ಸಮೀಪದ ಆಲಗೂರು ರಸ್ತೆ ಬಳಿ ಮೂರನೇ ಪೀಠಕ್ಕೆ ಜಾಗ ಖರೀದಿಸುವ ಸಾಧ್ಯತೆಯಿದ್ದು, ಈಗಾಗಲೇ ಪಂಚಮಸಾಲಿ ಸಮುದಾಯದ ಎರಡು ಪೀಠಗಳಿವೆ. ಬಾಗಲಕೋಟೆ ಜಿಲ್ಲೆ ಹುನಗುಂದ ತಾಲ್ಲೂಕಿನ ಕೂಡಲ ಸಂಗಮದಲ್ಲಿ ಬಸವಜಯಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಪಂಚಮಸಾಲಿ ಲಿಂಗಾಯತ ಪೀಠವಿದೆ. ಜೊತೆಗೆ ದಾವಣಗೆರೆ ಜಿಲ್ಲೆ ಹರಿಹರದಲ್ಲಿ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠವಿದೆ. ಈ ಎರಡು ಪೀಠಗಳಿಗೆ ಮೂರನೇ ಪರ್ಯಾಯ ಪೀಠಕ್ಕೆ ಪ್ರಕ್ರಿಯೆ ಚುರುಕುಗೊಂಡಿದೆ.
ಕೂಡಲಸಂಗಮ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಪಂಚಮಸಾಲಿ ಸಮಾಜಕ್ಕೆ 2 ಮೀಸಲಾತಿ ಕೊಡಬೇಕು ಎನ್ನುವ ಹೋರಾಟ ನಡೆದಿದೆ. ಪಾದಯಾತ್ರೆ ಹೋರಾಟದಲ್ಲಿ ಸಚಿವ ಮುರುಗೇಶ್ ನಿರಾಣಿ ಪಾದಯಾತ್ರೆ ಹಿಂಪಡೆಯುವ ಹೇಳಿಕೆಯಿಂದಾಗಿ ಸಚಿವ ಮುರುಗೇಶ್ ನಿರಾಣಿ ಇರಿಸುಮುರಿಸು ಅನುಭವಿಸುವಂತಾಗಿತ್ತು. ಆಗ ಸದ್ದಿಯಿಲ್ಲದೆ ಪರ್ಯಾಯ ಮೂರನೇ ಒಕ್ಕೂಟ ರಚನೆ ಕಸರತ್ತು ನಡೆದಿವೆ.
ಮೂರನೇ ಒಕ್ಕೂಟದ ಸ್ವಾಮೀಜಿಗಳಿಗೆ ಸಚಿವ ಮುರುಗೇಶ್ ನಿರಾಣಿ ಬೆಂಬಲವಿದೆ ಎನ್ನಲಾಗುತ್ತಿದೆ. ಕೂಡಲಸಂಗಮ ಪೀಠದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ವಿರುದ್ಧವೇ ಈ ಒಕ್ಕೂಟ ರಚನೆಯಾಗುತ್ತಿದೆ ಎನ್ನುವ ಮಾತುಗಳು ಕೇಳಿಬರುತ್ತಿದೆ.




