ಅಂಕೋಲಾ – ಹುಬ್ಬಳ್ಳಿ ರೈಲ್ವೆ ಮಾರ್ಗ : ಹೈಕೋರ್ಟ್ನಲ್ಲಿ ತಡೆಯಾಜ್ಞೆ ತೆರವಾಗುವ ನಿರೀಕ್ಷೆ

ಕಾರವಾರ : ಅಂಕೋಲಾ – ಹುಬ್ಬಳ್ಳಿ ನಡುವಿನ ರೈಲ್ವೆ ಮಾರ್ಗ ಉತ್ತರ ಕನ್ನಡ ಜಿಲ್ಲೆಯ ಜನರ ಬಹುದಿನದ ಕನಸು. ಸುಮಾರು ಇಪ್ಪತ್ತು ವರ್ಷಗಳ ಹಿಂದೆಯೇ ಯೋಜನೆಗೆ ಚಾಲನೆ ನೀಡಿದರೂ ಪರಿಸರವಾದಿಗಳ ವಿರೋಧದಿಂದ ಇನ್ನೂ ಕೂಡ ಯೋಜನೆ ಜಾರಿಯಾಗಿಲ್ಲ.
ಸದ್ಯ ರಾಜ್ಯ ವನ್ಯಜೀವಿ ಮಂಡಳಿಯ ಸಮ್ಮತಿಗೆ ತಡೆಯಾಜ್ಞೆ ಇರುವುದರಿಂದ ಉತ್ತರ ಕನ್ನಡ ರೈಲ್ವೆ ಸೇವಾ ಸಮಿತಿಯವರು ಯೋಜನೆ ಜಾರಿ ಮಾಡಲು ತಡೆಯಾಜ್ಞೆ ತೆರವು ಮಾಡುವಂತೆ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.
ಅಂಕೋಲಾ – ಹುಬ್ಬಳ್ಳಿ ನಡುವಿನ ರೈಲ್ವೆ ಯೋಜನೆ ಸುಮಾರು ನೂರು ವರ್ಷದ ಕನಸಿನ ಯೋಜನೆಯಾಗಿದೆ.ಕರಾವಳಿ ಮತ್ತು ಘಟ್ಟದ ಮೇಲಿನ ಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ಈ ಯೋಜನೆಗೆ 1999 ರಲ್ಲಿ ಅಂದಿನ ಪ್ರಧಾನಿಯಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಚಾಲನೆ ನೀಡಿದ್ದರು. ಈ ಯೋಜನೆ ಜಾರಿಯಿಂದ ಪರಿಸರಕ್ಕೆ ಹಾನಿಯಾಗಲಿದೆ ಎಂದು ಕೆಲ ಪರಿಸರವಾದಿಗಳು ನ್ಯಾಯಾಲಯದ ಮೆಟ್ಟಿಲೇರಿದ್ದರಿಂದ ಯೋಜನೆ ಇನ್ನೂ ಜಾರಿಯಾಗಿರಲಿಲ್ಲ.
ಕಳೆದ ವರ್ಷ ಸಿಎಂ ಆಗಿದ್ದ ಬಿ.ಎಸ್.ಯಡಿಯೂರಪ್ಪ ನೇತೃತ್ವದ ರಾಜ್ಯ ವನ್ಯಜೀವಿ ಮಂಡಳಿ ಸಭೆಯಲ್ಲಿ ಯೋಜನೆ ಜಾರಿಗೆ ಸಮ್ಮತಿ ನೀಡಿದ್ದು, ಯೋಜನೆ ಜಾರಿಯಾಗಬೇಕು ಎಂದು ಕನಸ್ಸಿಟ್ಟುಕೊಂಡಿದ್ದ ಜಿಲ್ಲೆಯ ಜನರ ಮುಖದಲ್ಲಿ ಸಂತಸ ಮೂಡಿಸಿತ್ತು.
ಬೆಂಗಳೂರಿನ ಎನ್ಜಿಒ ಒಂದು ವನ್ಯಜೀವಿ ಮಂಡಳಿಯ ಅನುಮೋದನೆಗೆ ತಡೆಯಾಜ್ಞೆ ನೀಡುವಂತೆ ಹೈಕೋರ್ಟ್ ಮೆಟ್ಟಿಲೇರಿದ್ದು, ಹೈಕೋರ್ಟ್ ಸಹ ತಡೆಯಾಜ್ಞೆ ನೀಡಿದೆ.ಇದರಿಂದ ಜಿಲ್ಲೆಯ ಜನರಿಗೆ ನಿರಾಶೆ ಮೂಡಿಸಿದೆ.
ಇದೀಗ ಉತ್ತರ ಕನ್ನಡ ರೈಲ್ವೆ ಸೇವಾ ಸಮಿತಿಯವರು ತಡೆಯಾಜ್ಞೆ ತೆರವು ಮಾಡುವಂತೆ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಇದೇ ತಿಂಗಳ 25 ರಂದು ಈ ಬಗ್ಗೆ ತೀರ್ಪು ಬರಲಿದೆ. ತಡೆಯಾಜ್ಞೆ ತೆರವಾಗುವ ಮೂಲಕ ಹುಬ್ಬಳ್ಳಿ – ಅಂಕೋಲಾ ನಡುವಿನ ರೈಲ್ವೆ ಮಾರ್ಗದ ಯೋಜನೆ ಕಾರ್ಯರೂಪಕ್ಕೆ ಬರಲು ಒಂದು ಹೆಜ್ಜೆ ಮುಂದೆ ಹೋಗಲಿದೆ ಎನ್ನುವ ವಿಶ್ವಾಸವನ್ನು ಸಮಿತಿ ಸದಸ್ಯರು ವ್ಯಕ್ತಪಡಿಸಿದ್ದಾರೆ.
ಹುಬ್ಭಳಿ ಮತ್ತು ಅಂಕೋಲಾ ನಡುವೆ ರೈಲ್ವೆ ಯೋಜನೆಯಾದರೆ ಕರಾವಳಿ ಮತ್ತು ಘಟ್ಟದ ಮೇಲಿನ ಸಂಪರ್ಕ ಕಲ್ಪಿಸಲಿದೆ. ಬಂದರುಗಳಲ್ಲಿ ಹೊರ ದೇಶ, ಹೊರ ರಾಜ್ಯಗಳಿಂದ ಬರುವ ವಸ್ತುಗಳನ್ನು ಘಟ್ಟದ ಮೇಲಿನ ಪ್ರದೇಶಕ್ಕೆ ತೆಗೆದುಕೊಂಡು ಹೋಗುವ, ಘಟ್ಟದ ಮೇಲಿನ ವಸ್ತುಗಳನ್ನು ಕರಾವಳಿಗೆ ತಂದು ಸಮುದ್ರ ಮಾರ್ಗವಾಗಿ ಬೇರೆ ದೇಶಗಳಿಗೆ ಕಳುಹಿಸಲು ಸಹಕಾರಿಯಾಗುವುದರಿಂದ, ವ್ಯಾಪಾರ, ವ್ಯವಹಾರ ಉದ್ದೇಶದಿಂದ ಯೋಜನೆ ಬಹಳ ಮುಖ್ಯವಾಗಿತ್ತು.
ಆದರೆ ಈ ಬಗ್ಗೆ ಅರಿವೆ ಇಲ್ಲದೇ ಕೆಲವು ಪರಿಸರವಾದಿಗಳು ಬೆಂಗಳೂರಿನಲ್ಲಿ ಕುಳಿತು ಯೋಜನೆಗೆ ವಿರೋಧ ಮಾಡುತ್ತಿದ್ದು, ಇದರಿಂದ ಜಿಲ್ಲೆಯ ಅಭಿವೃದ್ದಿಗೆ ಸಹ ಹಿನ್ನೆಡೆಯಾಗಲಿದೆ.ಏನೇ ಆದರೂ ಶೀಘ್ರದಲ್ಲಿ ಯೋಜನೆ ಜಾರಿಯಾಗಬೇಕು ಎನ್ನುವುದು ಜಿಲ್ಲೆಯ ಜನರ ಅಭಿಪ್ರಾಯವಾಗಿದೆ.
ಸದ್ಯ ರಾಜ್ಯ ವನ್ಯಜೀವಿ ಮಂಡಳಿ ಅನುಮೋದನೆ ತಡೆಯಾಜ್ಞೆ ತೆರವಾದರೆ ಕೇಂದ್ರ ವನ್ಯಜೀವಿ ಮಂಡಳಿಯಿಂದ ಅನುಮೋದನೆ ಪಡೆದು ಯೋಜನೆ ಪ್ರಾರಂಭಿಸುವ ಸಿದ್ದತೆಯನ್ನು ಸಹ ಸರ್ಕಾರ ಮಾಡಿಕೊಂಡಿದೆ. ಪರಿಸರವಾದಿಗಳ ವಿರೋಧದಿಂದ ಹಲವು ವರ್ಷಗಳಿಂದ ಯೋಜನೆ ಕಾರ್ಯರೂಪಕ್ಕೆ ಬರದೇ ನಿಂತಿದ್ದು, ಇನ್ನಾದರು ಯೋಜನೆ ಜಾರಿಗೆ ಬಂದಿರುವ ಅಡ್ಡಿಗಳು ತೆರವಾಗಲಿದೆಯೇ ಎನ್ನುವುದನ್ನು ಕಾದು ನೋಡಬೇಕಾಗಿದೆ.




